RSS ಮುಖ್ಯಸ್ಥರ ಮೇಲೆ ಕಾಂಗ್ರೆಸ್ ನಡೆಸಿದ್ದ ಭಾರೀ ಸಂಚು ಬಹಿರಂಗ!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರನ್ನು ಉಗ್ರರ ಪಟ್ಟಿಗೆ ಸೇರಿಸಲು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದ ವಿಚಾರವನ್ನು ಟೈಮ್ಸ್ ನೌ ವಾಹಿನಿ ಬಹಿರಂಗಗೊಳಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರನ್ನು ಉಗ್ರರ ಪಟ್ಟಿಗೆ ಸೇರಿಸಲು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದ ವಿಚಾರ ಬಹಿರಂಗಗೊಂಡಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲು ಎರಡು ದಿನ ಬಾಕಿ ಇರುತ್ತಲೇ, ಹಿಂದಿನ ಯುಪಿಎ ಸರಕಾರ ಮೋಹನ್ ಭಾಗವತ್ ಅವರನ್ನು ವಿಚಾರಣೆಗೆ ಒಳಪಡಿಸಿ, ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅವರನ್ನು ಸಿಲುಕಿಸಲು ರಾಷ್ಟ್ರೀಯ ತನಿಖಾ ತಂಡದ (NIA) ಮೇಲೆ ಒತ್ತಡ ಹೇರಿತ್ತು ಎನ್ನುವ ವಿಚಾರವನ್ನು ಟೈಮ್ಸ್ ನೌ ವಾಹಿನಿ ಬಹಿರಂಗಪಡಿಸಿದೆ.
ಅಜ್ಮೀರ್ ಮತ್ತು ಮಾಲೆಗಾಂನಲ್ಲಿ ನಡೆದ ಬಾಂಬ್ ಸ್ಪೋಟದ ವಿಚಾರದಲ್ಲಿ, ಮೋಹನ್ ಭಾಗವತ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸುವಂತೆ ತನಿಖಾ ತಂಡದ ಪ್ರಮುಖರಿಗೆ ಯುಪಿಎ ಸರಕಾರ ಭಾರೀ ಒತ್ತಡ ಹೇರಿತ್ತು. ಆದರೆ ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ.
ಸುಶೀಲ್ ಕುಮಾರ್ ಶಿಂದೆ ಕೇಂದ್ರ ಗೃಹ ಸಚಿವರಾಗಿದ್ದ ವೇಳೆ ನಡೆದ ಈ ಬಾಂಬ್ ಸ್ಪೋಟದ ಪ್ರಕರಣದ ನಂತರ 'ಹಿಂದೂ ಉಗ್ರರು' ಎನ್ನುವ ಪದವನ್ನು ಯುಪಿಎ ಬಳಸಿತ್ತು. ಫೆಬ್ರವರಿ 2014ರಲ್ಲಿ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ, ಸ್ವಾಮೀ ಆಸೀಮಾನಂದ, ಭಾಗವತ್ ಘಟನೆಗೆ ಪ್ರಚೋದಕರು ಎಂದು ಹೇಳಿದ್ದರು.
ಮ್ಯಾಗಜೀನ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಜ್ಮೀರ್ ಮತ್ತು ಮಾಲೆಗಾಂನಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಪ್ರಚೋದನೆ ನೀಡಿದ್ದು RSS ಮುಖ್ಯಸ್ಥ ಮೋಹನ್ ಭಾಗವತ್ ಎಂದು ಪಂಚಕುಲಾ ಜೈಲಿನಲ್ಲಿರುವ ಸ್ವಾಮೀ ಆಸೀಮಾನಂದ ಹೇಳಿದ್ದರು. ಮುಂದೆ ಓದಿ..
ಹಿಂದೂ ಉಗ್ರರ ಪಟ್ಟಿಗೆ ಸೇರಿಸಲು ಯುಪಿಎ ಸರಕಾರದ ಹುನ್ನಾರ
ಆಸೀಮಾನಂದ ಹೇಳಿಕೆಯನ್ನು ಮುಂದಿಟ್ಟುಕೊಂದು, ಭಾಗವತ್ ಅವರನ್ನು ವಿಚಾರಣೆಗೆ ಕರೆಸಿ, ಹಿಂದೂ ಉಗ್ರರ ಪಟ್ಟಿಗೆ ಸೇರಿಸಲು ಯುಪಿಎ ಸರಕಾರ ಹುನ್ನಾರ ನಡೆಸಿತ್ತು. ಆದರೆ ಪ್ರಭಲ ದಾಖಲೆಯಿಲ್ಲದೆ ಮೋಹನ್ ಭಾಗವತ್ ಅವರನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಹೇಳಿದ್ದರು ಎಂದು ವಾಹಿನಿ ವರದಿ ಮಾಡಿದೆ.
ಟೇಪ್ ಅನ್ನು ಫೋರೆನ್ಸಿಕ್ ಮಾಪನಕ್ಕೆ ಕಳುಹಿಸಿದ್ದ ತನಿಖಾ ತಂಡದ ಪ್ರಮುಖ
ತನಿಖಾ ತಂಡದ ಮುಖ್ಯಸ್ಥರಾಗಿದ್ದ ಶರದ್ ಕುಮಾರ್, ಟೇಪಿನ ಆಧಾರದ ಮೇಲೆ ಭಾಗವತ್ ಅವರನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ ಎಂದು ಯುಪಿಎ ಸಚಿವರಿಗೆ ಹೇಳಿ, ಸ್ವಾಮೀ ಆಸೀಮಾನಂದ ನೀಡಿದ್ದ ಹೇಳಿಕೆಯ ಟೇಪ್ ಅನ್ನು ಫೋರೆನ್ಸಿಕ್ ಮಾಪನಕ್ಕೆ ಕಳುಹಿಸಿದ್ದರು.
ಅಜ್ಮೀರ್ ಮತ್ತು ಮಾಲೆಗಾಂನ ಬಾಂಬ್ ಸ್ಪೋಟ
ರಾಷ್ಟ್ರೀಯ ತನಿಖಾ ತಂಡ ನಡೆಸುತ್ತಿದ್ದ ಅಜ್ಮೀರ್ ಮತ್ತು ಮಾಲೆಗಾಂನಲ್ಲಿ ನಡೆದ ಬಾಂಬ್ ಸ್ಪೋಟದ ವಿಚಾರಣೆಯಲ್ಲಿ ಅಂದಿನ ಕೇಂದ್ರ ಗೃಹಸಚಿವ ಶಿಂಧೆ ಮತ್ತು ಇತರ ಕೇಂದ್ರ ಸಚಿವರು ನೇರವಾಗಿ ತನಿಖಾ ತಂಡದ ಮೇಲೆ ಒತ್ತಡ ಹೇರಿದ್ದರು ಎಂದು ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.
ಟೈಮ್ಸ್ ನೌ ಬಹಿರಂಗ ಪಡಿಸಿದ ಸ್ಪೋಟಕ ಸುದ್ದಿ
ಟೈಮ್ಸ್ ನೌ ಬಹಿರಂಗ ಪಡಿಸಿದ ಈ ಸ್ಪೋಟಕ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಾಹಿನಿ ಬಹಿರಂಗಗೊಳಿಸಿರುವ ಈ ಮಾಹಿತಿಯನ್ನ ನಾನು ಒಪ್ಪುತ್ತೇನೆ. ಎಲ್ಲಾ ಮಾಹಿತಿಗಳು ಹೊರಗೆ ಬರಬೇಕು ಎಂದು ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾಖಲೆ ಪರಿಶೀಲಿಸುತ್ತೇವೆ
ಸರಕಾರ ವಾಹಿನಿ ಬಹಿರಂಗ ಪಡಿಸಿರುವ ದಾಖಲೆಯ ಬಗ್ಗೆ ಪರಿಶೀಲನೆ ನಡೆಸಲಿದೆ. ಮೋಹನ್ ಭಾಗವತ್ ಮೇಲೆ ಯುಪಿಎ ಸರಕಾರ ನಡೆಸಿದ್ದ ಸಂಚು ಸಾರ್ವಜನಿಕರಿಗೆ ತಿಳಿಯಲೇಬೇಕು - ರವಿಶಂಕರ್ ಪ್ರಸಾದ್.