ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ
ನಮ್ಮ ದೇಹಕ್ಕೆ ಜೀವನಾಡಿಯಾಗಿ ರಕ್ತ ಪೂರೈಕೆ ಮಾಡುವ ಹೃದಯಕ್ಕೆ ನಾನಾ ಕಾರಣಗಳಿಂದಾಗಿ ಘಾಸಿಯಾಗುವುದು, ಬೇನೆ ಬರುವುದು ಅಸಹಜ ಸಂಗತಿಯೇನಲ್ಲ. ಆದರೆ, ಭಾರತೀಯರಿಗೆ ಇತ್ತೀಚಿನ ದಿನಗಳಲ್ಲಿ ಅದು ಶೇ.50ರಷ್ಟು ಹೆಚ್ಚಾಗಿರುವುದು ಮತ್ತು ಹೀಗಾಗುತ್ತಿರುವುದಕ್ಕೆ ಇರುವ ಕಾರಣಗಳು ನಿಜಕ್ಕೂ ಆಘಾತಕಾರಿಯಾಗಿವೆ.
ದಿ ಲಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ಅಧ್ಯಯನ ಮಾಡಿರುವ ಈ ಆಘಾತಕಾರಿ ಸಂಗತಿಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಗಿದೆ. ತನ್ನ ಅಧ್ಯಯನದಲ್ಲಿ ನಾಲ್ಕು ಸಂಗತಿಗಳನ್ನು ಗುರುತಿಸಲಾಗಿದೆ. ಅವೆಂದರೆ, ಅತಿಯಾದ ಉಪ್ಪು, ಸಕ್ಕರೆ ಬಳಕೆ, ಅತಿಯಾದ ಕೊಬ್ಬು ಸೇವನೆ ಮತ್ತು ವಾಯು ಮಾಲಿನ್ಯ.
16- 40ರ ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ! ಯಾರು ಅಪಾಯದಲ್ಲಿ?
'ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ 1990-2016' ಎಂಬ ಶೀರ್ಷಿಕೆ ಇಟ್ಟುಕೊಂಡು ನಡೆಸಿರುವ ಅಧ್ಯಯನ ತಿಳಿಸಿರುವುದೇನೆಂದರೆ, ಹೃದಯಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಸಾವು 70 ವಯಸ್ಸಿಗಿಂತ ಕೆಳಗಿನ ವ್ಯಕ್ತಿಗಳಲ್ಲಿ ಆಗುತ್ತಿದೆ. ಈ ದಿಕ್ಕಿನಲ್ಲಿ ಚಿಂತನೆ ನಡೆಸಿದರೆ ನಾವು ಈಗಲೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.
ಅತಿಯಾದ ಕೆಲಸದ ಒತ್ತಡ, ಬದಲಾದ ಜೀವನಶೈಲಿ, ಎಗ್ಗುಸಿಗ್ಗಿಲ್ಲದ ಆಹಾರ ಸಂಸ್ಕೃತಿ, ಮತ್ತು ವಿನಾಕಾರಣ ಹೃದಯದ ಬೇನೆಯಿಂದ ಸಾವು ಸಂಭವಿಸುತ್ತಿದೆ. ಇದೆಲ್ಲದರ ಜೊತೆಗೆ, ಉಪ್ಪು, ಸಕ್ಕರೆ, ಅತಿಯಾದ ಕೊಬ್ಬು ಮತ್ತು ವಾಯು ಮಾಲಿನ್ಯ ಕೂಡ ಸೇರಿಕೊಂಡು ಹೃದಯದ ಬಡಿತವೇ ಏರುಪೇರಾಗುವಂತೆ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಧ್ಯಯನದಿಂದ ಹೊರಬಂದಿರುವ ಅಂಕಿಸಂಖ್ಯೆಗಳು ಕಳವಳಕಾರಿಯಾಗಿವೆ.
ಹೃದ್ರೋಗದ ಕಳವಳಕಾಗಿ ಅಂಕಿಅಂಶ
1990ರಲ್ಲಿ ಶೇ.15ರಷ್ಟು ಇದ್ದ ಹೃದಯ ಸಂಬಂಧಿ ಸಾವುಗಳು, 2016ರಲ್ಲಿ ಶೇ.28ಕ್ಕೆ ಏರಿವೆ. 1990ರಲ್ಲಿ ಭಾರತದಲ್ಲಿ 13 ಲಕ್ಷದಷ್ಟು ಸಾವುಗಳು ಹೃದಯ ಬೇನೆಯಿಂದ ಸಂಭವಿಸಿದ್ದವು. 2016ರಲ್ಲಿ ಅದು 28 ಲಕ್ಷಕ್ಕೆ ಏರಿಕೆಯಾಗಿವೆ. ವಿಶ್ವದ ಜನಸಂಖ್ಯೆಯಲ್ಲಿ ಶೇ.18ರಷ್ಟಿರುವ ಭಾರತ, ವಿಶ್ವದಲ್ಲಿ ಸಂಭವಿಸುತ್ತಿರುವ ಹೃದಯ ಸಂಬಂಧಿ ಸಾವುಗಳಲ್ಲಿ ಶೇ.23ರಷ್ಟು ಬೃಹತ್ ಪಾಲನ್ನು ತನ್ನದಾಗಿಸಿಕೊಂಡಿದೆ. ಆದರೆ, ಒಂದಕ್ಕಿಂತ ಹೆಚ್ಚು ಹೃದಯ ಕವಾಟಗಳಿಗೆ ಹಾನಿ ಉಂಟು ಮಾಡುವ ರುಮಾಟಿಕ್ ರೋಗದ ಪ್ರಮಾಣದಲ್ಲಿ ಸಾಕಷ್ಟು ಕಡಿಮೆಯಾಗಿದೆ.
ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?
ಯಾವ ರಾಜ್ಯಗಳಲ್ಲಿ ಎಷ್ಟು?
ಹೃದಯ ಸಂಬಂಧಿ ರೋಗಗಳು ಕೇರಳ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ನಂತರದ ಸ್ಥಾನವನ್ನು ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಪಶ್ಚಿಮ ಬಂಗಾಳಗಳು ಪಡೆದುಕೊಂಡಿವೆ. ಸ್ಟ್ರೋಕ್ ಅಥವಾ ಪಾರ್ಶ್ವವಾಯು ರೋಗ ಪಶ್ಚಿಮ ಬಂಗಾಳ, ಮೇಘಾಲಯ, ಗೋವಾ ಮತ್ತು ಕೇರಳದಲ್ಲಿ ಹೆಚ್ಚು. ನಂತರದ ಸ್ಥಾನಗಳನ್ನು ಪಂಜಾಬ್, ಹಿಮಾಚಲ ಪ್ರದೇಶ, ಛತ್ತೀಸಗಢ, ಓರಿಸ್ಸಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪಡೆದುಕೊಂಡಿವೆ. ರುಮಾಟಿಕ್ ರೋಗ ಪಂಜಾಬ್, ಛತ್ತೀಸಗಢ, ಆಸ್ಸಾಂ, ಓರಿಸ್ಸಾ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಹೆಚ್ಚಾಗಿವೆ.
ಅಧಿಕ ರಕ್ತದೊತ್ತಡ 30 ವರ್ಷಕ್ಕಿಂತ ಹೆಚ್ಚಿನ ಜನರಲ್ಲಿ ಹೆಚ್ಚಾಗುತ್ತಿರುವುದು ಪಂಜಾಬ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ. ನಂತರದ ಸ್ಥಾನಗಳನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ್ ಪಡೆದುಕೊಂಡಿವೆ. ಕರ್ನಾಟಕದಲ್ಲಿ ಇದರ ಪ್ರಮಾಣ ಎಷ್ಟು ಎಂಬುದನ್ನು ಈ ಅಧ್ಯಯನ ತಿಳಿಸಿಲ್ಲ.
ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!
ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್
ಈ ಅಧ್ಯಯನದ ಮುಖಂಡತ್ವ ವಹಿಸಿರುವ, ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಪ್ರೊ. ದೊರೈರಾಜ್ ಪ್ರಭಾಕರನ್ ಅವರ ಪ್ರಕಾರ, 1990ರ ನಂತರ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಅಂಶ, ಹೈ ಫಾಸ್ಟಿಂಗ್ ಪ್ಲಾಸ್ಮಾ ಗ್ಲೂಕೋಸ್ ಮತ್ತು ಅತ್ಯಧಿಕ ತೂಕದಿಂದಾಗಿ ಹೃದಯ ಸಂಬಂಧಿ ಬೇನೆಯ ಪ್ರಮಾಣ ಕೂಡ ಜಾಸ್ತಿಯಾಗಿದೆ. ಬೆಳವಣಿಗೆಯಲ್ಲಿ ಹಿಂದುಳಿದಿರುವ ರಾಜ್ಯಗಳಲ್ಲಿ ಹೃದ್ರೋಗ ಸಂಬಂಧಿ ರೋಗಗಳು ಹೆಚ್ಚು ಕಂಡುಬಂದಿವೆ. ಇದೆಲ್ಲದರ ಜೊತೆ, ಉಸಿರುಗಟ್ಟಿಸುತ್ತಿರುವ ವಾಯು ಮಾಲಿನ್ಯ, ದಿಕ್ಕೆಟ್ಟಿರುವ ಜೀವನಶೈಲಿ ಮತ್ತು ಪೌಷ್ಟಿಕ ಆಹಾರ ಸೇವನೆಯಲ್ಲಿ ಏರುಪೇರಾಗಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಜಂಕ್ ಫುಡ್ ಗೆ ಮೊರಹೋದ ಯುವಜನತೆ
ಧೂಮಪಾನ, ಹಾಳಾಗುತ್ತಿರುವ ವಾತಾವರಣ, ಪೌಷ್ಟಿಕಾಂಶಗಳ ಕೊರತೆ ಹೃದ್ರೋಗಕ್ಕೆ ಮೂಲ ಕಾರಣ ಎಂಬುದು ದೆಹಲಿಯ ಫಾರ್ಟಿಸ್ ಎಸ್ಕಾರ್ಟ್ ಹೃದಯ ಸಂಸ್ಥೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಡೈರೆಕ್ಟರ್ ಆಗಿರುವ ಡಾ. ನಿತಿಶ್ ಚಂದ್ರ ಅವರ ಖಚಿತ ಅಭಿಪ್ರಾಯ. ಅಲ್ಲದೆ, ಇಂದಿನ ಯುವ ಜನತೆ ಜಂಕ್ ಫುಡ್ ಗೆ ಮೊರೆಹೋಗಿದೆ, ಪೌಷ್ಟಿಕಾಂಶವುಳ್ಳ ಆಹಾರವನ್ನು ಕಡೆಗಣಿಸುತ್ತದೆ. ಜೊತೆಗೆ, ಅತ್ಯಧಿಕ ಸಮಯ ಕಂಪ್ಯೂಟರ್ ಮತ್ತು ಮೊಬೈಲಲ್ಲಿ ಕಳೆಯುತ್ತಿರುವುದು ಕೂಡ ಕಾರಣವಾಗಿದೆ. ಈ ಸಂಗತಿ ಸತ್ಯಸ್ಯ ಸತ್ಯ. ಯುವಜನತೆ ಚಟುವಟಿಕೆಯಿಂದಿಲ್ಲದಿರುವುದು ಮತ್ತು ವ್ಯಾಯಾಮವನ್ನು ಕಡೆಗಣಿಸುತ್ತಿರುವುದು ಕೂಡ ಈ ಸಮಸ್ಯೆಗೆ ಬಳುವಳಿ ನೀಡಿದೆ.
ವಿಶ್ವವಿದ್ಯಾಲಯಗಳ ಕ್ಯಾಂಪಸ್ ನಲ್ಲಿ ಜಂಕ್ ಫುಡ್ ನಿಷೇಧ: ಯುಜಿಸಿ
ಧೂಮಪಾನ, ತಂಬಾಕು ಸೇವನೆ ಇಳಿತ
ಇತ್ತೀಚಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕಾನೂನಿನಿಂದಾಗಿ ಧೂಮಪಾನ ಮತ್ತು ತಂಬಾಕು ಸೇವನೆಯಲ್ಲಿ ಸಾಕಷ್ಟು ಇಳಿತ ಕಂಡುಬಂದಿದೆ. ಜೊತೆಗೆ ಉಪ್ಪು, ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿದರೆ ಮತ್ತು ವಾಯು ಮಾಲಿನ್ಯವನ್ನು ತಗ್ಗಿಸಿದರೆ ಹೃದ್ರೋಗದ ಪ್ರಮಾಣವನ್ನು ತಗ್ಗಿಸುವಲ್ಲಿ ಖಂಡಿತ ಸಹಕಾರಿಯಾಗಬಲ್ಲದು. ಹೃದ್ರೋಗವನ್ನು ಹಿಡಿತದಲ್ಲಿಡುವಲ್ಲಿ ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪಾಲು ಹೆಚ್ಚು ಎನ್ನುತ್ತಾರೆ ದೊರೈರಾಜ್ ಪ್ರಭಾಕರನ್.
ಆಯುಷ್ಮಾನ್ ಭಾರತವೆಂಬ ಆಶಾಕಿರಣ
ಆಶಾಕಿರಣದಂತಿರುವ 'ಆಯುಷ್ಮಾನ್ ಭಾರತ' ಎಂಬ ಕೇಂದ್ರದ ಮಹತ್ವಾಕಾಂಕ್ಷಿ ಅಭಿಯಾನ ಸೆಪ್ಟೆಂಬರ್ 25ರಂದು ಆರಂಭವಾಗಲಿದ್ದು, ರಾಷ್ಟ್ರದಾದ್ಯಂತ ಒಂದೂವರೆ ಲಕ್ಷ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದನ್ನು ಸರಿಯಾಗಿ ಜಾರಿಗೆ ತಂದರೆ ಮತ್ತು ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾದರೆ ಭಾರತದಲ್ಲಿ ಹೃದ್ರೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.