ವಿಸ್ತೃತ ನ್ಯಾಯಪೀಠದಿಂದ ಶಬರಿಮಲೆ ಕೇಸ್ ನಿತ್ಯ ವಿಚಾರಣೆ
ನವದೆಹಲಿ, ಫೆಬ್ರವರಿ 10: ಎಲ್ಲ ವಯೋಮಾನದ ಮಹಿಳೆರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಬಹುದು ಎಂಬ ತೀರ್ಪಿನ ವಿರುದ್ಧದ ತಕರಾರು ಅರ್ಜಿ ವಿಚಾರಣೆ ವೇಳೆ ಧಾರ್ಮಿಕ, ಮಹಿಳಾ ಸಮಾನತೆ, ಕಾನೂನಿನ ಚೌಕಟ್ಟು ವಿಷಯಗಳು ಮುನ್ನೆಲೆಗೆ ಬಂದಿದ್ದು, ಈ ಕುರಿತಂತೆ ಫೆಬ್ರವರಿ 17ರಿಂದ ಸುಪ್ರೀಂಕೋರ್ಟ್ ನ ವಿಸ್ತೃತ ಪೀಠವು ವಿಚಾರಣೆ ನಡೆಸಲಿದೆ.
ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿತ ದಾವೆಗಳ ವಿಚಾರಣೆಯನ್ನು ಈಗ 9 ಮಂದಿ ನ್ಯಾಯಮೂರ್ತಿಗಳಿರುವ ನ್ಯಾಯಪೀಠ ನಡೆಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.
ವಿವಿಧ ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅವಕಾಶಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಸಂವಿಧಾನದ ಅನುಚ್ಚೇಧ 25ರ ಪ್ರಕಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ನಂಬಿಕೆ ನಡುವಿನ ಸಂಬಂಧ, ನಂಬಿಕೆಗಳ ಕುರಿತ ಧಾರ್ಮಿಕ ವ್ಯಾಖ್ಯೆಗಳು ಕೂಡ ಒಳಗೊಂಡಿವೆ.
ವಿಸ್ತೃತ ನ್ಯಾಯಪೀಠದಲ್ಲಿ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಎಂ.ಎಂ.ಶಾಂತನಗೌಡರ್, ಎಸ್.ಎ.ನಜೀರ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ, ಸೂರ್ಯಕಾಂತ್ ಇದ್ದಾರೆ.
ಫೆ.17ರಂದು ಈ ಕೇಸ್ನಲ್ಲಿ ಹಿರಿಯ ನ್ಯಾಯವಾದಿ ಕೆ.ಪರಾಸರನ್ ಹಾಗೂ ರಂಜಿತ್ ಕುಮಾರ್ ಅವರ ವಾದ ಮಂಡನೆ ಬಳಿಕ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಸದ್ಯಕ್ಕೆ ಧಾರ್ಮಿಕ ಸ್ವಾತಂತ್ರ್ಯ ವಿಷಯವಾಗಿ ವಿಚಾರಣೆ ನಡೆಯಲಿದ್ದು, ಮಹಿಳೆಯರಿಗೆ ದೇಗುಲ ಪ್ರವೇಶ ಕುರಿತಂತೆ ಸದ್ಯಕ್ಕೆ ವಿಚಾರಣೆ ಇಲ್ಲ ಎನ್ನಲಾಗಿದೆ. ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸಲ್ಲಿಕೆ ಆಗಿದ್ದ ಮೇಲ್ಮನವಿಯನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ ವಿಚಾರಣೆ ನಡೆಸಿತ್ತು. ನವೆಂಬರ್ 14ರಂದು ತೀರ್ಪು ನೀಡಿದ್ದ ಪೀಠ, ಈ ಪ್ರಕರಣವನ್ನು 9 ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿತ್ತು.