ಉತ್ತರಾಖಂಡ್ ಮದರಸಾಗಳ ಪಠ್ಯದಲ್ಲಿ ಸಂಸ್ಕೃತ ಅಳವಡಿಕೆ
ಡೆಹ್ರಾಡೂನ್, ಜನವರಿ 11: ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಮದರಸಾಗಳ ಪಠ್ಯದಲ್ಲಿ ಸಂಸ್ಕೃತವನ್ನು ಸೇರಿಸಲು ಉತ್ತರಾಖಂಡ್ ಮದರಸಾ ಬೋರ್ಡ್ ಸಮಿತಿ ರಚಿಸಿದೆ.
ರಾಜ್ಯದ ಎಲ್ಲಾ ಮದರಸಾಗಳ ಪಠ್ಯದಲ್ಲಿ ಸಂಸ್ಕೃತ ಮತ್ತು ಕಂಪ್ಯೂಟರ್ ಸೇರಿಸಲು 6 ಸದಸ್ಯರ ಸಮಿತಿಯನ್ನು ಉತ್ತರಾಖಂಡ್ ಮದರಸಾ ಬೋರ್ಡ್ ರಚಿಸಿದೆ. ಅದರಲ್ಲಿ ಉತ್ತರಾಖಂಡ್ ಶಿಕ್ಷಣ ನಿರ್ದೇಶಕ ಮತ್ತು ತರಬೇಇಯ ಹೆಚ್ಚುವರಿ ನಿರ್ದೇಶಕರಾದ ಪುಷ್ಪಾ ಜೋಶಿಯವರು ಈ ಸಮಿತಿಯ ನೇತೃತ್ವ ವಹಿಸಿದ್ದರು.
ಪ್ರಸ್ತುತ, ರಾಜ್ಯದಲ್ಲಿರುವ 297 ನೋಂದಾಯಿತ ಮದರಸಾ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಆಯುಷ್ ಹಾಗೂ ಸಾಮಾಜಿಕ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ನೀಡಲಾಗುತ್ತದೆ. ರಾಜ್ಯದಲ್ಲಿರುವ ಎಲ್ಲಾ ಮದರಸಾಗಳಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಉತ್ತರಾಖಂಡ್ ಮದರಸಾ ವೆಲ್ ಫೇರ್ ಸೊಸೈಟಿ ಅಲ್ಲಿನ ಸರ್ಕಾರದ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರಾಖಂಡ್ ರಾಜ್ಯದಲ್ಲಿರುವ ಒಟ್ಟು 2017 ಮದರಸಾಗಳಲ್ಲಿ 25 ಸಾವಿರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
'ಮದರಸಾಗಳಲ್ಲಿ ಸಂಸ್ಕೃತ ಹಾಗೂ ಕಂಪ್ಯೂಟರ್ ವಿಜ್ಞಾನವನ್ನು ಐಚ್ಛಿಕ ಭಾಷೆಯಾಗಿ ಸೇರಿಸುವ ಪ್ರಸ್ತಾವನೆಗೆ ಮಂಡಳಿಯ ಸಾಮಾನ್ಯ ಸಮಿತಿ ಸಮ್ಮತಿ ಸೂಚಿಸಿದ್ದು, ಅನುಮೋದನೆಗಾಗಿ ಉನ್ನತ ಸಮಿತಿಗೆ ರವಾನಿಸಲಾಗಿದೆ' ಎಂದು ಯುಎಂಇಬಿನ ಡೆಪ್ಯುಟಿ ರಿಜಿಸ್ಟ್ರಾರ್ ಹಾಜಿ ಅಕ್ಲಾಕ್ ಅಹ್ಮದ್ ಅನ್ಸಾರಿ ತಿಳಿಸಿದ್ದಾರೆ.