ಕಾಶೀ ಮಠದ ನೂತನ ಪೀಠಾಧಿಪತಿಯಾಗಿ ಸಂಯಮಿಂದ್ರ ತೀರ್ಥರು
ಕಾಶೀಮಠದ ಪೀಠಾಧಿಪತಿಯಾಗಿದ್ದ ಸುಧೀಂದ್ರ ತೀರ್ಥ ಸ್ವಾಮಿಯವರ ಪರಂಧಾಮದಿಂದ ತೆರವಾಗಿರುವ ಗುರುಸ್ಥಾನದಲ್ಲಿ ಪೀಠಾಧಿಪತಿಯಾಗಿ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಜ28ರಂದು ಹರಿದ್ವಾರದ ಶ್ರೀ ವ್ಯಾಸ ಮಂದಿರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಸಮಾರಂಭದಲ್ಲಿ ಜಿ.ಎಸ್.ಬಿ ಸಮಾಜದ ಧರ್ಮಪೀಠಗಳಾದ ಗೋಕರ್ಣ ಮತ್ತು ಕೈವಲ್ಯ ಮಠಾಧೀಶರರು ಜೊತೆಗೆ ಚಿತ್ರಾಪುರ, ಹಲ್ದೀಪುರ ಮಠದ ಶ್ರೀಗಳು, ಉಡುಪಿಯ ಅಷ್ಟಮಠಗಳ ಯತಿವರ್ಯರನ್ನು ಆಹ್ವಾನಿಸಲಾಗುತ್ತಿದೆ. (ಕಾಶೀಮಠ ಸಂಸ್ಥಾನದ ಪೀಠಾಧಿಪತಿ ವಿಧಿವಶ)
ಈ ನಡುವೆ, ಕಳೆದ ಭಾನುವಾರ (ಜ 17) ಹರಿಪಾದ ಸೇರಿದ್ದ ಕಾಶೀಮಠಾಧೀಶ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನ ಪ್ರವೇಶ ಪ್ರಕ್ರಿಯೆಗಳು ಹರಿದ್ವಾರದ ಶ್ರೀವ್ಯಾಸ ಮಂದಿರದ ಆವರಣದಲ್ಲಿ ಭಾನುವಾರ ರಾತ್ರಿ ನಡೆದಿವೆ.
ಶ್ರೀಗಳವರ ಪಟ್ಟ ಶಿಷ್ಯರಾಗಿರುವ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಹಿರಿತನದಲ್ಲಿ ಸೇರಿದ್ದ ಸಹಸ್ರಾರು ಭಜಕರು, ವೈದಿಕರು, ಸಾಧು ಸಂತರ ಉಪಸ್ಥಿತಿಯಲ್ಲಿ ಗುರುಗಳ ವೃಂದಾವನ ಪ್ರಕ್ರಿಯೆಗಳು ಭಾನುವಾರ ಬೆಳಿಗ್ಗೆಯಿಂದ ಅರಂಭವಾಗಿ ಸೋಮವಾರ ಬೆಳಗಿನ ಜಾವ 4ರ ವೇಳೆಗೆ ಪ್ರಧಾನ ಕಾರ್ಯಗಳು ಪೂರ್ಣಗೊಂಡವು.
ಇದರೊಂದಿಗೆ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿ ಜತೆಗೆ ಸಮಾಜವನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ಶಿಷ್ಯವರ್ಗದ ಪಾಲಿಗೆ ಮಾತನಾಡುವ ದೇವರೆನಿಸಿದ್ದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭೌತಿಕ ಶರೀರ ದೇವಭೂಮಿಯ ವ್ಯಾಸ ಸನ್ನಿಧಿಯ ಗಂಗೆಯ ಮಡಿಲಲ್ಲಿ ಭೂಮಾತೆಯ ಒಡಲಲ್ಲಿ ಲೀನವಾದಂತಾಗಿದೆ. ಮುಂದೆ ಓದಿ..
ಸಂಯಮಿಂದ್ರ ತೀರ್ಥರ ಪೀಠಾರೋಹಣ
ಗುರುವರ್ಯರುಗಳು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಜನವರಿ 28ರಂದು ಧಾರ್ಮಿಕ ವಿದಿವಿಧಾನಗಳೊಂದಿಗೆ ಪೀಠಾರೋಹಣ ಸಮಾರಂಭ ನಡೆಯಲಿದೆ. ಶ್ರೀ ಕಾಶೀಮಠದ 21ನೇ ಪೀಠಾಧಿಪತಿಯಾಗಿ ಸಂಯಮಿಂದ್ರ ಶ್ರೀಗಳವರು ಗುರುಸ್ಥಾನವನ್ನು ಅಲಂಕರಿಸಲಿದ್ದಾರೆ.
ಮೂರು ದಿನಗಳ ವಿಶೇಷ ಸಂಕೀರ್ತನೆ
ವೃಂದಾವನಸ್ಥರಾಗಿರುವ ಹಿರಿಯ ಗುರುಗಳ ಸ್ಮರಣೆಯಲ್ಲಿ ಜ26ರಿಂದ 28ರವರೆಗೆ ಜಿಎಸ್.ಬಿ ಸಮಾಜದ ಎಲ್ಲಾ ದೇವಾಲಯಗಳು ಮತ್ತು ಮಠ ಮಂದಿರಗಳಲ್ಲಿ ವಿಶೇಷ ಸಂಕೀರ್ತನೆ, ಪೂಜಾದಿಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಎಲ್ಲೆಡೆ ಗುರುಗಳ ಗುಣಗಾನ
ಭಾನುವಾರ ನಸುಕಿನಲ್ಲಿ ಕಾಶೀ ಮಠಾಧಿಪತಿಗಳ ಮಹಾಪ್ರಸ್ಥಾನದ ಸುದ್ದಿ ಹಬ್ಬುತ್ತಿದ್ದಂತೆ ಜಿ.ಎಸ್.ಬಿ ಸಮಾಜ ಎಲ್ಲೆಡೆ ಶೋಕ ಸಾಗರದಲ್ಲಿ ಮುಳುಗಿ ಮೌನಕ್ಕೆ ಶರಣಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶದಂತೆ ಹೆಚ್ಚಿನವರು ಮನೆಗಳಲ್ಲಿ ಗುರುಗಳ ಭಾವಚಿತ್ರವನ್ನು ತುಳಸಿ ಹಾರಗಳೊಂದಿಗೆ ಅಲಂಕರಿಸಿ ತುಪ್ಪದ ದೀಪ ಬೆಳಗಿ ಸ್ತೋತ್ರ ಪಠಣ, ಸಂಕೀರ್ತನೆಯಲ್ಲಿ ತೊಡಗಿಕೊಂಡರು.
ಮಂಗಳೂರಿನ ಜಿ.ಎಸ್.ಬಿ.ದೇವಾಲಯಗಳ ಒಕ್ಕೂಟ ನೀಡಿದ ಕರೆ
ಮಂಗಳೂರಿನ ಜಿ.ಎಸ್.ಬಿ ದೇವಾಲಯಗಳ ಒಕ್ಕೂಟ ನೀಡಿದ ಕರೆಯಂತೆ ಸೋಮವಾರ ಅವಿಭಜಿತ ದಕ್ಷಿಣ ಕನ್ನಡ ಸಹಿತ ಕಾಸರಗೋಡಿನಲ್ಲಿ ಜಿ.ಎಸ್.ಬಿ. ಸಮಾಜದ ಆಡಳಿತೆಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು, ವ್ಯವಹಾರ ಸಂಘಟನೆಗಳು,ವರ್ತಕರು ತಮ್ಮ ವ್ಯವಹಾರ, ಉದ್ಯೋಗಕ್ಕೆ ರಜೆ ಮಾಡಿ ಶ್ರೀಗಳವರಿಗೆ ಗೌರವ ಸಲ್ಲಿಸಿದರು.
ಧ್ಯಾನ ಭಂಗಿಯಲ್ಲಿದ್ದ ಅಲಂಕೃತ ಗುರುಗಳ ಶರೀರ
ಕುಳಿತ ಧ್ಯಾನ ಭಂಗಿಯಲ್ಲಿದ್ದ ಅಲಂಕೃತ ಗುರುಗಳ ಶರೀರವನ್ನು ಭಾನುವಾರ ರಾತ್ರಿ 11ರ ವೇಳೆಗೆ ವ್ಯಾಸ ಮಂದಿರದ ಆವರಣದಲ್ಲಿ ಸಕಲ ಬಿರುದು ಬಾವಲಿ, ಶಂಖನಾದ., ಜಾಗಟೆ, ವಾದ್ಯ ಮೇಳಗಳ ಸಹಿತ ಮೆರವಣಿಗೆಯಲ್ಲಿ ತಂದು ವ್ಯಾಸ ಮಂದಿರದ ಹಿಂಭಾಗದಲ್ಲಿ ಸಿದ್ಧಪಡಿಸಲಾದ ಸಮಾಧಿ ಸ್ಥಳದಲ್ಲಿ ವೃಂದಾವನ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಲಾಯಿತು. ರಜತವರ್ಣದ ಜರಿಯ ಚಿತ್ತಾರಗಳಿಂದ ಕೂಡಿದ ಕಡುಕೆಂಪು ವರ್ಣದ ಪಾಮರಿಯನ್ನು ಹೊದೆಸಿ ದಂಡ, ಜಪಮಾಲೆ ಇತ್ಯಾದಿ ಸಾಂಪ್ರದಾಯಿಕ ಯತಿಪರಂಪರೆಯ ಗೌರವಾದರಗಳೊಂದಿಗೆ ಶ್ರೀಗಳವರ ದೇಹವನ್ನು ಭೂಮಡಿಲಿಗೆ ಅರ್ಪಿಸಲಾಯಿತು. ಒಟ್ಟು 13 ದಿನಗಳ ಕಾಲ ವೃಂದಾವನ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ವಿವಿಧ ಆರಾಧನಾ ಪ್ರಕ್ರಿಯೆಗಳು, ಹವನಾದಿ ಧಾರ್ಮಿಕ ಪ್ರಕ್ರಿಯೆಗಳು ವ್ಯಾಸಮಂದಿರದಲ್ಲಿ ನಡೆಯಲಿವೆ.