ರಷ್ಯಾ ವಿದೇಶಾಂಗ ಸಚಿವರ ಎರಡು ದಿನಗಳ ಭಾರತ ಭೇಟಿ
ನವದೆಹಲಿ, ಏಪ್ರಿಲ್ 5: ರಷ್ಯಾದ ವಿದೇಶಾಂಗ ಸಚಿವ ಸರ್ಜೈ ಲಾವ್ರೊವ್ ಅವರು ದ್ವಿಪಕ್ಷೀಯ ಸಹಕಾರಗಳ ಸಂಬಂಧ ಚರ್ಚೆ ನಡೆಸಲು ಎರಡು ದಿನಗಳ ಭೇಟಿಯಾಗಿ ಸೋಮವಾರ ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತ ಮತ್ತು ರಷ್ಯಾ ನಡುವೆ ನಡೆಯುವ ವಾರ್ಷಿಕ ಸಮ್ಮೇಳನದ ಕುರಿತು ತಯಾರಿ ನಡೆಸಲು ಈ ಸಭೆ ಬುನಾದಿ ಹಾಕಲಿದೆ ಎನ್ನಲಾಗಿದೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖಾರೊವಾ ಅವರು ಈ ನಿಗದಿಯ ಭೇಟಿಯ ಬಗ್ಗೆ ಗುರುವಾರ ಮಾಸ್ಕೋದಲ್ಲಿ ಮಾಹಿತಿ ನೀಡಿದ್ದರು. ಲಾವ್ರೋವ್ ಅವರು ಏಪ್ರಿಲ್ 5 ಮತ್ತು 6ರಂದು ನವದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು.
ರಷ್ಯಾ ಜತೆ ಭಾರತ ಉತ್ತಮ ಸಂಬಂಧ ಹೊಂದಿದೆ: ಅಮೆರಿಕ ಅಡ್ಮಿರಲ್
ಪ್ರತಿ ವರ್ಷ ನಡೆಯುವ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಕಳೆದ ವರ್ಷ ಮುಂದೂಡಲ್ಪಟ್ಟಿತ್ತು. ಕಳೆದ ಎರಡು ದಶಕಗಳಲ್ಲಿ ಸಮ್ಮೇಳನ ನಡೆಯದೆ ಇರುವುದು ಇದು ಮೊದಲ ಸಲ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ರಚಿಸಿರುವ 'ಕ್ವಾಡ್' ಒಕ್ಕೂಟದ ಕಾರಣದಿಂದ ಮುನಿಸಿಕೊಂಡಿರುವ ರಷ್ಯಾ, ಈ ಸಮ್ಮೇಳನದಿಂದ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಚೀನಾ ಪ್ರವಾಸದ ನಂತರ ಲಾವ್ರೋವ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಮಂಗಳವಾರ ಭಾರತದಿಂದ ಎರಡು ದಿನಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಉಪಟಳವನ್ನು ಎದುರಿಸಲು ರಚಿಸಿದ ಕ್ವಾಡ್ ಒಕ್ಕೂಟದ ಬಗ್ಗೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಾದೇಶಿಕ ಸಹಕಾರದ ತತ್ವಕ್ಕೆ ಈ ಒಕ್ಕೂಟ ಅಪಾಯಕಾರಿಯಾಗಲಿದೆ. ಒಂದು ಪ್ರದೇಶದ ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರಕ್ಕೆ ಆಯಾ ಭಾಗದ ದೇಶಗಳ ನಡುವೆಯೇ ಮಾತುಕತೆ ನಡೆಯಬೇಕು. ಆದರೆ ಕ್ವಾಡ್ ಏಷ್ಯಾದ ದೇಶಗಳನ್ನು ಹೊರಗಿಟ್ಟಿದೆ ಎಂದು ರಷ್ಯಾ ಟೀಕಿಸಿತ್ತು.