ರೋಹಿಂಗ್ಯ ಮುಸ್ಲಿಮರ ಬಗ್ಗೆ ಪ್ರತಿಕ್ರಿಯಿಸಿದ ಮೋಹನ್ ಭಾಗವತ್
ನವದೆಹಲಿ, ಸೆಪ್ಟೆಂಬರ್ 30: ಮ್ಯಾನ್ಮಾರ್ ನಿಂದ ಬರುತ್ತಿರುವ ವಲಸಿಗರ ರೋಹಿಂಗ್ಯ ಮುಸ್ಲಿಮರ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್ಎಸ್) ಸಂಘ ಇದೇ ಮೊದಲ ಬಾರಿಗೆ ಮಾತನಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ''ಈಗಾಗಲೇ ನಾವು ಭಾರತದಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಈ ಸಮಸ್ಯೆಯನ್ನೇ ನಮಗೆ ಇದುವರೆಗೆ ಬಗೆಹರಿಸಲು ಸಾಧ್ಯವಾಗಿಲ್ಲ. ಇದರ ಜತೆಯಲ್ಲಿ, ರೋಹಿಂಗ್ಯ ಮುಸ್ಲಿಮರಿಗೆ ಆಶ್ರಯ ನೀಡಿದರೆ ಅದು ಭಾರತದ ಆಂತರಿಕ ಭದ್ರತೆಗೆ ಹೊಸತೊಂದು ಸವಾಲು ಹಾಕಿಕೊಂಡಂತೆ'' ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಸವಾಲಾಗುವಂಥ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ರೋಹಿಂಗ್ಯ ಮುಸ್ಲಿಮರಿಗೆ ಭಾರತದಲ್ಲಿ ನೆಲೆಯೂರಲು ಅವಕಾಶ ನೀಡಬಾರದು ಎಂದು ಅವರು ತಿಳಿಸಿದ್ದಾರೆ. ಈ ಮೂಲಕ, ಅವರು, ರೋಹಿಂಗ್ಯ ಮುಸ್ಲಿಮರ ಬಗ್ಗೆ ಕೇಂದ್ರ ಸರ್ಕಾರ ತಳೆದಿರುವ ನಿರ್ಧಾರಕ್ಕೆ ಬೆಂಬಲವನ್ನೂ ಸೂಚಿಸಿದ್ದಾರೆ.
ಇದೇ ವೇಳೆ, ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಪಾಕಿಸ್ತಾನದಿಂದ ಬರುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿರುವ ಕುರಿತಂತೆ ಮಾತನಾಡಿರುವ ಅವರು, ''ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಪಾಕಿಸ್ತಾನದಿಂದ ಬರುತ್ತಿದ್ದ ಆರ್ಥಿಕ ನೆರವು ಈಗ ಜಗಜ್ಜಾಹೀರಾಗಿದೆ. ಅಲ್ಲದೆ, ಕೇಂದ್ರದ ಕ್ರಮಗಳಿಂದ ಇಂಥ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಈ ಸಂದರ್ಭದಲ್ಲಿ ಕೇಂದ್ರವು ಮತ್ತಷ್ಟು ಚುರುಕಾಗಿ ಕೆಲಸ ಮಾಡಿ ಅಕ್ರಮ ಹಣದ ಹರಿವನ್ನು ನಿಗ್ರಹಿಸಬೇಕು'' ಎಂದು ಕರೆ ನೀಡಿದ್ದಾರೆ.