ತೈಲ ಪೂರೈಕೆಯಲ್ಲಿ ವ್ಯತ್ಯಯವಿಲ್ಲ, ಭಾರತಕ್ಕೆ ಸೌದಿ ಅಭಯ
ನವದೆಹಲಿ, ಸೆಪ್ಟೆಂಬರ್ 23: ದೇಶದಲ್ಲಿ ಇಂಧನ ಬೆಲೆ ನೂರರ ಗಡಿ ದಾಟಲಿದೆ ಎನ್ನುವ ಆತಂಕದಲ್ಲಿರುವ ಹೊತ್ತಿನಲ್ಲಿ ಸೌದಿ ಅರೇಬಿಯಾ ಭಾರತಕ್ಕೆ ಅಭಯ ನೀಡಿದೆ.
ಡ್ರೋಣ್ ದಾಳಿಯ ಬಳಿಕ ಭಾರತದೊಂದಿಗೆ ಉಂಟಾದ ಇಂಧನ ಪೂರೈಕೆ ವ್ಯತ್ಯಯವನ್ನು ಸರಿದೂಗಿಸಲು ಸೌದಿ ಬದ್ಧವಾಗಿದ್ದು, ನಾವು ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸೌದಿ ಅರೇಬಿಯಾ ಭರವಸೆ ನೀಡಿದೆ.
ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸೌದಿ ಅರೇಬಿಯಾ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಅವರು , ಸೌದಿಯು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ತಜ್ಞರಿಗೆ ಡ್ರೋಣ್ ದಾಳಿಯ ತನಿಖೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ.
ದಾಳಿಯ ಪ್ರಾಥಮಿಕ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಭಾರತದ ಇಂಧನ ಸುರಕ್ಷತೆಯ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇತರೆ ತೈಲ ಉತ್ಪಾದಕರೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Saudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತು
ಭಾರತ ಇರಾನ್ನಿಂದ ತೈಲ ಆಮದು ಸ್ಥಿಗಿತಗೊಳಿಸಿದ ಬಳಿಕ ಇದನ್ನು ತಡೆಯಲು ದಾಳಿ ಮಾಡಿತ್ತೆ ಎಂದು ಪ್ರಶ್ನಿಸಿದಾಗ , ರಾಯಭಾರಿ ದೇಶವು ಭಾರತದ ಇಂಧನ ಸುರಕ್ಷತೆಗೆ ಬದ್ಧವಾಗಿದೆ. ಇತರೆ ಮೂಲಗಳಿಂದ ಉಂಟಾಗುವ ಅಡೆತಡೆಗಳನ್ನು ಎದುರಿಸಿ ಯಾವುದೇ ಕೊರತೆ ಬಾರದಂತೆ ಮುನ್ನಡೆಯುತ್ತಿದೆ ಎಂದು ನಯವಾಗಿ ಉತ್ತರಿಸಿದರು.
ಸೌದಿ ಅರೇಬಿಯಾವು ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇಂತಹ ಆಕ್ರಮಣಗಳಿಗೆ ಬಲವಾಗಿ ತಿರುಗೇಟು ನೀಡುವ ಸಂಕಲ್ಪ ಹೊಂದಿದೆ. ದಾಳಿಯ ಬಳಿಕ ಭಾರತ ನೀಡಿದ ಬೆಂಬಲ ಮತ್ತು ಒಗ್ಗಟ್ಟನ್ನು ಸಂದರ್ಭದಲ್ಲಿ ಶ್ಲಾಘಿಸಿದರು.