ಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದ ಡಿಕೆಶಿ
Recommended Video
ನವದೆಹಲಿ, ಸೆಪ್ಟೆಂಬರ್ 19: ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಫ್ಲ್ಯಾಟ್ನಲ್ಲಿ ಅಕ್ರಮ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರ ಆಪ್ತ ಆಂಜನೇಯ ಹನುಮಂತಯ್ಯ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆ ವೇಳೆ ನೀಡಿದ್ದ ಹೇಳಿಕೆಗಳ ದಾಖಲೆಯನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಬಿಡುಗಡೆ ಮಾಡಿದ್ದಾರೆ.
ದಿ. ಸುರೇಶ್ ಕುಮಾರ್ ಶರ್ಮಾ ಅವರ ಮಾಲೀಕತ್ವದ ಫ್ಲ್ಯಾಟ್ಗಳನ್ನು ಡಿ.ಕೆ. ಶಿವಕುಮಾರ್ ಪಡೆದುಕೊಂಡಿದ್ದರು.
ತಮ್ಮ ವೈಯಕ್ತಿಕ ಮಾಹಿತಿಗಳನ್ನು ಸಲ್ಲಿಸಿರುವ ಆಂಜನೇಯ, ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಅವರ ಮನೆಗಳ ಕೀಗಳನ್ನು ತಮ್ಮ ಬಳಿ ಇರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'
ಶಿವಕುಮಾರ್ ದೆಹಲಿಗೆ ಬಂದಾಗಲೆಲ್ಲಾ ಪ್ಲ್ಯಾಟ್ಗಳ ಕೀಗಳನ್ನು ತೆಗೆದುಕೊಂಡು ಅವರ ಜತೆಗೆ ತೆರಳುತ್ತಿದ್ದುದ್ದಾಗಿ ಆಂಜನೇಯ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಕೇಳಿದ ಪ್ರಶ್ನೆಗಳು ಮತ್ತು ಅದಕ್ಕೆ ಆಂಜನೇಯ ನೀಡಿದ ಉತ್ತರಗಳು ಇಲ್ಲಿವೆ.
ಜಗದೀಶ್ ಚಾಂದ್ ಗೊತ್ತೇ?
ಹೌದು. ಜಗದೀಶ್ ಚಾಂದ್, ದಿ. ಸುರೇಶ್ ಕುಮಾರ್ ಶರ್ಮಾ ಅವರ ಕಾರು ಚಾಲಕನಾಗಿದ್ದ. ಈಗ ಅವರ ಸಹೋದರ ಸುನಿಲ್ ಕುಮಾರ್ ಶರ್ಮಾ ಅವರ ಕಾರುಚಾಲಕನಾಗಿದ್ದಾನೆ.
ಜಗದೀಶ್ ಚಾಂದ್ ಮೈಸೂರಿನ ಸರ್ಕಾರಿ ಅತಿಥಿಗೃಹದ ಮಾಜಿ ಸುಪರಿಂಟೆಂಡೆಂಟ್ ಆಗಿದ್ದ ರಾಜೇಂದ್ರನ್ ಅವರೊಂದಿಗೆ ಒಡನಾಟ ಹೊಂದಿದ್ದ.
ಡಿ.ಕೆ. ಶಿವಕುಮಾರ್ ಅಥವಾ ಸುನಿಲ್ ಶರ್ಮಾ ಅವರ ಸೂಚನೆಯಂತೆ ಆತ ಹಣ ಸಾಗಿಸಲು ರಾಜೇಂದ್ರನ್ ಅವರಿಗೆ ಸಹಾಯ ಮಾಡಿರಬಹುದು. ನನಗೆ ಅದು ತಿಳಿದಿಲ್ಲ.
ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್
ಎಐಸಿಸಿ ಕಚೇರಿಗೆ ನಿಮ್ಮ ಜತೆ ಹಣ ಸಾಗಿಸಿದ್ದಾಗಿ ಚಾಂದ್ ಹೇಳಿದ್ದಾನಲ್ಲ?
ಜಗದೀಶ್ ಚಾಂದ್ ಹೇಳಿರುವಂತೆ ಚಾಂದಿನಿ ಚೌಕದಿಂದ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಗೆ ನಾನು ಹಣ ಸಾಗಿಸಿದ್ದು ಹೌದು. ಆದರೆ, ಆ ಹಣವನ್ನು ರಾಜೇಂದ್ರನ್ ತಂದಿದ್ದು. ನಾನು ರಾಜೇಂದ್ರನ್ ಅವರೊಂದಿಗೆ ಎಐಸಿಸಿ ಕಚೇರಿಗೆ ಹೋಗಿದ್ದೆ ಅಷ್ಟೇ. ಜಗದೀಶ್ ಚಾಂದ್ ಜತೆಗೆ ನಾನು ಚಾಂದಿನಿ ಚೌಕಕ್ಕೆ ಹೋಗಿರಲಿಲ್ಲ.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನ ಎಟಿಎಂ: ಸಂಬಿತ್ ಪಾತ್ರಾ ಆರೋಪ
ಎಷ್ಟು ಹಣ ಸಾಗಿಸಿದ್ದು?
ಎಐಸಿಸಿ ಕಚೇರಿಗೆ ಎಷ್ಟು ಹಣ ಸಾಗಿಸಿದ್ದು ಎಂದು ನನಗೆ ತಿಳಿದಿಲ್ಲ. ಅದು ರಾಜೇಂದ್ರನ್ ಅವರಿಗೆ ಗೊತ್ತು. ಏಕೆಂದರೆ ಅವರೇ ಪಟ್ಟಿಯನ್ನು ನಿರ್ವಹಿಸುವುದು. ನಾನು ಅವರ ಜತೆಗಿದ್ದೆಯಷ್ಟೇ. ಹಣವನ್ನು ಎಐಸಿಸಿ ಕಚೇರಿಯ ಅಕೌಂಟ್ ವಿಭಾಗಕ್ಕೆ ನೀಡಲಾಯಿತು. ನಾವು ಮಾಮೂಲಿ ಚೀಲಗಳಲ್ಲಿ ಹಣವನ್ನು ಸಾಗಿಸುತ್ತಿದ್ದೆವು.
ಹೈಕಮಾಂಡ್ ಗೆ ನಯಾಪೈಸೆ ಯಾರೂ ಕೊಟ್ಟಿಲ್ಲ: ಸಿದ್ದರಾಮಯ್ಯ
2016ರಿಂದ ವಿವಿಧ ದಿನಗಳಲ್ಲಿ ಅಜಯ್ ಖನ್ನಾ ಮತ್ತು ಅವರ ಸಹಾಯಕರಿಗೆ ಅಂದಾಜು ನಾಲ್ಕು ಕೋಟಿ ರೂ. ನೀಡಿದ್ದೇನೆ.
ಡಿ.ಕೆ. ಶಿವಕುಮಾರ್ ಜತೆಗಿನ ಒಡನಾಟ ಏನು?
ಅವರು ದೆಹಲಿಗೆ ಬಂದಾಗಲೆಲ್ಲಾ ಅವರಿಗೆ ಸಹಾಯಕರನ್ನಾಗಿ ನಮ್ಮ ಕಚೇರಿ ನನ್ನನ್ನು ನಿಯೋಜಿಸುತ್ತಿತ್ತು. ಅವರು ನನ್ನ ಹಿರಿಯರಾಗಿರುವುದರಿಂದ ಅವರನ್ನು ಹೇಳಿದ್ದನ್ನು ಪಾಲಿಸುತ್ತಿದ್ದೆ. ರಾಜೇಂದ್ರನ್ ಜತೆಗೆ ನೇರ ಸಂಬಂಧ ಏನೂ ಇಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾಗಲೆಲ್ಲಾ ನಾನು ರಾಜೇಂದ್ರನ್ ಜತೆಗೆ ಕೆಲಸ ಮಾಡುತ್ತಿದ್ದೆ.
ಆರ್ಕೆ ಪುರಂನಲ್ಲಿರುವ ಮನೆಯಲ್ಲಿ ಸುಮಾರು 15 ಲಕ್ಷ ಹಣ ಇರಬಹುದು. ಆ ಹಣ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು. ನಾನು ಅವರ ನಂಬಿಕಸ್ತ. ಹೀಗಾಗಿಯೇ ಅವರಿಗೆ ಸೇರಿದ ದೊಡ್ಡ ಮಟ್ಟದ ಹಣವನ್ನು ನಿಭಾಯಿಸುವ ಜವಾಬ್ದಾರಿ ನನಗೆ ನೀಡಲಾಗಿತ್ತು. ಅವರು ಸೂಚನೆ ಕೊಟ್ಟಾಗಲೆಲ್ಲ ಒಬ್ಬ ಸೂಕ್ತ ವ್ಯಕ್ತಿಯಿಂದ ನನಗೆ ಹಣ ಸಿಗುತ್ತಿತ್ತು.
ಹಣ ಪಡೆದ ಬಳಿಕ ಅದನ್ನು ಸಫ್ದರ್ಜಂಗ್ ಎನ್ಕ್ಲೇವ್ನಲ್ಲಿನ ಯಾವುದಾದರೂ ಫ್ಲ್ಯಾಟ್ನಲ್ಲಿ ಇರಿಸುತ್ತಿದ್ದೆ. ಬಳಿಕ ಅವುಗಳ ಕೀಯನ್ನು ಆರ್.ಕೆ. ಪುರಂನಲ್ಲಿರುವ ನನ್ನ ಮನೆಯಲ್ಲಿ ಇಡುತ್ತಿದ್ದೆ.
ಡಿ.ಕೆ. ಶಿವಕುಮಾರ್ ಅಥವಾ ಡಿ.ಕೆ. ಸುರೇಶ್ ಅವರಂತಹ ಕುಟುಂಬದ ಸದಸ್ಯರಿಂದ ಕರೆಬಂದಾಗ ಕೀ ತೆಗೆದುಕೊಮಡು ಹೋಗಿ ಯಾವುದಾದರೂ ಒಂದು ಅಪಾರ್ಟ್ಮೆಂಟ್ಅನ್ನು ತೆರೆದು ಸೂಕ್ತ ವ್ಯಕ್ತಿಗೆ ಹಣ ತಲುಪಿಸುತ್ತಿದ್ದೆ. ವರ್ಷಗಳಿಂದ ಈ ರೀತಿ ಕೆಲಸ ಮಾಡಿದ್ದೇನೆ. ನನಗೆ ಒಂದು ವರ್ಷದಿಂದೀಚೆಗೆ ಮಾತ್ರ ಅಲ್ಲಿ ನಡೆದ ವಹಿವಾಟಿನ ಬಗ್ಗೆ ತಿಳಿದಿರುವುದು. ಅದುವರೆಗೂ ರಾಜೇಂದ್ರನ್ ಅದನ್ನು ನಿಭಾಯಿಸುತ್ತಿದ್ದರು. ರಾವತ್, ಜಗದೀಶ್ ಮತ್ತು ಶೈಲೇಂದ್ರ ಹಣವನ್ನು ತಂದು ನನಗೆ ಕೊಡುತ್ತಿದ್ದರು.
ಇದರಿಂದ ಏನು ಸಿಗುತ್ತಿತ್ತು?
ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನನಗೆ ಮನೆಕಟ್ಟಲು ಸಾಧ್ಯವಾಗುವಂತೆ ಭೂಮಿ ಕೊಡುವ ಭರವಸೆ ನೀಡಿದ್ದರು. ಅಲ್ಲದೆ, ಒಮ್ಮೆ ನನ್ನ ಮಕ್ಕಳಿಗೆ 10 ಸಾವಿರ ಮತ್ತು 15 ಸಾವಿರ ಹಣ ಉಡುಗೊರೆ ನೀಡಿದ್ದರು.
ಕರ್ನಾಟಕ ಭವನದ ಕಚೇರಿಯಲ್ಲಿ ನನ್ನ ಅಧಿಕೃತ ಚೀಲವಿದೆ. ಅದರಲ್ಲಿ ನನ್ನ ಕೆಲಸಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿವೆ. ಅಲ್ಲದೆ, ಸಫ್ದರ್ಜಂಗ್ ಎನ್ಕ್ಲೇವ್ನ ಬಿ5/201 ಮನೆಯಲ್ಲಿ ಹಣ ಸಂಗ್ರಹಿಸಿ ಇಡುತ್ತಿದ್ದ ಕೊಠಡಿಯ ಕೆಲವು ನಕಲಿ ಕೀಗಳಿದ್ದವು.
ಇಷ್ಟು ದೊಡ್ಡ ಮೊತ್ತದ ಹಣವನ್ನು ಸಾಗಿಸುವುದು ಅಪಾಯಕಾರಿ ಎಂದು ನಾನು ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದೆ. ಆದರೆ, ಈ ವಿಚಾರಗಳನ್ನೆಲ್ಲಾ ಮತ್ತು ಸಂಬಂಧಿಸಿದ ಕಾನೂನು ಸಂಸ್ಥೆಗಳನ್ನು ತಾವು ನೋಡಿಕೊಳ್ಳುವುದಾಗಿ ಹೇಳಿದ್ದ ಅವರು, ಈ ಬಗ್ಗೆ ಚಿಂತಿಸುವುದು ಬೇಡ ಎಂದು ಹೇಳಿದ್ದರು.