ಕುಂಭಮೇಳದಲ್ಲಿ RSS ಕಾರ್ಯಕರ್ತರಿಗೆ ವಿಶೇಷ ಪೊಲೀಸ್ ಪಡೆ ಜವಾಬ್ದಾರಿ!
ನವದೆಹಲಿ, ಏಪ್ರಿಲ್ 15: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದಿಗ್ಧ ಸ್ಥಿತಿಯಲ್ಲಿ ಕುಂಭಮೇಳದಲ್ಲಿ ನೆರೆದ ಜನಸಂದಣಿ ನಿಯಂತ್ರಿಸುವುದಕ್ಕಾಗಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್ಎಸ್ಎಸ್)ದ ಕಾರ್ಯಕರ್ತರನ್ನು ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಕುಂಭಮೇಳದಲ್ಲಿ ನೆರೆದ ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆೆ ಆರ್ಎಸ್ಎಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಆರ್ಎಸ್ಎಸ್ ಕಾರ್ಯಕರ್ತರಿಗೆ ಗುರುತಿನ ಚೀಟಿ ಹಾಗೂ ಕ್ಯಾಪ್ ಮತ್ತು ಜಾಕೇಟ್ ಅನ್ನು ನೀಡಲಾಗಿದೆ.
ಕೊರೊನಾವೈರಸ್ ಹೆಚ್ಚಿಸುವ ಆತಂಕ ಸೃಷ್ಟಿಸಿದ ಕುಂಭಮೇಳ!
ಏಪ್ರಿಲ್ 12ರಂದು ಹರಿದ್ವಾರದಲ್ಲಿ ಶಾಹಿ ಸ್ನಾನ್ ಮುಗಿಸಿ ತಮ್ಮೂರಿಗೆ ತೆರಳಲು ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದತ್ತ ಹೊರಟ ಭಕ್ತಾದಿಗಳಿಗೆ ವಿಶೇಷ ಪೊಲೀಸ್ ಅಧಿಕಾರಿಗಳಾಗಿ ನಿಯೋಜನೆಗೊಂಡ ಆರ್ಎಸ್ಎಸ್ ಕಾರ್ಯಕರ್ತರು ಮಾರ್ಗದರ್ಶ ಮಾಡಿದರು. ಕುಂಭಮೇಳಕ್ಕೆ ಆಗಮಿಸಿದ ಭಕ್ತಾದಿಗಳ ಜನಸಂದಣಿಯನ್ನು ನಿರ್ವಹಿಸಿದರು. ಈ ಕುರಿತು ನಿಯೋಜಿತ ವಿಶೇಷ ಅಧಿಕಾರಿಗಳು ಹೇಳುವುದೇನು ಎಂಬುದರ ಬಗ್ಗೆ ವಿಶೇಷ ವರದಿ ಇಲ್ಲಿದೆ.
ಆರ್ಎಸ್ಎಸ್ ಕಾರ್ಯಕರ್ತರ ಪಡೆಗೆ ಶಿಫ್ಟ್
ಕುಂಭಮೇಳಕ್ಕೆ ಆಗಮಿಸುವ ಭಕ್ತಾದಿಗಳ ನಿರ್ವಹಣೆಗೆ ಅನುಕೂಲವಾಗಲೆಂದು ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಕಳೆದ ಏಪ್ರಿಲ್ 7ರಿಂದ ವಿಶೇಷ ಪೊಲೀಸ್ ಪಡೆ ಸಿಬ್ಬಂದಿಯಾಗಿ ನಿಯೋಜನೆಗೊಂಡಿರುವ ಆರ್ಎಸ್ಎಸ್ ಕಾರ್ಯಕರ್ತರಿಗೆ 12 ಗಂಟೆಗಳ ಶಿಫ್ಟ್ ನೀಡಲಾಗಿದೆ. 20 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಆಶಿಶ್ ಚೌಧರಿ ಮತ್ತು ತರುಣ್ ಶರ್ಮಾ ಅವರು ಎರಡು ಶಿಫ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರಿದ್ವಾರ ನಗರ, ಘಾಟ್, ರೈಲ್ವೆ ನಿಲ್ದಾಣ, ರಸ್ತೆಗಳ ತಿರುವು, ಅತಿಹೆಚ್ಚು ಸಂಚಾರವಿರುವ ರಸ್ತೆಗಳು, ರಿಷಿಕೇಶ್, ತೆಹ್ರಿ, ಪೌರಿ ಮತ್ತು ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿ ಈ ಸಿಬ್ಬಂದಿ ನಿಯೋಜಿಸಲಾಗಿದೆ.
1553 ಸಿಬ್ಬಂದಿ ನಿಯೋಜಿಸಿದ ಉತ್ತರಾಖಂಡ್ ಪೊಲೀಸ್
ಉತ್ತರಾಖಂಡ್ ಪೊಲೀಸರು ಕುಂಭಮೇಳದಲ್ಲಿ ನಿಯಂತ್ರಣ ಮತ್ತು ಭಕ್ತಾಧಿಗಳ ನಿರ್ವಹಣೆಗೆ ಅನುಕೂಲವಾಗಲೆಂದು ಮೊದಲ ಬಾರಿಗೆ ಆರ್ಎಸ್ಎಸ್ ಸ್ವಯಂಸೇವಕರನ್ನು ವಿಶೇಷ ಪೊಲೀಸ್ ಪಡೆಯಾಗಿ ನಿಯೋಜನೆ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1553 ಸ್ವಯಂಸೇವಕರನ್ನು ನಿಯೋಜಿಸಿದ್ದು, ಅವರಿಗೆ ಗುರುತಿನ ಚೀಟಿ ಹಾಗೂ ಕ್ಯಾಪ್ ಮತ್ತು ಜಾಕೇಟ್ ಅನ್ನು ನೀಡಲಾಗಿದೆ. ಇದರ ಹೊರತಾಗಿ 1053 ಆರ್ಎಸ್ಎಸ್ ಸ್ವಯಂಸೇವಕರು ಸ್ವಯಂಪ್ರೇರಿತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಕಾರ್ಯ ನಿರ್ವಹಿಸುವ 1500ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಯಾವುದೇ ರೀತಿ ವೇತನ ನೀಡಲಾಗುವುದಿಲ್ಲ ಎಂದು ಉತ್ತರಾಖಂಡ್ ಆರ್ಎಸ್ಎಸ್ ಘಟಕದ ಮುಖಂಡ ಸುನೀಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರಿಗೂ ನೇಮಕ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ 2021ನೇ ವರ್ಷದ ಕುಂಭಮೇಳದಲ್ಲಿ ಜನಸಂದಣಿ ಮತ್ತು ಸಂಚಾರ ವ್ಯವಸ್ಥೆಯನ್ನು ವಿಶೇಷ ಪೊಲೀಸ್ ಪಡೆ ಸಿಬ್ಬಂದಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಕುಂಭಮೇಳದ ಡೆಪ್ಯುಟಿ ಎಸ್ಪಿ ಬೀರೇಂದ್ರ ಪ್ರಸಾದ್ ದಬ್ರಾಲ್ ತಿಳಿಸಿದ್ದಾರೆ. ಆರ್ಎಸ್ಎಸ್ ಅಲ್ಲದೇ ಕಾಂಗ್ರೆಸ್ ಸೇವಾದಳ ಸೇರಿದಂತೆ ಹಲವು ಸ್ವಯಂಸೇವಕ ಸಂಘಟನೆಗಳ ಕಾರ್ಯಕರ್ತರನ್ನು ಈ ಬಾರಿ ವಿಶೇಷ ಪೊಲೀಸ್ ಪಡೆ ಸಿಬ್ಬಂದಿಯಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹರಿದ್ವಾರದಲ್ಲಿ ಏಪ್ರಿಲ್ 30ರವರೆಗೂ ಕುಂಭಮೇಳ
ಹರಿದ್ವಾರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆ ಆಗುತ್ತಿದ್ದರೂ ಏಪ್ರಿಲ್ 27 ಮತ್ತು ಏಪ್ರಿಲ್ 30ರವರೆಗೂ ಶಾಹಿ ಸ್ನಾನ್ ಮುಂದುವರಿಸಲಾಗುವುದು. ಕುಂಭಮೇಳದ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರದಿಂದ ಯಾವುದೇ ರೀತಿ ಅಧಿಸೂಚನೆ ಬಂದಿಲ್ಲ ಎಂದು ಕುಂಭಮೇಳದ ಅಧಿಕಾರಿ ದೀಪಕ್ ರಾವತ್ ತಿಳಿಸಿದ್ದಾರೆ. 12 ವರ್ಷಗಳಿಗೆ ಒಂದು ಬಾರಿ ನಡೆಯುವ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳವರೆಗೂ ನಡೆಯುತ್ತದೆ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಏಪ್ರಿಲ್ 1 ರಿಂದ 30ರವರೆಗೂ ಮಾತ್ರ ಕುಂಭಮೇಳ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ.