ಕ್ರಿಶ್ಚಿಯನ್ ಮಿಶನರಿಗಳ ಹಣದ ಮೂಲ ಕುರಿತು ಮೌನವೇಕೆ?
ಉತ್ತರ ಪ್ರದೇಶದಲ್ಲಿ ಕೆಲವು ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಪುನರ್ ಮತಾಂತರಗೊಂಡ ಪ್ರಕರಣವನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಆದರೆ, ದೇಶದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿರುವ ಹಿಂದೂಗಳ ಮತಾಂತರವನ್ನು ಇದುವರೆಗೂ ಪ್ರಶ್ನಿಸಿಲ್ಲ. ನಂಬಲರ್ಹ ಮೂಲದ ಪ್ರಕಾರ ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರತಿ ವರ್ಷ 10,500 ಕೋಟಿ ರೂ. ಹಣ ಬರುತ್ತಿದೆ. ಆದರೆ, ಈ ಕುರಿತು ಯಾರೂ ಚಕಾರ ಎತ್ತಿಲ್ಲ.
ಅಮೆರಿಕನ್ ವೇದ ಪುಸ್ತಕದ ಲೇಖಕ ಫಿಲಿಪ್ ಗೋಲ್ಡ್ ಬರ್ಗ್ ಪ್ರಕಾರ ಇದು ಮತಾಂತರವಲ್ಲ, ದಬ್ಬಾಳಿಕೆ. ಕ್ರಿಶ್ಚಿಯನ್ ಮತಾಂತರಿಗಳು ಮಾಡುತ್ತಿರುವುದು ಧಾರ್ಮಿಕ ಬೋಧನೆ ಅಲ್ಲ. ಬದಲಿಗೆ ಕ್ರೈಸ್ತರ ಸಂಖ್ಯೆ ಹೆಚ್ಚಳ ಮಾತ್ರ.
2011ರಲ್ಲೇ ಕುತಂತ್ರ ಬಯಲು: ಮತಾಂತರಕ್ಕಾಗಿಯೇ ಭಾರತಕ್ಕೆ ಸಾವಿರಾರು ಕೋಟಿ ರೂ. ಹರಿದುಬರುತ್ತಿರುವುದು 2011ರಲ್ಲಿ ಬಯಲಾಗಿತ್ತು. ವಿಶೇಷವೆಂದರೆ ಈ ಎಲ್ಲ ಹಣಗಳೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮಡಿಲಿಗೆ ಬಿದ್ದಿದ್ದವು. ಆದರೆ, ಈ ಭಾರೀ ಮೊತ್ತದ ಹಣಕ್ಕೆ ಲೆಕ್ಕವೇ ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಯಾವುದೇ ಸ್ವಯಂ ಸೇವಾ ಸಂಸ್ಥೆಯೂ ಸರಿಯಾದ ಉತ್ತರ ನೀಡಿರಲಿಲ್ಲ.
ಧಾರ್ಮಿಕ ಮತಾಂತರಗಳ ಕುರಿತು ಬೆಂಗಳುರು ಇನಿಶಿಯೇಟಿವ್ ಫಾರ್ ರಿಲೀಜಿಯಸ್ ಡೈಲಾಗ್ (ಬಿಐಆರ್ಡಿ) ಎಂಬ ಸಂಸ್ಥೆಯು ಸಮೀಕ್ಷೆ ನಡೆಸಿತು. ಅದರಲ್ಲಿ ಮತಾಂತರಕ್ಕಾಗಿ ಆಕ್ರಮಣಕಾರಿ ಮಾರುಕಟ್ಟೆ ತಂತ್ರದ ಮೂಲಕ ಅನೈತಿಕ ಮಾರ್ಗ ಅನುಸರಿಸಿದ್ದು ಬಯಲಾಯಿತು. ಕೆಲವರಿಗೆ ಪ್ರೋತ್ಸಾಹ ಧನವನ್ನೂ ನೀಡಲಾಗಿತ್ತು. [ಎತ್ತ ಸಾಗುತ್ತಿದೆ ಮಂಗಳೂರು?]
ಆದರೆ, ಬಲವಂತದ ಮತಾಂತರ ಕೂಡ ಧರ್ಮಕ್ಕಾಗಿ ಅಲ್ಲ, ಬದಲಿಗೆ ಅವರ ಸ್ವಾರ್ಥಕ್ಕಾಗಿ ಎಂಬುದು ಬಯಲಾಯಿತು. ಗೋಲ್ಡ್ ಬರ್ಗ್ ಹೇಳುವ ಪ್ರಕಾರ ಇವರೆಲ್ಲರಿಗೂ ಅಮೆರಿಕ ಮೂಲದ ಮೂಲಭೂತವಾದಿಗಳು ನಿಧಿ ಒದಗಿಸುತ್ತಾರೆ.
ಉದ್ಯೋಗ ನೀಡಿ ಮರಳು ಮಾಡ್ತಾರೆ: ಕೇವಲ ಬೋಧನೆ ಹಾಗೂ ಪ್ರೋತ್ಸಾಹಧನಕ್ಕೆ ಮರುಳಾಗದವರಿಗೆ ಉದ್ಯೋಗ ನೀಡಿ ಮತಾಂತರಿಸಲಾಯಿತು. ಇವರು ಧರ್ಮ ತೊರೆದರೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗುತ್ತಿತ್ತು. ಇನ್ನು ಕೆಲವರು ಸ್ವಾಮಿಗಳಂತೆ ವೇಷ ಧರಿಸಿದರು. ನಂತರ ಅಮಾಯಕ ಜನರಲ್ಲಿ ಹಿಂದೂ ದೇವರೆಂದರೆ ಕ್ರಿಸ್ತನ ತಪ್ಪು ಪ್ರಯೋಗ ಎಂದು ನಂಬಿಸಲಾಯಿತು.
ಸರ್ಕಾರವೇ ಹೇಳುವ ಅಂಕಿ ಅಂಶದ ಪ್ರಕಾರ ಕೆಲವು ಎನ್ಜಿಓ ಗಳಿಗೆ ಕ್ರೈಸ್ತ ಮಿಶನರಿಗಳೇ ಹಣ ನೀಡುತ್ತವೆ. ಮತಾಂತರದ ಉದ್ದೇಶಕ್ಕಾಗಿ ನಾಲ್ಕು ಎನ್ಜಿಓ ಗಳ ಖಾತೆಗಳಿಗೆ ಸುಮಾರು 10,500 ಕೋಟಿ ರೂ.ಗಳಷ್ಟು ಹಣ ಜಮಾ ಆಗಿದೆ. ಈ ಮೂಲಕ ದೇಶದ ವಿವಿಧ ಮತಾಂತರದ ಕೇಂದ್ರಗಳಿಗೆ ಹಣ ರವಾನಿಸಲಾಯಿತು.
ಎಲ್ಲೆಲ್ಲಿಂದ ಹಣ ರವಾನೆ?: ಇಷ್ಟೊಂದು ಹಣಗಳು ಅಮೆರಿಕ, ಜರ್ಮನಿ, ಯುನೈಟೆಡ್ ಕಿಂಗ್ಡಮ್, ನೆದರ್ಲ್ಯಾಂಡ್, ಸ್ಪೇನ್ ಮತ್ತು ಇಟಲಿ ಮೂಲಕ ಸರಬರಾಜಾಗುತ್ತಿವೆ ಎನ್ನಲಾಗಿದೆ.
ಓರ್ವ ಮತಾಂತರಿಯು ಐಬಿ (ಇಂಟೆಲಿಜೆನ್ಸ್ ಬ್ಯೂರೋ) ಅಧಿಕಾರಿಗೆ ಹೇಳಿದ್ದೆಂದರೆ, ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಯು ಕುರುಡುತನ ಸೃಷ್ಟಿಸಿಬಿಟ್ಟಿದೆ. ರಾಜಕಾರಣಿಗಳು ಬಾಯಿ ಮುಚ್ಚಿಕೊಂಡಿರುವುದಕ್ಕಾಗಿ ಈ ಮಿಶನರಿಗಳು ಹಣ ನೀಡುತ್ತವೆ. ಕಾನೂನು ಪ್ರಕಾರ ಬಲವಂತದ ಮತಾಂತರ ಮಾತ್ರ ಶಿಕ್ಷಾರ್ಹ ಅಪರಾಧ. ಆದರೆ, ಮಶಿನರಿಗಳು ನೀಡುವ ಭಾರೀ ಮೊತ್ತ ಎಲ್ಲರ ಬಾಯಿ ಮುಚ್ಚಿಸುತ್ತಿದೆ.
ಐಬಿ ಅಧಿಕಾರಿ ಹೇಳುವಂತೆ, 1,000 ಜನರಲ್ಲಿ ಓರ್ವ ದೂರು ನೀಡಲು ಮುಂದೆ ಬರುತ್ತಾರೆ. ಆದರೆ, ಮಶಿನರಿಗಳು ಭಾರೀ ಮೊತ್ತದ ಹಣ ಬಳಸಿ ಅವರ ಬಾಯಿ ಮುಚ್ಚಿಸುತ್ತಿವೆ. ಭಾರತೀಯರಲ್ಲಿರುವ ಕಡು ಬಡತನ ಹಾಗೂ ನಂಬಿಕೆಯ ಜೊತೆ ಆಟವಾಡುತ್ತಿವೆ.