ಉತ್ತರಾಖಂಡದಲ್ಲಿ ಮದರಸಾ ಆರಂಭಿಸಲಿರುವ ಆರೆಸ್ಸೆಸ್
ದಿಯೋಬಂದ್, ಮೇ 21: ಹಿಂದೂ ಪರ ಸಿದ್ಧಾಂತದಿಂದ ಗುರುತಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಹೊಸ ಹೆಜ್ಜೆ ಇರಿಸಿದೆ. ದೇಶದಾದ್ಯಂತ ಮದರಸಾಗಳನ್ನು ಆರಂಭಿಸುವ ತನ್ನ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಅದು ಮುಂದಾಗಿದೆ. ಉತ್ತರಾಖಂಡದಲ್ಲಿ ತನ್ನ ಮೊದಲ ಮದರಸಾವನ್ನು ಸ್ಥಾಪಿಸಲು ಆರೆಸ್ಸೆಸ್ ಸಿದ್ಧತೆ ನಡೆಸಿದೆ. ಈಗಾಗಲೇ ಅದಕ್ಕಾಗಿ ಭೂಮಿಯನ್ನು ಖರೀದಿಸಿದ್ದು, ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ದೇಶದಾದ್ಯಂತ ಮದರಸಾಗಳನ್ನು ಸ್ಥಾಪಿಸುವ ಆರೆಸ್ಸೆಸ್ನ ಯೋಜನೆ ಇತ್ತೀಚಿನದ್ದೇನಲ್ಲ. ಹಲವು ವರ್ಷಗಳಿಂದಲು ಅದು ಈ ಬಗ್ಗೆ ಚಿಂತನೆ ನಡೆಸಿತ್ತು. ಅದೀಗ ಕಾರ್ಯರೂಪಕ್ಕೆ ಬರುವ ಸೂಚನೆ ದೊರಕಿದೆ. ಇಸ್ಲಾಮಿಕ್ ಶಿಕ್ಷಣದ ಜತೆಗೆ ಆಧುನಿಕ ಶಿಕ್ಷಣವನ್ನೂ ನೀಡುವುದು ಆರೆಸ್ಸೆಸ್ನ ಮದರಸಾ ಸ್ಥಾಪನೆ ಉದ್ದೇಶವಾಗಿದೆ.
ಆರೆಸ್ಸೆಸ್ನ ಅಂಗ ಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ನ ಮುಖ್ಯಸ್ಥೆ ಸೀಮಾ ಜಾವೇದ್ ಈ ವರದಿಯನ್ನು ಖಚಿತಪಡಿಸಿದ್ದಾರೆ. ಮದರಸಾ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಜಮೀನನ್ನು ಸಹ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ: ಗೋರಖ್ಪುರ ಮದರಸಾದಲ್ಲಿ ಸಂಸ್ಕೃತ ಪಾಠ
ಮುಸ್ಲಿಂ ರಾಷ್ಟ್ರೀಯ ಮಂಚ್ ಈಗಾಗಲೇ ಐದು ಕಡೆ ಮದರಸಾಗಳನ್ನು ನಡೆಸುತ್ತಿದೆ. ಉತ್ತರಪ್ರದೇಶದ ಮೊರಾದಾಬಾದ್, ಬುಲಂದ್ಷಹರ್, ಹಾಪುರ್್ಗಳಲ್ಲಿ ತಲಾ ಒಂದು ಹಾಗೂ ಮುಜಫ್ಫರ್ಪುರದಲ್ಲಿ ಎರಡು ಮದರಾಸಗಳನ್ನು ಸಂಘದ ಅಡಿಯಲ್ಲಿ ನಡೆಸಲಾಗುತ್ತಿದೆ.
50 ಬಾಲಕಿಯರಿಗೆ ಪ್ರವೇಶ
ಉತ್ತರಾಖಂಡ ರಾಜ್ಯವನ್ನು ದೇವಭೂಮಿ ಎಂದು ಕರೆಯಲಾಗುತ್ತದೆ. ಆರೆಸ್ಸೆಸ್ನ ಮೊದಲ ಮದರಸಾ ಸ್ಥಾಪನೆಗೆ ಇಲ್ಲಿಯೇ ಭೂಮಿ ಗುರುತಿಸಿದೆ. ಆರೆಸ್ಸೆಸ್ನ ಸಹ ಸಂಘಟನೆ ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಮದರಸಾವನ್ನು ಆರಂಭಿಸುತ್ತಿದೆ. ಆರಂಭದಲ್ಲಿಯೇ ಇದು 50 ಬಾಲಕಿಯರಿಗೆ ಪ್ರವೇಶ ಕಲ್ಪಿಸಲಿದೆ. ಮೂಲಗಳ ಪ್ರಕಾರ ಆರೆಸ್ಸೆಸ್ನ ಮೊದಲ ಮದರಸಾ, ಹರಿದ್ವಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ಥಾಪನೆಯಾಗಲಿದೆ.
ಉತ್ತರಾಖಂಡ್ ಮದರಸಾಗಳ ಪಠ್ಯದಲ್ಲಿ ಸಂಸ್ಕೃತ ಅಳವಡಿಕೆ
ಮೋದಿ ಆಶಯದಂತೆ ಪಠ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆಗೆ ಅನುಗುಣವಾಗಿ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ಮದರಸಾದ ಶಿಕ್ಷಣವು ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಇರುವ ರೀತಿಯಲ್ಲಿರಬೇಕು ಎಂದು ಮೋದಿ ಬಯಸಿದ್ದರು.
ಮುಸ್ಲಿಂ ಸಮುದಾಯದಲ್ಲಿ ಮಿಶ್ರ ಪ್ರತಿಕ್ರಿಯೆ
ಈ ವರದಿಗಳು ಮುಸ್ಲಿಂದ ಸಮುದಾಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿವೆ. ಇಂತಹ ಮದರಸಾಗಳ ಸ್ಥಾಪನೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇದು ಸಂಘ ಪರಿವಾರದ ಗುಪ್ತ ಸಂಚು ಇರಬಹುದು ಎಂದು ಶಂಕಿಸಿದ್ದಾರೆ.
ಮದರಸಾದಿಂದ ಭಿನ್ನಾಭಿಪ್ರಾಯ ಸೃಷ್ಟಿ
ಮುಸ್ಲಿಮರ ಸಂಸ್ಕೃತಿಗೆ ಅಡ್ಡ ಪರಿಣಾಮ ಬೀರುವುದಕ್ಕಾಗಿಯೇ ಸಂಘಪರಿವಾರವು ಮದರಸಾಗಳ ಸ್ಥಾಪನೆಗೆ ಮುಂದಾಗಿದೆ ಎಂಬುದನ್ನು ಆರೆಸ್ಸೆಸ್ನ ಇತಿಹಾಸವೇ ತಿಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಮದರಸಾಗಳನ್ನು ಸ್ಥಾಪಿಸುವ ಮೂಲಕ ಮುಸ್ಲಿಮರು ಮತ್ತು ವಿದ್ವಾಂಸರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಅವರು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.