ಚಿಟ್ ಪಂಢ್ ಹಗರಣದಲ್ಲಿ ಜೈಲು ಸೇರಿದ ಸಚಿವ
ಕೋಲ್ಕತ್ತಾ, ಡಿ. 12 : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರ ಅವರನ್ನು ಸಿಬಿಐ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತೀವ್ರ ವಿಚಾರಣೆಯ ನಂತರ ಸಚಿವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿತು.
ತೃಣಮೂಲ ಕಾಂಗ್ರೆಸ್ ನಾಯಕ ಮಿತ್ರ ಅವರನ್ನು ಸಿಬಿಐ ಅಧಿಕಾರಿಗಳು ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದರು. ಆದರೆ ಸಚಿವರ ಉತ್ತರದಿಂದ ತೃಪ್ತಿ ಹೊಂದದ ಅಧಿಕಾರಿಗಳು ಮಿತ್ರ ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು.[ಚಿಟ್ ಫಂಡ್ ವಂಚನೆ: ಅಪರ್ಣಾ ಸೇನ್ ವಿಚಾರಣೆ]
ಶಾರದಾ ಚಿಟ್ ಫಂಡ್ ಮುಖ್ಯಸ್ಥ ಸುದೀಪ್ತ ಸೇನ್ ಪರವಾಗಿ ಮಿತ್ರ ಕೆಲ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಮೂಲಕ ತೃಣಮೂಲ ಕಾಂಗ್ರೆಸ್ ನ ಒಟ್ಟು ನಾಲ್ಕು ನಾಯಕರು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಜೈಲು ಸೇರಿದಂತಾಗಿದೆ. ರಾಜ್ಯ ಸಭಾ ಸದಸ್ಯ ಕುನಾಲ್ ಘೋಷ್, ಶ್ರೂನ್ಜೋಯ್ ಬೋಸ್, ಮಾಜಿ ಪೊಲೀಸ್ ಅಧಿಕಾರಿ ರಜತ್ ಮಜುಂದಾರ್ ಅವರನ್ನು ಹಗರಣ ಸಂಬಂಧ ಸಿಬಿಐ ಬಂಧಿಸಿತ್ತು.