ಯಮುನೋತ್ರಿ ಹೆದ್ದಾರಿಯಲ್ಲಿ ಸುರಕ್ಷತಾ ಗೋಡೆ ಕುಸಿತ: 10,000 ಮಂದಿಗೆ ಸಂಕಷ್ಟ
ಬಂದಾರ್ ಪೂಂಚ್ ಮೇ 21: ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಚಾರ್ ಧಾಮ್ ಯಾತ್ರೆ: 39 ಯಾತ್ರಾರ್ಥಿಗಳು ಸಾವು
ಮೂಲಗಳ ಪ್ರಕಾರ, ರಸ್ತೆಯನ್ನು ಮತ್ತೆ ತೆರೆಯಲು 3 ದಿನಗಳು ಬೇಕಾಗಬಹುದು. ಕೆಲವು ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದರೂ ದೂರದಿಂದ ದೊಡ್ಡ ವಾಹನಗಳಲ್ಲಿ ಬಂದವರು ತೆರಳಲು ಸಾಧ್ಯವಾಗುತ್ತಿಲ್ಲ.
ಪ್ರಸ್ತುತ ಪ್ರದೇಶವು ಉತ್ತರಾಖಂಡ್ ರಾಜ್ಯದ ಗಡ್ವಾಲ್ ಆಡಳಿತಾತ್ಮಕ ವಿಭಾಗದ ಸುಪರ್ದಿಗೆ ಒಳಪಟ್ಟಿದೆ. ಯಮುನೋತ್ರಿಯು ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾಗಿದೆ. ಪವಿತ್ರ ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಇರುವುದು ಬಂದಾರ್ ಪೂಂಚ್ ಪರ್ವತದ ಮೇಲೆ. ಸಮುದ್ರ ಮಟ್ಟದಿಂದ ಸರಿ ಸುಮಾರು 3293 ಮೀಟರ್ ಎತ್ತರದಲ್ಲಿ. ಭೌಗೋಳಿಕವಾಗಿ, ಯಮುನೆಯು ಸಮುದ್ರ ಮಟ್ಟದಿಂದ 4421 ಮೀಟರ್ ಎತ್ತರದಲ್ಲಿರುವ ಚಾಂಪಸರ್ ಹಿಮನದಿಯಲ್ಲಿ ಹುಟ್ಟುತ್ತಾಳೆ. ವಾಸ್ತವವಾಗಿ ಈ ಹಿಮನದಿಯು ಪವಿತ್ರ ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಆದರೂ ಇದನ್ನು ತಲುಪಬೇಕಾದರೆ ಸಾಕಷ್ಟು ಪ್ರಯಾಸ ಪಡಬೇಕಾಗುವುದು.
ಇಂಡೋ ಚೀನಾ ಗಡಿಯ ಸಮೀಪದಲ್ಲಿರುವ ಈ ತಾಣವನ್ನು ಕಾಲ್ನಡಿಗೆಯಿಂದ ತಲುಪಬೇಕಾದರೆ ಒಂದಿಡೀ ದಿನವೇ ಬೇಕಾಗುವುದು. ಅದರಲ್ಲೂ ದಟ್ಟಾರಣ್ಯದೊಳಗೆ, ತಗ್ಗು-ದಿಣ್ಣೆಗಳನ್ನು ದಾಟುತ್ತಾ ಹೋಗುವ ಅನಿವಾರ್ಯತೆ ಇದೆ. ಸೌಭಾಗ್ಯ ವಶಾತ್ ಭಕ್ತರಿಗೆ ದೇವಾಲಯ ತಲಪುವುದಕ್ಕೆ ಕುದುರೆ ಮತ್ತು ಹೇಸರಗತ್ತೆಗಳುಳ್ಳ ಸಾರಿಗೆಗಳು ಲಭ್ಯವಿವೆ.