‘ಮಹಾಭಾರತ’ದ ‘ದ್ರೌಪದಿ’ ರೂಪಾ ಈಗ ಸಂಸದೆ
ನವದೆಹಲಿ, ಅಕ್ಟೋಬರ್ 05: ಟಿವಿ ಸರಣಿ ಮಹಾಭಾರತ ಧಾರಾವಾಹಿಯಲ್ಲಿ 'ದ್ರೌಪದಿ'ಯ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ, ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರು ಮಂಗಳವಾರ ರಾಜ್ಯಸಭೆ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ.
ಪಶ್ಚಿಮ ಬಂಗಾಲದ ಅಸೆಂಬ್ಲಿಗೆ ಪ್ರವೇಶಿಸಲು ಯತ್ನಿಸಿ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈಗ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಅವರಿಂದ ತೆರವಾಗಿರುವ ಸ್ಥಾನಕ್ಕೆ ರೂಪಾ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರೂಪಾ ಅವರ ನಾಮಾಂಕಿತಗೊಳಿಸಿದರು.
1988ರಲ್ಲಿದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿ ಸರಣಿಯಲ್ಲಿ 'ದ್ರೌಪದಿ' ಪಾತ್ರ ವಹಿಸಿದ್ದ ರೂಪಾ ಅವರು ನಂತರ 90ರ ದಶಕದಲ್ಲಿ ಬೆಂಗಾಲಿ, ಹಿಂದಿ ಹಾಗೂ ಕನ್ನಡ ಚಿತ್ರದಲ್ಲೂ ನಟಿಸಿದ್ದರು. ಅವರು ಅತ್ಯಂತ ಜನಪ್ರಿಯ ನಟಿಯಾಗಿದ್ದರು. ರೂಪಾ 2015ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಸುಬ್ರಮಣಿಯನ್ ಸ್ವಾಮಿ, ನರೇಂದ್ರ ಜಾಧವ್, ನವಜ್ಯೋತ್ ಸಿಂಗ್ ಸಿಧು, ಸುರೇಶ್ ಗೋಪಿ, ಸ್ವಪನ್ ದಾಸ್ ಗುಪ್ತ ಹಾಗೂ ಮೇರಿ ಕೋಮ್ ರನ್ನು ರಾಜ್ಯಸಭಾ ಸದಸ್ಯರಾಗಿ ನೇಮಿಸಲಾಗಿತ್ತು. ಜುಲೈ ತಿಂಗಳಿನಲ್ಲಿ ಸಿಧು ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದರು. ನಂತರ ಅವಾಜ್ ಇ ಪಂಜಾಬ್ ಎಂಬ ಪಕ್ಷಕ್ಕೆ ನಾಂದಿ ಹಾಡಿದರು. (ಪಿಟಿಐ)