ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯನ್ನು ಹೊಗಳಿದ ಆರ್ಎಸ್ಎಸ್
ನವದೆಹಲಿ, ಮೇ 29: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀಡಿದ ಆಹ್ವಾನವನ್ನು ಒಪ್ಪಿಕೊಂಡ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ವ್ಯಕ್ತಿತ್ವವನ್ನು ಆರ್ಎಸ್ಎಸ್ ಕೊಂಡಾಡಿದೆ.
ಜೂನ್ ಏಳರಂದು ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಂಘ ಶಿಕ್ಷ ವರ್ಗದ (ಎಸ್ಎಸ್ವಿ) ಮೂರನೇ ವಾರ್ಷಿಕೋತ್ಸವದಲ್ಲಿ ಪ್ರಣವ್ ಮುಖರ್ಜಿ ಭಾಷಣ ಮಾಡಲಿದ್ದಾರೆ.
ಆರೆಸ್ಸೆಸ್ ತೃತೀಯ ವರ್ಷ ಸಮಾರಂಭಕ್ಕೆ ಪ್ರಣಬ್ ಮುಖರ್ಜಿ ಅತಿಥಿ!
'ಸಂಘವನ್ನು ಬಲ್ಲವರು ಮತ್ತು ಅರ್ಥಮಾಡಿಕೊಂಡವರಿಗೆ ಇದೇನೂ ಅಚ್ಚರಿಯ ಸಂಗತಿಯಲ್ಲ. ಏಕೆಂದರೆ ತನ್ನ ಕಾರ್ಯಕ್ರಮಗಳಿಗೆ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನೇ ಆರ್ಎಸ್ಎಸ್ ಯಾವಾಗಲೂ ಆಹ್ವಾನಿಸುತ್ತದೆ. ಈ ಬಾರಿ ನಾವು ಪ್ರಣವ್ ಮುಖಂರ್ಜಿ ಅವರನ್ನು ಆಹ್ವಾನಿಸಿದ್ದೆವು. ನಮ್ಮ ಆಹ್ವಾನವನ್ನು ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಆರ್ಎಸ್ಎಸ್ ಹೇಳಿಕೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಧಾನ ಭಾಷಣ ಮಾಡಲಿದ್ದಾರೆ. ಪ್ರತಿ ವರ್ಷವೂ ದೇಶದ ಎಲ್ಲ ಕಡೆಯಿಂದ ಬಂದ ಕಾರ್ಯಕರ್ತರು 25 ದಿನಗಳವರೆಗೆ ಒಕ್ಕೂಟ ಕಾರ್ಯದ ತರಬೇತಿಯನ್ನು ಪಡೆದುಕೊಳ್ಳುತ್ತಾರೆ.
ಈ ವರ್ಷ ಮೇ 14ರಂದು ತರಬೇತಿ ಆರಂಭವಾಗಿದ್ದು, ಜೂನ್ 7ರಂದು ಮುಕ್ತಾಯಗೊಳ್ಳಲಿದೆ. ದೇಶದ ಎಲ್ಲ ರಾಜ್ಯಗಳಿಂದಲೂ ಒಟ್ಟು 709 ಸ್ವಯಂ ಕಾರ್ಯಕರ್ತರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ವಿವರಿಸಿದೆ.
If former President Pranab Mukherjee joins, it is good. What is the problem if the former President visits RSS event. RSS is an organisation of the nation. There should not be any political untouchability in the country: Union Minister Nitin Gadkari pic.twitter.com/8QrilCljWa
— ANI (@ANI) 29 May 2018
ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪಾಲ್ಗೊಳ್ಳುವುದರಲ್ಲಿ ಯಾವ ತೊಂದರೆಯೂ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆರ್ಎಸ್ಎಸ್ ದೇಶದ ಒಂದು ಸಂಘಟನೆ. ದೇಶದಲ್ಲಿ ಯಾವುದೇ ರಾಜಕೀಯ ಅಸ್ಪೃಶ್ಯತೆ ಇರಬಾರದು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ಅನ್ನು ವಿರೋಧಿಸಿಕೊಂಡು ಬಂದಿರುವ ಆರ್ಎಸ್ಎಸ್, ತನ್ನ ಕಾರ್ಯಕ್ರಮಕ್ಕೆ ಕಾಂಗ್ರೆಸ್ನ ಹಿರಿಯ ಮುಖಂಡರಾದ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ, ಆರ್ಎಸ್ಎಸ್ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ಗೆ ಇದು ಕಸಿವಿಸಿ ಉಂಟು ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಆರ್ಎಸ್ಎಸ್ ವಿರೋಧಿಗಳು ಆರ್ಎಸ್ಎಸ್ನ ಆಹ್ವಾನವನ್ನು ಮುಖರ್ಜಿ ಒಪ್ಪಿಕೊಳ್ಳಬಾರದು. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಆರ್ಎಸ್ಎಸ್ ಪರ ಒಲವು ಹೊಂದಿರುವ ಜನರು ಪ್ರಣವ್ ಮುಖರ್ಜಿ ಅವರಿಗೆ ಆಹ್ವಾನ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.