ರಷ್ಯಾದ ಭಾರತ ರಾಯಭಾರಿ ಅಲೆಕ್ಸಾಂಡರ್ ನಿಧನ
2009ರಿಂದ ಭಾರತದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಲೆಕ್ಸಾಂಡರ್. ಪಾಕಿಸ್ತಾನದ ಉಗ್ರ ಬೆಂಬಲದ ವಿರುದ್ಧ ಭಾರತ ಸಿಡಿದೆದ್ದಾಗಲೆಲ್ಲಾ ಭಾರತದ ಬೆಂಬಲಕ್ಕೆ ನಿಲ್ಲುತ್ತಿದ್ದ ರಷ್ಯಾ ರಾಯಭಾರಿ.
ನವದೆಹಲಿ, ಜನವರಿ 26: ಭಾರತದಲ್ಲಿ ರಷ್ಯಾದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಲೆಕ್ಸಾಂಡರ್ ಕಡಾಕಿನ್ (67) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2009ರಿಂದ ಅವರು, ಭಾರತದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕೆಲ ದಿನಗಳಿಂದಲೂ ಅವರು ಅನಾರೋಗ್ಯ ಪೀಡಿತರಾಗಿದ್ದರು. ಹಾಗಾಗಿ, ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತಿದ್ದ ಅವರು ಗುರುವಾರ ಹೃದಯಾಘಾತಕ್ಕೀಡಾಗಿದ್ದಾರೆಂದು ಮೂಲಗಳು ಹೇಳಿವೆ.
ಪಾಕಿಸ್ತಾನದ ಉಗ್ರ ಬೆಂಬಲವನ್ನು ಕಟುವಾಗಿ ಟೀಕಿಸುತ್ತಿದ್ದ ಭಾರತಕ್ಕೆ ಅಲೆಕ್ಸಾಂಡರ್ ಯಾವಾಗಲೂ ಬೆಂಬಲ ಸೂಚಿಸುತ್ತಿದ್ದರು. ಕಳೆದ ವರ್ಷ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಉಗ್ರರ ಅಡಗುದಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ಭಾರತದ ನಡೆಯನ್ನು ಸಮರ್ಥಿಸಿದ್ದ ಅವರು, ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ. ಇದನ್ನು ರಷ್ಯಾ ಖಂಡಿತವಾಗಿಯೂ ಸಹಿಸುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು.
ಇದಲ್ಲದೆ, ಭಾರತೀಯ ಸೇನಾ ಶಕ್ತಿಯ ವೃದ್ಧಿಯ ವಿಚಾರ ಬಂದಾಗಲೆಲ್ಲಾ ಅವರು ರಷ್ಯಾದಿಂದ ಸಿಗಬಹುದಾದ ನೆರವುಗಳ ಬಗ್ಗೆ ಪ್ರಯತ್ನಿಸುತ್ತಿದ್ದರು.