ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆಯಿಂದ ಬಿಜೆಪಿಗೆ ನಡುಕ
ನವದೆಹಲಿ, ಆಗಸ್ಟ್ 4: ಗುಜರಾತ್ ನಲ್ಲಿ ತನ್ನ ಮೂರು ಅವಧಿಯ ಆಡಳಿತದಿಂದ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ನರೇಂದ್ರ ಮೋದಿ, ಪ್ರಧಾನಿಯಾದ ನಂತರ ಗುಜರಾತ್ ನಲ್ಲಿ ಬಿಜೆಪಿ ಪ್ರಾಬಲ್ಯವನ್ನು ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಲ್ಲಿ ವಿಫಲರಾಗುತ್ತಿದ್ದಾರೆಯೇ?
ಬಿಜೆಪಿಯ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ನಡೆಸಿದ ಆಂತರಿಕ ಸಂಸ್ಥೆಯ ಪ್ರಕಾರ, ಈಗ ಗುಜರಾತ್ ನಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಸೋಲು ಖಚಿತ ಎನ್ನುವ ಅಂಶ ಸಮೀಕ್ಷೆಯಿಂದ ಹೊರಬಿದ್ದಿದೆ. (ರಾಜೀನಾಮೆಗೆ ಮುಂದಾದ ಗುಜರಾತ್ ಸಿಎಂ)
ಆದರೆ, ದೇಶದ ಅತ್ಯಂತ ಹೆಚ್ಚು ಅಸೆಂಬ್ಲಿ ಮತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆಯ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ.
ಗುಜರಾತ್ ನಲ್ಲಿ ನಾಯಕತ್ವದ ಸಮಸ್ಯೆಯ ಜೊತೆಗೆ, ಪಕ್ಷದ ಆಂತರಿಕ ಭಿನ್ನಮತ, ಪಟೇಲ್ ಸಮುದಾಯ ಹೋರಾಟ ಮತ್ತು ದಲಿತರ ಮೇಲಿನ ದೌರ್ಜನ್ಯದಿಂದಾಗಿ ಬಿಜೆಪಿಯ ಜನಪ್ರಿಯತೆ ದಿನೇದಿನೇ ಕುಗ್ಗುತ್ತಿದೆ.
RSS ಮತ್ತುಎಬಿಪಿ ನ್ಯೂಸ್ - ಸಿಸಿರೋ ನಡೆಸಿದ ಸಮೀಕ್ಷೆಯ ಪ್ರಕಾರ, ಯಾವ ಪಕ್ಷದ ಪರ ಜನರ ಒಲವು ಹೆಚ್ಚಿದೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಗುಜರಾತ್ ಮುಖ್ಯಮಂತ್ರಿ
ಪಟೇಲ್ ಸಮುದಾಯದ ಹೋರಾಟ ಮತ್ತು ಉನಾದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯ ನಂತರ RSS ಈ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಗುಜರಾತ್ ಸಿಎಂ ಆನಂದಿಬೆನ್ ಈ ಎರಡೂ ಘಟನೆಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ವರದಿ ಹೊರಬಿದ್ದಿದೆ. ಈ ಕಾರಣಕ್ಕಾಗಿಯೇ ಆನಂದಿಬೆನ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು ಎಂದು ಮೂಲಗಳು ತಿಳಿಸಿವೆ.
ಗುಜರಾತ್ ನಲ್ಲಿ ಬಿಜೆಪಿಗೆ ಮುಖಭಂಗ
ಇದೀಗ ಚುನಾವಣೆ ನಡೆದರೆ 182 ಸದಸ್ಯಬಲದ ಅಸೆಂಬ್ಲಿಯಲ್ಲಿ ಬಿಜೆಪಿ ಕೇವಲ 60-65 ಸ್ಥಾನವನ್ನು ಮಾತ್ರ ಗಳಿಸಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 117 ಸೀಟು ಗೆದ್ದಿತ್ತು.
ಉತ್ತರಪ್ರದೇಶ
ಎಬಿಪಿ ನ್ಯೂಸ್-ಸಿಸೆರೋ ಪೋಲ್ ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ ಮತದಾರರ ಒಲವು ಬಿಜೆಪಿ ಪರವಿದೆ. ಸಮೀಕ್ಷೆಯಲ್ಲಿ ಶೇ.32ರಷ್ಟು ಜನ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಎಬಿಪಿ ನ್ಯೂಸ್ - ಉತ್ತರಪ್ರದೇಶ
ಜುಲೈ 24 ಮತ್ತು 25ರಂದು ರಾಜ್ಯದ ಹತ್ತು ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ 1000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಜನರ ಅಭಿಪ್ರಾಯ ಶೇಕಡಾವಾರು ಅಭಿಪ್ರಾಯ ಇಂತಿದೆ.
ಬಿಜೆಪಿ - 32, ಎಸ್ಪಿ - 26, ಬಿಎಸ್ಪಿ - 24, ಕಾಂಗ್ರೆಸ್ - 7 ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪ್ರಿಯಾಂಕ ಗಾಂಧಿ ವಾಧ್ರಾ
ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸನ್ನು ಮರಳಿ ಅಧಿಕಾರಕ್ಕೆ ತರುವರೇ ಎನ್ನುವ ಪ್ರಶ್ನೆಗೆ ಶೇ.19 ಮಂದಿ ಹೌದು ಎಂದಿದ್ದಾರೆ. ಗುಜರಾತ್ ನಲ್ಲಿ ಈಗ ಚುನಾವಣೆ ನಡೆದರೆ ಕಾಂಗ್ರೆಸ್ಸಿಗೆ ಲಾಭವಾಗಲಿದೆ.