ಉತ್ತರ ಪ್ರದೇಶ: ಅಂಬೇಡ್ಕರ್ ಪುತ್ಥಳಿಗೂ ಕೇಸರಿ ಬಣ್ಣ!
ಲಖನೌ (ಉತ್ತರ ಪ್ರದೇಶ): ಬದೌನ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಪುಂಡಾಟಿಕೆಗೆ ಭಗ್ನಗೊಂಡಿದ್ದ ಅಂಬೇಡ್ಕರ್ ಪುತ್ಥಳಿಯ ಜಾಗಕ್ಕೆ ಅಲ್ಲಿನ ಜಿಲ್ಲಾಡಳಿತ ಹೊಸ ಪುತ್ಥಳಿ ಸ್ಥಾಪಿಸಿದೆ. ಆದರೆ ಅದರ ಬಣ್ಣ ಮತ್ತೊಂದು ವಿವಾದ ಸೃಷ್ಟಿಸಿದೆ.
ಅಂಬೇಡ್ಕರ್ ಕೇಸರಿ ಬಣ್ಣದ ಕೋಟು ಧರಿಸಿರುವ ಪುತ್ಥಳಿಯನ್ನು ಬದೌನ್ ಜಿಲ್ಲಾಡಳಿತ ಪ್ರತಿಷ್ಠಾಪಿಸಿದೆ.
ಜಿಲ್ಲೆಯ ದುಗ್ರಯ್ಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಹಾನಿಗೊಳಿಸಲಾಗಿತ್ತು. ಇದರ ವಿರುದ್ಧ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತ ಆಗ್ರಾದಿಂದ ಹೊಸ ಪುತ್ಥಳಿ ತರಿಸಿ ಭಾನುವಾರ ಅನಾವರಣಗೊಳಿಸಿತ್ತು.
ಕೇಸರಿ ಬಣ್ಣದಲ್ಲಿ ಹೊಸ ಪುತ್ಥಳಿ
Badaun: A BR Ambedkar statue which was vandalized recently has been rebuilt and painted saffron in colour pic.twitter.com/saW7U9BBUi
— ANI UP (@ANINewsUP) 10 April 2018
ಸಾಮಾನ್ಯವಾಗಿ ಅಂಬೇಡ್ಕರ್ ಅವರ ಪುತ್ಥಳಿಗಳು ನೀಲಿ ಬಣ್ಣದ್ದಾಗಿರುತ್ತವೆ. ಆದರೆ, ಇದು ಕೇಸರಿ ಬಣ್ಣ ಹೊಂದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಪುತ್ಥಳಿ ಅನಾವರಣ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ಪ್ರಾದೇಶಿಕ ಮುಖ್ಯಸ್ಥ ಹೇಮೇಂದ್ರ ಗೌತಮ್ ಕೂಡ ತಮ್ಮ ಬೆಂಬಲಿಗರೊಂದಿಗೆ ಹಾಜರಿದ್ದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಮಾಜವಾದಿ ಪಕ್ಷದ ಶಾಸಕ ಮತ್ತು ವಕ್ತಾರ ಸುನಿಲ್ ಸಿಂಗ್, ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎಲ್ಲವನ್ನೂ ಕೇಸರೀಕರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
'ಸರ್ಕಾರ ಬಣ್ಣದ ರಾಜಕೀಯ ಮಾಡುತ್ತಿದೆ. ಕಟ್ಟಡಗಳು, ಗಡಿಗಳು, ಉದ್ಯಾನ ಮತ್ತು ಎಲ್ಲದ್ದಕ್ಕೂ ಕೇಸರಿ ಬಣ್ಣ ಬಳಿಯುವುದರಲ್ಲಿ ಬಿಜಿಯಾಗಿದ್ದಾರೆ. ಈಗ ಅಂಬೇಡ್ಕರ್ ಅವರ ಪುತ್ಥಳಿಯ ಬಣ್ಣವನ್ನು ಕೇಸರಿಮಯ ಮಾಡುವುದರ ಮೂಲಕ ತಮ್ಮನ್ನು ಬೆತ್ತಲೆಗೊಳಿಸಿಕೊಂಡಿದ್ದಾರೆ. ಇದು ಅವರಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಬದಲಾಗಿ ಜನರು ಅವರ ಉದ್ದೇಶವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.