ಕೊರೊನಾ ಲಸಿಕೆಯಿಂದ ನಪುಂಸಕತೆ ಬರುತ್ತದೆ ಎಂದ ಮುಖಂಡ: ಬಿಜೆಪಿ ತಿರುಗೇಟು
ಲಕ್ನೋ, ಜನವರಿ 4: ಕೊರೊನಾ ವೈರಸ್ ವಿರುದ್ಧ ಲಸಿಕೆ ಬಳಕೆಗೆ ಅನುಮತಿ ದೊರಕುತ್ತಿದ್ದಂತೆಯೇ ವಿರೋಧಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ 'ಲಸಿಕೆ ಸಮರ' ಆರಂಭವಾಗಿದೆ. ಇದುವರೆಗೂ ಕೊರೊನಾ ನಿಯಂತ್ರಣದ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವಿರೋಧಪಕ್ಷಗಳು, ಈಗ ಲಸಿಕೆ ವಿಷಯದಲ್ಲಿ ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಕೋವಿಡ್ ಲಸಿಕೆಯು ನಪುಂಸಕತೆಗೆ ಕಾರಣವಾಗುತ್ತದೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಶುತೋಷ್ ಸಿನ್ಹಾ ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ಲಸಿಕೆಯು ಬಿಜೆಪಿ ಲಸಿಕೆ. ಹೀಗಾಗಿ ತಾವು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದರು. ಅದರ ಬೆನ್ನಲ್ಲೇ ಅವರ ಪಕ್ಷದ ಮತ್ತೊಬ್ಬ ಮುಖಂಡ ವಿಚಿತ್ರ ಹೇಳಿಕೆ ನೀಡಿದ್ದಾರೆ.
'ಅದು ಬಿಜೆಪಿಯ ಕೊರೊನಾ ಲಸಿಕೆ': ವೈದ್ಯರ, ವಿಜ್ಞಾನಿಗಳ ಶ್ರಮವನ್ನು ಅಣಕವಾಡಿದ ಮಾಜಿ ಸಿಎಂ
'ಗೌರವಾನ್ವಿತ ಅಖಿಲೇಶ್ ಯಾದವ್ ಅವರು ಇದನ್ನು ಹೇಳಿದ್ದಾರೆ ಎಂದರೆ ಅದರಲ್ಲಿ ಗಂಭೀರವಾಗಿರುವುದು ಏನಾದರೂ ಇರುತ್ತದೆ. ನಮಗೆ ಸರ್ಕಾರದ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅವರು ಇದನ್ನು ವಾಸ್ತವಾಂಶಗಳ ಆಧಾರದಲ್ಲಿ ಹೇಳಿದ್ದಾರೆ. ಅವರು ಸ್ವತಃ ಲಸಿಕೆ ತೆಗೆದುಕೊಳ್ಳದಿದ್ದರೆ ಕೋವಿಡ್ ಲಸಿಕೆಯಲ್ಲಿ ಏನೋ ಇದೆ ಎಂದರ್ಥ. ಅದರಿಂದ ಹಾನಿಯಾಗಬಹುದು. ನಪುಂಸಕತೆ ಉಂಟಾಗಬಹುದು, ಏನು ಬೇಕಾದರೂ ಆಗಬಹುದು' ಎಂದು ಮಿರ್ಜಾಪುರದ ಎಂಎಲ್ಸಿ ಅಶುತೋಷ್ ಸಿನ್ಹಾ ಹೇಳಿದ್ದಾರೆ. ಮುಂದೆ ಓದಿ.
ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್
ಅಖಿಲೇಶ್ ಹೇಳಿದ ಮೇಲೆ ಮುಗಿಯಿತು!
'ಈ ಮಾತನ್ನು ಅಖಿಲೇಶ್ ಯಾದವ್ ಅವರು ಹೇಳುತ್ತಿದ್ದಾರೆ ಎಂದ ಮೇಲೆ ರಾಜ್ಯದ ಯಾರೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳಬಾರದು' ಎಂದು ಅಶೊತೋಷ್ ಸಲಹೆ ನೀಡಿದ್ದಾರೆ. ಬಿಜೆಪಿ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದಾಗ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ. ಬಿಜೆಪಿ ಲಸಿಕೆಯನ್ನು ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಖಿಲೇಶ್ ಹೇಳಿದ್ದರು.
ಶೇ 110ರಷ್ಟು ಸುರಕ್ಷಿತ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯ ವಿ.ಜಿ. ಸೋಮಾನಿ, ಸುರಕ್ಷತೆಯ ಆತಂಕವಿದ್ದರೆ ಡಿಜಿಸಿಐ ಯಾವ ಲಸಿಕೆಗೂ ಅನುಮತಿ ನೀಡುವುದಿಲ್ಲ. ಲಸಿಕೆ ಪಡೆದ ಬಳಿಕ ಸಣ್ಣಪುಟ್ಟ ಪರಿಣಾಮ ಕಾಣಿಸಬಹುದು. ತೋಳುಗಳಲ್ಲಿ ನೋವು ಅಥವಾ ಜ್ವರ, ಸಣ್ಣ ಅಲರ್ಜಿ ಬರಬಹುದು. ಆದರೆ ನಪುಂಸಕತೆಯಂತಹ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಶುದ್ಧ ಸುಳ್ಳು. ಇದು ಅಸಂಬದ್ಧ. ಲಸಿಕೆಗಳು ಶೇ 110ರಷ್ಟು ಸುರಕ್ಷಿತ ಎಂದಿದ್ದಾರೆ.
ಕೊರೊನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದಿದ್ದ ಅಖಿಲೇಶ್ಗೆ ಓಮರ್ ಅಬ್ದುಲ್ಲಾ ತಿರುಗೇಟುಆತುರದ ನಿರ್ಧಾರ
ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಅನುಮತಿ ನೀಡಲಾಗಿದೆ. ಕೋವಿಶೀಲ್ಡ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಅನುಮತಿ ಪಡೆಯುತ್ತಿದೆ. ಆದರೆ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಿರುವುದು ಆತುರದ ನಿರ್ಧಾರ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕಿಸಿದ್ದಾರೆ. ಸಮಗ್ರ ಪ್ರಯೋಗ ಪೂರ್ಣಗೊಳ್ಳುವವರೆಗೂ ಈ ಲಸಿಕೆಯನ್ನು ಜನರಿಗೆ ನೀಡುವುದು ಅಪಾಯಕಾರಿ ಎಂದು ಹೇಳಿದ್ದಾರೆ.
ಅನುಮೋದನೆ ಅಪಾಯಕಾರಿ
'ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗ ಇನ್ನೂ ನಡೆದಿಲ್ಲ. ಈಗ ಅನುಮೋದನೆ ನೀಡಿರುವುದು ತರಾತುರಿಯ ಕ್ರಮ ಮತ್ತು ಅಪಾಯಕಾರಿ. ಪ್ರಯೋಗಗಳು ಪೂರ್ಣಗೊಂಡು ನಿಖರ ದತ್ತಾಂಶ ಸಿಗುವವರೆಗೂ ಳ ಲಸಿಕೆಯ ಬಳಕೆಯನ್ನು ತಡೆಯಬೇಕು' ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
Recommended Video
ವಿರೋಧಿಸುವವರು ಲಸಿಕೆ ಶಂಕಿತರು
'ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಭಾರತದ್ದು ಎನ್ನುವ ಯಾವುದರ ಬಗ್ಗೆಯೂ ಹೆಮ್ಮೆ ಹೊಂದಿಲ್ಲ. ವಿರೋಧ ಪಕ್ಷಗಳು ಲಸಿಕೆಯ ಬಗ್ಗೆ ಹೇಳುವ ಸುಳ್ಳುಗಳನ್ನು ಕೆಲವು ಸ್ಥಾಪಿತರ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಈಡೇರಿಸಿಕೊಳ್ಳಲು ಬಳಸಬಹುದು. ಈ ಬಗ್ಗೆ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಭಾರತದ ಜನರು ಇಂತಹ ರಾಜಕೀಯವನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಟೀಕಿಸಿದ್ದಾರೆ. ಲಸಿಕೆಗಳನ್ನು ಟೀಕಿಸಿರುವ ವಿರೋಧಪಕ್ಷಗಳ ಮುಖಂಡರನ್ನು 'ಲಸಿಕೆ ಶಂಕಿತರು' ಎಂದು ಅವರು ಲೇವಡಿ ಮಾಡಿದ್ದಾರೆ.