ಶಬರಿಮಲೆ ವಿವಾದದ ಬಗ್ಗೆ ಭಾಗವತ್ ವಿಷಾದದ ಪ್ರತಿಕ್ರಿಯೆ
ನಾಗ್ಪುರ, ಅಕ್ಟೋಬರ್ 18: "ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ದಾವೆ ಹೂಡಿದ್ದವರ್ಯಾರೂ ದೇವಾಲಯಕ್ಕೆ ಹೋಗುವವರಲ್ಲ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು.
ನಾಗ್ಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಭಾಷಣದ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಭುಗಿಲೆದ್ದ ಆಕ್ರೋಶಸದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಶಬರಿಮಲೆಯಲ್ಲಿ ಭುಗಿಲೆದ್ದ ಆಕ್ರೋಶ: ಇಂದು ಕೇರಳದಲ್ಲಿ ಮುಷ್ಕರ
ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು, ಬಹುಸಂಖ್ಯಾತ ಮಹಿಳೆಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾಗವತ್ ಹೇಳಿದ್ದೇನು?
"ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟಿನ ಮೊರೆಹೋಗಿದ್ದವರ್ಯಾರೂ ದೇವಾಲಯಕ್ಕೆ ತೆರಳುವವರಲ್ಲ. ಈ ಸಂಪ್ರದಾಯ ಎಷ್ಟೋ ಕಾಲದಿಂದ ನಡೆದುಕೊಂಡು ಬಂದಿದೆ. ನಾವು ಅದನ್ನು ಅನುಸರಿಸಬೇಕು. ಈ ನಿಯಮವನ್ನೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲಿಸುತ್ತಿದ್ದಾರೆ. ಆದರೆ ಆ ಮಹಿಳೆಯರ ಭಾವನೆಗಳನ್ನು ಪರಿಗಣಿಸಲಾಗಿಲ್ಲ" ಎಂದು ಮೋಹನ್ ಭಾಗವತ್ ವಿಷಾದ ವ್ಯಕ್ತಪಡಿಸಿದರು.
ಕೇರಳದಲ್ಲಿ ಮುಷ್ಕರ
ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಬುಧವಾರ ದೇವಾಲಯದ ಬಾಗಿಲು ತೆರೆದಿದ್ದು, ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರನ್ನು ತಡೆದ ಘಟನೆ ನಡೆದಿತ್ತು. ಹಲವು ಮಹಿಳಾ ಪತ್ರಕರ್ತರಿಗೂ ದೇವಾಲಯದ ಬಳಿಗೆ ಬರಲು ಅವಕಾಶ ದೊರೆತಿರಲಿಲ್ಲ. ಆರೆಸ್ಸೆಸ್, ಕಾಂಗ್ರೆಸ್, ಬಿಜೆಪಿ ಮತ್ತು ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ, ಅಯ್ಯಪ್ಪ ಭಕ್ತರು ಸೇರಿದಂತೆ ಹಲವರು ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಕೇರಳದಾದ್ಯಂತ ಮುಷ್ಕರ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ದೇವಾಲಯದ ಸುತ್ತಮುತ್ತಲ ನಾಲ್ಕು ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಅಯ್ಯಪ್ಪನ ಸನ್ನಿಧಾನ ರಣಾಂಗಣ, ಮೊದಲ ದಿನ ಸಂಪ್ರದಾಯವಾದಿಗಳ ಮೇಲುಗೈ
Array |
ಮುಖ್ಯ ಪುರೋಹಿತರ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ಕೇವಲ ಈ ನೆಲದ ಕಾನೂನಿನ ಬಗ್ಗೆ ಮಾತ್ರ ಯೋಚಿಸುತ್ತದೆ. ಸಂಪ್ರದಾಯ ಮತ್ತು ನಂಬಿಕೆಯ ಬಗ್ಗೆಯಲ್ಲ. ಎಷ್ಟೋ ಭಕ್ತರಿಗೆ ಈಗಲೂ ಹಳೇ ನಿಯಮವೇ ಜಾರಿಗೆ ಬರಬೇಕು ಎಂಬ ಆಶಯವಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದೇವಾಲಯದೆದುರು ಅಶಾಂತಿ ತಲೆದೋರಿದೆ. ದಯವಿಟ್ಟು ಎಲ್ಲರೂ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ನಾನು ಮನವಿ ಮಾಡುತ್ತೇವೆ ಎಂದು ಶಬರಿಮಲೆಯ ಮುಖ್ಯಪುರೋಹಿತ ಕಂದರಾರು ರಾಜೀವರು ಹೇಳಿದರು.
ಮೋಹನ್ ಭಾಗವತ್ ವಿಜಯದಶಮಿ ಭಾಷಣದ ಮುಖ್ಯಾಂಶಗಳು
ಐತಿಹಾಸಿಕ ತೀರ್ಪು
ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಪ್ರಮುಖ ತೀರ್ಪುಗಳಲ್ಲಿ ಇದೂ ಒಂದು. 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು. ಈ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ