ಸಾಯಿಬಾಬಾ ಸಮಾಧಿ ಶತಮಾನೋತ್ಸವಕ್ಕೆ ಸಚಿನ್, ಬಿಗ್ ಬಿ ರಾಯಭಾರಿ?
ಶ್ರೀ ಸಾಯಿಬಾಬಾ ಅವರು ಸಮಾಧಿಗ್ರಸ್ಥರಾಗಿ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ. ಈ ಮಹೋತ್ಸವಕ್ಕೆ ಅಮಿತಾಭ್ ಬಚ್ಚನ್ ಅಥವಾ ಸಚಿನ್ ತೆಂಡೂಲ್ಕರ್ ಅವರಲ್ಲೊಬ್ಬರನ್ನು ರಾಯಭಾರಿಯನ್ನಾಗಿಸಲು ಮಂಡಳಿ ನಿರ್ಧಾರ.
ಮುಂಬೈ, ಜುಲೈ 5: ಶಿರಡಿ ಸಾಯಿಬಾಬಾ ಅವರ ಸಮಾಧಿ ಸ್ಥಿತಿಗೊಳಪಟ್ಟು ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ ಅಕ್ಟೋಬರ್ ನಿಂದ ಒಂದು ವರ್ಷಗಳ ಕಾಲ ಮಹೋತ್ಸವವನ್ನು ಆಚರಿಸಲು ಶಿರಡಿ ಸಾಯಿಬಾಬಾ ದೇಗುಲದ ಆಡಳಿತ ಮಂಡಳಿಯಾದ ಶ್ರೀ ಶಿರಡಿ ಸಾಯಿಬಾಬಾ ಸಂತಾನಂ ಟ್ರಸ್ಟ್ (ಎಸ್ಎಸ್ಎಸ್ ಟಿ) ನಿರ್ಧರಿಸಿದೆ.
ಈ ಒಂದು ವರ್ಷದ ಮಹೋತ್ಸವಕ್ಕೆ ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಲ್ಲಿ ಒಬ್ಬರನ್ನು ರಾಯಭಾರಿಗಳನ್ನಾಗಿಸಲು ಮಂಡಳಿ ನಿರ್ಧರಿಸಿದೆ.
ಜುಲೈನಿಂದ ಶಿರಡಿಗೆ ವಿಮಾನ ಯಾನ ಸೇವೆ ಆರಂಭ!
ಈ ಹಿನ್ನೆಲೆಯಲ್ಲಿ, ಈ ಇಬ್ಬರನ್ನೂ ಸಂಪರ್ಕಿಸಿರುವ ಮಂಡಳಿಯು ತನ್ನ ಮನವಿಯನ್ನು ಅವರಿಬ್ಬರ ಮುಂದಿಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಹವಾರೆ, ''ಬಾಬಾ ಅವರ ಸಮಾಧಿ ಸ್ಥಿತಿಗೊಳಪಟ್ಟ ಶತಮಾನೋತ್ಸವ ಮಹೋತ್ಸವವನ್ನು ಜನಪ್ರಿಯಗೊಳಿಸಲು ಸಚಿನ್ ಹಾಗೂ ಬಿಗ್ ಬಿ ಅವರಲ್ಲೊಬ್ಬರನ್ನು ರಾಯಭಾರಿಗಳನ್ನಾಗಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಇಬ್ಬರಿಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ'' ಎಂದಿದ್ದಾರೆ.