ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್
ನವದೆಹಲಿ, ಏಪ್ರಿಲ್ 27: ಕೊರೊನಾವೈರಸ್ ಸೋಂಕು ಹರಡದಂತೆ ಹೋರಾಡುವವರನ್ನು ಕೊರೊನಾ ವಾರಿಯರ್ಸ್ ಎಂದು ಪ್ರಧಾನಿ ಮೋದಿ ಅವರು ಪ್ರಶಂಸಿದ್ದಾರೆ. ಕೊವಿಡ್19 ಬಗ್ಗೆ ಜನ ಜಾಗೃತಿ ಮೂಡಿಸಿ, ಸರ್ಕಾರದ ಆದೇಶ, ಕ್ರಮಗಳನ್ನು ಜನರಿಗೆ ಮುಟ್ಟಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳು ಕೂಡಾ ವಾರಿಯರ್ಸ್ ಎಂದಿದ್ದೆ. ಆದರೆ, ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ ಸಾಮೂಹಿಕವಾಗಿ ಉದ್ಯೋಗ ಕಡಿತ, ಸಂಬಳ ಕಡಿತ ಜಾರಿಗೊಳಿಸಲಾಗಿದೆ. ಈ ಕುರಿತಂತೆ ಸುಪ್ರೀಂಕೋರ್ಟಿನಲ್ಲಿಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.
ಕೊರೊನಾ ವೈರಸ್ , ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಕಾರಣ ನೀಡಿ ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಕೆಲವು ಸುದ್ದಿ ವಾಹಿನಿ, ಎಲೆಕ್ಟ್ರಾನಿಕ್ ಮಾಧ್ಯಮ, ವೆಬ್ ತಾಣಗಳನ್ನು ನಡೆಸುವ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕಡಿತ, ಸಂಬಳ ವಿಳಂಬ, ಸಂಬಳ ಕಡಿತ ನಡೆಸಲಾಗಿದೆ.
ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!
ಇದರ ವಿರುದ್ಧ ದನಿಯೆತ್ತಲಾಗದಂಥ ಪರಿಸ್ಥಿತಿಯಲ್ಲಿ ಪತ್ರಕರ್ತರಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡರೆ ಮತ್ತೆ ಉದ್ಯೋಗ ಸಿಗುವ ಸಾಧ್ಯತೆ ಕಡಿಮೆ, ಕುಟುಂಬದ ಗತಿಯೇನು ಎಂಬ ಚಿಂತೆ ಕಾಡುತ್ತಿದೆ. ಇಂಥವರ ದನಿಯಾಗಿ ಭಾರತೀಯ ಪತ್ರಕರ್ತರ ಸಂಘದ ಶೈಲೇಂದ್ರ ಕುಮಾರ್ ಪಾಂಡೆ, ದೆಹಲಿ ಕಾರ್ಯನಿರತ ಪತ್ರಕರ್ತರ ಸಂಘದ ಸುಜಾತ ಮಾಡೋಕ್,ಹಾಗೂ ಬೃಹನ್ ಮುಂಬೈ ಕಾರ್ಯ ನಿರತ ಪತ್ರಕರ್ತರ ಸಂಘದ ಇಂದ್ರಕುಮಾರ್ ಜೈನ್ ಅವರು ಸುಪ್ರೀಂಕೋರ್ಟ್ ಗೆ ಪಿಐಎಲ್ ಸಲ್ಲಿದ್ದರು.
ಮುದ್ರಣ, ಎಲೆಕ್ಟ್ರಾನಿಕ್ ಸೇರಿದಂತೆ ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ಕೊವಿಡ್ 19 ಕಾರಣ ಹೇಳಿ ಕೆಲಸದಿಂದ ತೆಗೆಯದಂತೆ ನಿರ್ದೇಶನ ನೀಡಬೇಕೆಂದು ತಮ್ಮ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. ಕಾರ್ಮಿಕ ಇಲಾಖೆಯ ಸ್ಪಷ್ಟ ಆದೇಶದ ನಡುವೆಯೂ ಉದ್ಯೋಗ ಕಡಿತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೋವಿಡ್ ನೆಪವೊಡ್ಡಿ ಯಾರನ್ನು ಕೆಲಸದಿಂದ ತೆಗೆದು ಹಾಕಬಾರದು. ಸಂಬಳವನ್ನೂ ಕಡಿತಗೊಳಿಸಬಾರದು,ಕೋವಿಡ್ ನಿಂದ ಉಂಟಾಗಿರುವ ನಷ್ಟವನ್ನು ಮಾದ್ಯಮ ಸಂಸ್ಥೆಗಳೇ ಭರಿಸಿಕೊಳ್ಳಲು ಮಾರ್ಗ ಹುಡುಕಿಕೊಳ್ಳಬೇಕು, ಈ ಬಗ್ಗೆ ಕೇಂದ್ರ ಸರ್ಕಾರದ ಉತ್ತರವನ್ನು ನಿರೀಕ್ಷಿಸಿ ನೋಟಿಸ್ ನೀಡಲಾಗಿದೆ. ಭಾರತೀಯ ದಿನಪತ್ರಿಕೆ ಸೊಸೈಟಿ, ಸುದ್ದಿ ಪ್ರಸಾರ ಸಂಸ್ಥೆ ಹಾಗೂ ಇನ್ನಿತರ ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಜಸ್ಟೀಸ್ ಎನ್. ವಿ ರಮಣ, ನ್ಯಾ ಸಂಜಯ್ ಕಿಶನ್ ಕೌಲ್ ಹಾಗೂ ಬಿ. ಆರ್ ಗವಿ ಅವರಿದ್ದ ನ್ಯಾಯಪೀಠವು ಹೇಳಿದೆ.