ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಬಗ್ಗೆ ಮಾತನಾಡಿದ ಸಾಧ್ವಿ ಯಾರು?
ಮಥುರಾ, ಮಾರ್ಚ್ 02: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೊಳಿಸಿದ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಕೇಂದ್ರದ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಹೇಳಿದ್ದಾರೆ. ಆದರೆ, ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ತರಲು ಸಾಧ್ಯವೇ? ಯಾರಿದು ನಿರಂಜನಾ ಜ್ಯೋತಿ? ವಿವಾದಿತ ಹೇಳಿಕೆ ನೀಡಿದರೂ ಮೋದಿ ಸಂಪುಟದಲ್ಲಿ ಉಳಿದುಕೊಂಡಿದ್ದಾರೆ ಹೇಗೆ?
ಮಥುರಾದಲ್ಲಿ ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿರಂಜನಾ ಜ್ಯೋತಿ, ದೇಶದಲ್ಲಿ ಜನಸಂಖ್ಯಾ ನಿಯಂತ್ರಣದಂಥ ಕಾನೂನಿನ ಅವಶ್ಯಕತೆ ಇದೆ. ಈ ಕುರಿತು ಪ್ರಧಾನಿ ಮೋದಿ ಅವರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಈ ಕಾನೂನಿನ ಜಾರಿಗೊಳಿಸುವ ಬಗ್ಗೆ ಪ್ರಧಾನಿ ಶೀಘ್ರದಲ್ಲೇ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಸಿಎಎ ಆಯಿತು, ಇನ್ಮುಂದೆ ಜನಸಂಖ್ಯಾ ನಿಯಂತ್ರಣ ಕಾಯ್ದೆ!
ಉನ್ನಾವೋ ಸಂಸದರಾದ ಸಾಕ್ಷಿ ಮಹಾರಾಜ್ ಅವರು ಪಾಲ್ಗೊಂಡಿರುವ ಚೈತನ್ಯ ವಿಹಾರದಲ್ಲಿ ನಡೆದಿರುವ ಸ್ವಾಮಿ ವಾಮದೇವ ಜ್ಯೋತಿರ್ಮಠ ಸಭೆಯಲ್ಲಿ ನಿರಂಜನಾ ಭಾಗಿಯಾಗಿದ್ದಾರೆ.
ಸಾಧ್ವಿ ನಿರಂಜನ್ ಜ್ಯೋತಿ ಯಾರು, ಕ್ಷಮೆ ಬೇಡಿದ್ದು ಏಕೆ?
ಯಾರಿದು ನಿರಂಜನಾ ಜ್ಯೋತಿ: ಉತ್ತರಪ್ರದೇಶದ ಫತೇಪುರ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಾಧ್ವಿ ಜ್ಯೋತಿ ಅವರಿಗೆ ಮೊದಲ ಬಾರಿಗೆ ಮೋದಿ ಅವರ ಸಂಪುಟ ಸೇರುವ ಅವಕಾಶ ಲಭ್ಯವಾಯಿತು. ಜ್ಯೂನಿಯರ್ ಸೆಂಟ್ರಲ್ ಮಿನಿಸ್ಟರ್ ಎನಿಸಿಕೊಂಡುಬಿಟ್ಟರು. ನ.10,2014ರಂದು ಆಹಾರ ಸಂಸ್ಕರಣಾ ಖಾತೆಯ ರಾಜ್ಯ ಸಚಿವೆಯಾಗಿ ಮೋದಿ ಸಂಪುಟಕ್ಕೆ ಸಾಧ್ವಿ ಸೇರ್ಪಡೆಗೊಂಡರು.. ಇನ್ನಷ್ಟು ವಿವರ ಮುಂದಿದೆ...
2012ರಲ್ಲಿ ರಾಜಕೀಯವಾಗಿ ಮೊದಲ ಗೆಲುವು
* 1967ರಲ್ಲಿ ಜನಿಸಿದ ಅವರು 2002ರಲ್ಲಿ ಹಾಗೂ 2007ರಲ್ಲಿ ಉತ್ತರಪ್ರದೇಶ ಅಸೆಂಬ್ಲಿಗೆ ಸ್ಪರ್ಧಿಸಿ ಸೋಲುಕಂಡಿದ್ದರು. ಮತ್ತೊಮ್ಮೆ 2012ರಲ್ಲಿ ಗೆಲುವಿನ ರುಚಿ ಕಂಡಿದ್ದರು.
* ಉತ್ತರ ಪ್ರದೇಶದ ಸಾಧ್ವಿ ನಿರಂಜನ್ ಜ್ಯೋತಿ ಅವರು ಧಾರ್ಮಿಕ ಬೋಧಕರಾಗಿದ್ದುಕೊಂಡು ದಲಿತ ಹಾಗೂ ಹಿಂದುಳಿದ ವರ್ಗಗಳು ಬಿಜೆಪಿಯತ್ತ ಒಲಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
* ಫತೇಪುರದಲ್ಲಿ ಬಿಜೆಪಿಗೆ ಕಶ್ಯಪ ಹಾಗೂ ನಿಷಾದ ಸಮುದಾಯದ ಮತಗಳು ಹರಿಯುವಂತೆ ಮಾಡಿದ್ದಲ್ಲದೆ ಗೆಲುವು ಸಾಧಿಸಿ ಕೇಂದ್ರ ಸಚಿವೆಯಾದರು.
ನಿಷಾದ ಸಮುದಾಯಕ್ಕೆ ಸೇರಿರುವ ಸಾಧ್ವಿ
ಚುನಾವಣೆ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಮಾಡಿದ ಹತ್ಯೆ ಯತ್ನದಿಂದ ಸ್ವಲ್ಪದರಲ್ಲೇ ಬಚಾವಾಗಿದ್ದರು.
* ಉತ್ತರಪ್ರದೇಶದಲ್ಲಿ ಪ್ರಮುಖ ಮತಬ್ಯಾಂಕ್ ಎನಿಸಿರುವ ನಿಷಾದ ಸಮುದಾಯಕ್ಕೆ ಸಾಧ್ವಿ ಜ್ಯೋತಿ ಸೇರಿದವರಾಗಿದ್ದಾರೆ. ಸ್ವಾಮಿ ಅಚ್ಯುತಾನಂದ ಅವರ ಶಿಷ್ಯೆಯಾಗಿರುವ ಸಾಧ್ವಿ XII ತನಕ ಓದಿದ್ದಾರೆ.
* 2012ರಲ್ಲಿ ಹಮೀರ್ ಪುರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜನಪ್ರತಿನಿಧಿಯಾದರು.
ಕಡಿಮೆ ಮೊತ್ತದ ಆಸ್ತಿ ಹೊಂದಿರುವ ಸಚಿವೆ
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಸ್ಥಿರಾಸ್ತಿ 2.95 ಲಕ್ಷ ಹಾಗೂ ಚರಾಸ್ತಿ 23 ಲಕ್ಷ ರು ನಷ್ಟಿದೆ. ಇತ್ತೀಚಿನ ಎಣಿಕೆ ಪ್ರಕಾರ ಸಾಧ್ವಿ ಅವರ ಆಸ್ತಿ ಮೌಲ್ಯ 37 ಲಕ್ಷ ದಾಟುವುದಿಲ್ಲ. ಮೋದಿ ಸಂಪುಟದಲ್ಲಿರುವ ಸಚಿವರ ಪೈಕಿ ಕಡಿಮೆ ಮೊತ್ತದ ಆಸ್ತಿ ಹೊಂದಿರುವವರಾಗಿದ್ದಾರೆ.
ಸಾಧ್ವಿಯಾಗಿರುವ ಜ್ಯೋತಿ ಅವರು ಸದಾಕಾಲ ಕೇಸರಿ ವಸ್ತ್ರ, ಹಣೆಯಲ್ಲಿ ತಿಲಕ ಧರಿಸಿರುತ್ತಾರೆ. ಮಂತ್ರ ಪಠಣ, ಹಿಂದೂ ಸಂಸ್ಕೃತಿ ಅನುಗುಣವಾದ ನಡೆ ನುಡಿ ಇರುವ ಹೆಗ್ಗುರುತು.
ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಹಾಗೂ ಸಮುದಾಯದ ಬೆಂಬಲ ಬಲದ ನಿರೀಕ್ಷೆಯಲ್ಲಿ ಫೈರ್ ಬ್ರ್ಯಾಂಡ್ ಮಾತುಗಳನ್ನಾಡುವುದು ಇವರಿಗೆ ರೂಢಿಯಾಗಿದೆ.
ವಿವಾದಿತ ಹೇಳಿಕೆ ನೀಡಿದ್ದ ಸಾಧ್ವಿ
"Aapko tay karna hai ki Dilli mein sarkar Ramzadon ki banegi ya har**zadon ki."ಎಂದಿದ್ದರು. ದೆಹಲಿ ಜನತೆಗೆ ನಿಮಗೆ ಶ್ರೀರಾಮಭಕ್ತರ (ಬಿಜೆಪಿ) ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದರು.
ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಅವರನ್ನು ಬೆಂಬಲಿಸಿ. ಅದರ ಬದಲು ಭ್ರಷ್ಟಾಚಾರದಲ್ಲಿ ಮುಳುಗಿರುವವರಿಗೆ ಮತ ಹಾಕಬೇಡಿ. ರಾಮನಲ್ಲಿ ನಂಬಿಕೆ ಇಟ್ಟಿರುವವರಿಗೆ ಮತ ನೀಡಬೇಕೋ ಅಥವಾ ರಾಮನಲ್ಲಿ ನಂಬಿಕೆಯಿಲ್ಲದ ಪಾಮರರಿಗೆ ಮತ ನೀಡಬೇಕೋ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದರು. ನಂತರ ಮೋದಿ ಸಲಹೆಯಂತೆ ಕ್ಷಮೆಯಾಚಿಸಿದ್ದರು.