ಜಮ್ಮು ಜೈಲಿನಲ್ಲಿರುವ ರೊಹಿಂಗ್ಯಾಗಳನ್ನು ಗಡಿಪಾರು ಮಾಡಲು ಸುಪ್ರೀಂಕೋರ್ಟ್ ಅನುಮತಿ
ನವದೆಹಲಿ, ಏಪ್ರಿಲ್ 8: ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನದಲ್ಲಿ ಇರಿಸಲಾಗಿರುವ ರೊಹಿಂಗ್ಯಾಗಳ ಬಿಡುಗಡೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ರೊಹಿಂಗ್ಯಾ ನಿರಾಶ್ರಿತರನ್ನು ಮಯನ್ಮಾರ್ಗೆ ಮರಳಿ ಗಡಿಪಾಡು ಮಾಡಲು ಕೇಂದ್ರಾಡಳಿತ ಪ್ರದೇಶ ಸರ್ಕಾರವು ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರಿಂದ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಸ್ವತಃ ರೊಹಿಂಗ್ಯಾ ನಿರಾಶ್ರಿತರಾಗಿರುವ ಮೊಹಮ್ಮದ್ ಸಲೀಮುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನದಲ್ಲಿರುವ 150ಕ್ಕೂ ಅಧಿಕ ರೊಹಿಂಗ್ಯಾಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ನಡು ರಸ್ತೆಯಲ್ಲೇ ರಕ್ತಪಾತ, ಮ್ಯಾನ್ಮಾರ್ ಹಿಂಸಾಚಾರಕ್ಕೆ ಕೊನೆಯಿಲ್ಲ?
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ, ಮಧ್ಯಂತರ ನಿರಾಳತೆ ನೀಡಲು ಸಾಧ್ಯವಿಲ್ಲ. ಆದರೆ ಜಮ್ಮುವಿನಲ್ಲಿರುವ ರೊಹಿಂಗ್ಯಾಗಳನ್ನು ಅಂತಹ ಗಡಿಪಾರುಗಳಿಗೆ ಸಂಬಂಧಿಸಿದ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದ ಹೊರತು ಗಡಿಪಾರು ಮಾಡುವಂತಿಲ್ಲ ಎಂದೂ ಸೂಚನೆ ನೀಡಿತು.
ಜಮ್ಮುವಿನ ಬಂಧನ ಕೇಂದ್ರಗಳಲ್ಲಿರುವ ರೊಹಿಂಗ್ಯಾಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಲು ನಿರಾಕರಿಸಿದ ಪೀಠ, ಕಾನೂನಿನ ನಿಯಮಗಳಲ್ಲಿನ ಪ್ರಕ್ರಿಯೆಗಳಿಗೆ ಅನುಗುಣವಾಗಿ ಅವರನ್ನು ಅವರ ತಾಯ್ನಾಡಿಗೆ ಗಡಿಪಾರು ಮಾಡಲು ಅವಕಾಶ ನೀಡಿತು.
ಬಾಂಗ್ಲಾ ರೊಹಿಂಗ್ಯಾ ಶಿಬಿರದ ಅಗ್ನಿ ಅವಘಡದಲ್ಲಿ 15 ಮಂದಿ ಸಾವು
ಅರ್ಜಿದಾರರ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್ ಅವರು, ರೊಹಿಂಗ್ಯಾಗಳಿಗೆ ಹತ್ಯಾಕಾಂಡದ ಬೆದರಿಕೆ ಇದೆ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ್ದ ಆದೇಶದಲ್ಲಿನ ಅಂಶವನ್ನು ಉಲ್ಲೇಖಿಸಿದ್ದರು. ಮಯನ್ಮಾರ್ನಲ್ಲಿ ಈಗ ಸೇನಾ ಆಡಳಿತದ ಸರ್ಕಾರ ಅಧಿಕಾರ ನಡೆಸುತ್ತಿದೆ. ಹೀಗಾಗಿ ರೊಹಿಂಗ್ಯಾಗಳನ್ನು ಮಯನ್ಮಾರ್ಗೆ ಮರಳಿ ಕಳುಹಿಸುವುದು ಅವರ ಜೀವಕ್ಕೆ ಅಪಾಯ ನೀಡಿದಂತೆ ಎಂದು ವಾದಿಸಿದ್ದರು.
ಗೃಹ ಸಚಿವಾಲಯವು ರೊಹಿಂಗ್ಯಾಗಳಿಗೆ ನಿರಾಶ್ರಿತರೆಂದು ಗುರುತಿನ ಚೀಟಿ ನೀಡಿ, ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಮೂಲಕ ಅನೌಪಚಾರಿಕ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಬೇಕೆಂದು ಮನವಿ ಮಾಡಿದ್ದರು.