ಚೀನಾ-ಭಾರತ ಗೌಪ್ಯ ಚರ್ಚೆ, ಫಲಿತಾಂಶದ ಬಗ್ಗೆ ಊಹೆ ಬೇಡ: ಜೈಶಂಕರ್
ನವದೆಹಲಿ, ಅಕ್ಟೋಬರ್ 16: ಚೀನಾ-ಭಾರತ ನಡುವೆ ಗೌಪ್ಯ ಮಾತುಕತೆ ನಡೆಯುತ್ತಿದ್ದು, ಅದರ ಫಲಿತಾಂಶ ಹೀಗೆಯೇ ಇರುತ್ತದೆ ಎಂದು ಊಹೆ ಬೇಡ, ವಿಷಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಪೂರ್ವ ಲಡಾಕ್ ನಲ್ಲಿ ಎರಡು ದೇಶಗಳ ಸೇನೆ ನಿಯೋಜನೆಯಿಂದ ಉಂಟಾಗಿರುವ ಸಮಸ್ಯೆ, ಆತಂಕದ ವಾತಾವರಣವನ್ನು ನಿವಾರಿಸಲು ಗೌಪ್ಯ ಮಾತುಕತೆಯಲ್ಲಿ ನಿರತವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಯುದ್ಧಕ್ಕೆ ಸಿದ್ಧರಾಗುವಂತೆ ಯೋಧರಿಗೆ ಕರೆ ಕೊಟ್ಟಿತಾ ಚೀನಾ?
ಗಡಿಭಾಗದಲ್ಲಿ ಶಾಂತಿ ನೆಲೆಸಲು 1993ರಲ್ಲಿ ಮಾಡಿಕೊಂಡ ಒಪ್ಪಂದ ನಂತರ ಎರಡೂ ದೇಶಗಳ ಮಧ್ಯೆ ಸಾಕಷ್ಟು ಸಂಬಂಧ ಸುಧಾರಣೆಯಾಗಿದೆ. ಶಾಂತಿ ಮತ್ತು ಸೌಹಾರ್ದತೆ ಇಲ್ಲದಿದ್ದಾಗ ಮಾಡಿರುವ ಒಪ್ಪಂದವನ್ನು ಮುರಿದಾಗ ಅಲ್ಲಿ ಸಮಸ್ಯೆಯುಂಟಾಗುತ್ತದೆ ಎಂದರು.
ಮಾತುಕತೆ ಮುಂದುವರಿದಿದೆ. ಸೇನೆ ಹಿಂಪಡೆಯುವ ಕೆಲಸ ಪ್ರಗತಿಯಲ್ಲಿದೆ. ಈಗ ನಡೆಯುತ್ತಿರುವ ಮಾತುಕತೆ, ಬೆಳವಣಿಗೆಗಳು ಗೌಪ್ಯವಾಗಿದೆ. ಇದನ್ನು ಸಾರ್ವಜನಿಕವಾಗಿ ಈಗ ನಾನು ಹೇಳುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಮೊದಲೇ ತೀರ್ಮಾನ ತೆಗೆದುಕೊಳ್ಳಲು ನಾನು ಸಿದ್ದವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ಅವರು ನಿನ್ನೆ ದೆಹಲಿಯಲ್ಲಿ ಬ್ಲೂಮ್ ಬರ್ಗ್ ಇಂಡಿಯಾ ಎಕನಾಮಿಕ್ ವೇದಿಕೆಯನ್ನುದ್ದೇಶಿಸಿ ಮಾತನಾಡಿ, ಗಡಿ ವಾಸ್ತವ ರೇಖೆಯಲ್ಲಿ ಸೇನೆಯನ್ನು ನಿಯೋಜಿಸುವ ಕೆಲಸ ಖಂಡಿತಾ ಮುಂದುವರಿದಿದೆ.ಇಲ್ಲಿ ಎರಡೂ ದೇಶಗಳು ಸಮಾನತೆಯನ್ನು ಕಂಡುಕೊಳ್ಳಬಹುದೇ, ಗಡಿಯಲ್ಲಿ ನಮ್ಮ ಮುಂದಿರುವ ಸವಾಲು ಅದೇ ಆಗಿದೆ ಎಂದರು.