ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?
ನವದೆಹಲಿ, ಜೂನ್.22: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷವು ಎರಡು ರಾಷ್ಟ್ರಗಳ ನಡುವಿನ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾ ವಾತಾವರಣವನ್ನು ಸೃಷ್ಟಿಸಿದೆ.
Recommended Video
ಉಭಯ ರಾಷ್ಟ್ರಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ. ಡ್ರ್ಯಾಗನ್ ರಾಷ್ಟ್ರವು ಭಾರತೀಯ ಗಡಿ ಪ್ರದೇಶಕ್ಕೆ ನುಗ್ಗಿರುವುದು ಉಪಗ್ರಹದಲ್ಲಿ ಸೆರೆಯಾದ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ದೂಷಿಸಿದ್ದಾರೆ.
ಚೀನಾ ಎದೆಯಲ್ಲಿ ನಡುಕ ಹುಟ್ಟಿಸುತ್ತೆ ಭಾರತದ 'ಇದೊಂದು' ನಿರ್ಧಾರ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಗಡಿ ಪ್ರದೇಶಕ್ಕೆ ಯಾರೊಬ್ಬರೂ ಅತಿಕ್ರಮವಾಗಿ ಪ್ರವೇಶಿಸಿಲ್ಲ ಎಂದು ಹೇಳುತ್ತಾರೆ. ಆದರೆ ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ಯಾಂಗಾಂಗ್ ನದಿ ಅತಿಕ್ರಮಿಸಿಕೊಂಡಿತಾ ಚೀನಾ?
ಚೀನಾದ ಯೋಧರು ಭಾರತೀಯ ಗಡಿಯನ್ನು ದಾಟಿ ಒಳಗೆ ಪ್ರವೇಶಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪ್ಯಾಂಗಾಂಗ್ ನದಿವರೆಗೂ ಚೀನಾದ ಯೋಧರು ನುಗ್ಗಿರುವುದು ಉಪಗ್ರಹದಲ್ಲಿ ಸೆರೆಯಾದ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ರಾಹುಲ್ ಗಾಂಧಿ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಕುರಿತು ಸರೆಂಡರ್ ಮೋದಿ ಎಂದ ರಾಹುಲ್ ಗಾಂಧಿ
ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಂಸದ ರಾಹುಲ್ ಗಾಂಧಿ ಕೆಂಡ ಕಾರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲ, ಸರೆಂಡರ್ ಮೋದಿ ಎಂದು ವ್ಯಂಗ್ಯವಾಡಿದ್ದಾರೆ. ಚೀನಾ ಯೋಧರಿಗೆ ದೇಶದ ಗಡಿ ಪ್ರದೇಶವನ್ನು ಪ್ರಧಾನಿಯವರು ಸರೆಂಡರ್ ಮಾಡಿದ್ದಾರೆ ಎಂದು ದೂಷಿಸಿದ್ದಾರೆ.
ಚೀನಾ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದಿದ್ದ ಮೋದಿ
ದೇಶದ ಒಂದಿಂಚು ಜಾಗವನ್ನೂ ಅತಿಕ್ರಮಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ಮೂಲಕ ಚೀನಾಗೆ ನೇರವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು. 20 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ಸರ್ವಪಕ್ಷ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸೇನೆಯು ಸಮರ್ಥವಾಗಿದೆ. ಚೀನಾ ಸೇನೆಯು ಗಡಿಯನ್ನು ನುಗ್ಗುವುದಕ್ಕೆ ಬಿಡುವುದಿಲ್ಲ. ಈ ವಿಚಾರದಲ್ಲಿ ಭಾರತೀಯ ಸೇನೆಗೆ ಪರಮಾಧಿಕಾರ ನೀಡಲಾಗುತ್ತಿದೆ. ಭಾರತವು ಚೀನಾವನ್ನು ಎದುರಿಸುವುದಕ್ಕೆ ಸಮರ್ಥವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದರು.
ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷ ಹೇಗಿತ್ತು?
ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತು. ಆದರೆ ಚೀನಾ ಸೇನೆಯಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ಮಾಹಿತಿ ನೀಡಲಿಲ್ಲ. ತಮ್ಮ ಸೈನಿಕರ ಸಾವು-ನೋವಿನ ಕುರಿತು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಒಂದು ಮೂಲದ ಪ್ರಕಾರ ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ ಕನಿಷ್ಠ 35 ಸೈನಿಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.