ಶಕ್ತಿಮಾನ್ ಕುರಿತು ರಾಬರ್ಟ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ
ಡೆಹ್ರಾಡೂನ್, ಆಗಸ್ಟ್ 29: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು ಬಿಜೆಪಿ ಶಾಸಕರೊಬ್ಬರ ನಡುವೆ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆದ ಘಟನೆ ಭಾನುವಾರ (ಆ 28) ನಡೆದಿದೆ.
ರಾಬರ್ಟ್ ವಾದ್ರಾ ಮತ್ತು ಉತ್ತರಾಖಂಡ್ ರಾಜ್ಯದ ಮಸ್ಸೂರಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಗಣೇಶ್ ಜೋಷಿ ನಡುವೆ ವಿಮಾನ ನಿಲ್ದಾಣದಲ್ಲಿ 'ಶಕ್ತಿಮಾನ್' ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ರಾದ್ದಾಂತವಾಗಿದೆ. (ಸಂಜಯ್ ಸಮಾಧಿಗೆ ಸೋನಿಯಾ ನಮನ)
ಕುದುರೆ ವಿಚಾರದಲ್ಲಿ ಭ್ರಷ್ಟ ವಾದ್ರಾ ರಾಜಕೀಯ ಮಾಡುತ್ತಿದ್ದಾರೆನ್ನುವುದು ಗಣೇಶ್ ಜೋಷಿ ಆರೋಪವಾದರೆ, ಸತ್ತ ಕುದುರೆ ಮಾತನಾಡದಿದ್ದರೂ ನಾನು ಮಾತನಾಡುತ್ತೇನೆಂದು ವಾದ್ರಾ ತಿರುಗೇಟು ನೀಡಿದ್ದಾರೆ.
ನಗರಕ್ಕೆ ಆಗಮಿಸುತ್ತಿದ್ದ ಬಿಜೆಪಿಯ ಕೆಲವು ಸಂಸದರನ್ನು ಸ್ವಾಗತಿಸಲು ಗಣೇಶ್ ಜೋಷಿ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಹೂಬುಕ್ಕೆಯೊಂದಿಗೆ ಹಾಜರಿದ್ದರು. ಆ ಸಮಯದಲ್ಲಿ ವಾದ್ರಾ ಕೂಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. (ಯಮಯಾತನೆ ಅನುಭವಿಸಿ ಅಗಲಿದ ಶಕ್ತಿಮಾನ್)
ಇಬ್ಬರ ನಡುವೆ ನಡೆದ ಕುಶಲೋಪರಿಯ ನಂತರ, ಶಕ್ತಿಮಾನ್ ಕುದುರೆಯ ಸಾವಿನ ವಿಚಾರದಲ್ಲಿ ಇಬ್ಬರ ನಡುವೆ ವಾಗ್ಯುದ್ದ ನಡೆದಿದೆ. ಮುಂದೆ ಓದಿ..
ಶಕ್ತಿಮಾನ್
ರಾಬರ್ಟ್ ವಾದ್ರಾ ಮತ್ತು ಬಿಜೆಪಿ ಶಾಸಕ ಗಣೇಶ್ ಜೋಷಿ ನಡುವೆ ಕಲಹಕ್ಕೆ ಕಾರಣವಾಗಿದ್ದು ಪೊಲೀಸ್ ಕುದುರೆ ಶಕ್ತಿಮಾನ್ ಸಾವು. ಈ ಕುದುರೆಯ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಬರ್ಟ್ ವಾದ್ರಾ
ಗಣೇಶ್ ಜೋಷಿ ತಮ್ಮ ಬೆಂಬಲಿಗರೊಂದಿಗೆ ವಿಮಾನ ನಿಲ್ದಾಣದಲ್ಲಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿ ಶಕ್ತಿಮಾನ್ ಕುದುರೆಯ ಸಾವಿನ ವಿಚಾರವನ್ನು ಪ್ರಸ್ತಾವಿಸಿದೆ. ಅದಕ್ಕೆ ಅವರು ನನ್ನನ್ನು ಲೇವಡಿ ಮಾಡಿ ಬೆದರಿಕೆ ಹಾಕಿದರು - ರಾಬರ್ಟ್ ವಾದ್ರಾ.
ಸತ್ತ ಕುದುರೆ ಮಾತಾಡದಿದ್ದರೂ ನಾನು ಮಾತನಾಡುತ್ತೇನೆ
ಸತ್ತ ಕುದುರೆ ಮಾತನಾಡದೇ ಇರಬಹುದು, ಆದರೆ ನಾನು ಸುಮ್ಮನಿರುವುದಿಲ್ಲ ಎಂದಾಗ ಜೋಷಿ ನನ್ನ ಮೇಲೆ ಕೂಗಾಡಲು ಆರಂಭಿಸಿದರು. ಆಗ ವಿಮಾನ ನಿಲ್ದಾಣದ ಅಧಿಕಾರಿಗಳು ಅವರನ್ನು ಮತ್ತು ಅವರ ಗೂಂಡಾ ಪಡೆಗಳನ್ನು ಹೊರ ಹೋಗಲು ಹೇಳಿದರು - ರಾಬರ್ಟ್ ವಾದ್ರಾ.
ಸಾವನ್ನಪ್ಪಿದ್ದ ಶಕ್ತಿಮಾನ್
ಮಾರ್ಚ್ ಹದಿನಾಲ್ಕರಂದು ನಡೆದಿದ್ದ ಬಿಜೆಪಿಯ ಪ್ರತಿಭಟನಾ ಸಭೆಯ ವೇಳೆ, ಗಣೇಶ್ ಜೋಶಿ ಪೊಲೀಸ್ ಕುದುರೆ 'ಶಕ್ತಿಮಾನ್' ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಕಾಲು ಕಳೆದುಕೊಂಡಿದ್ದ ಶಕ್ತಿಮಾನ್, ಏಪ್ರಿಲ್ 20ರಂದು ಸಾವನ್ನಪ್ಪಿತ್ತು.
|
ಹೀಗೊಂದು ಟ್ವೀಟ್
ರಾಬರ್ಟ್ ವಾದ್ರಾ ಅವರ ಕಾಳಜಿ ಒಪ್ಪಿಕೊಳ್ಳುವಂತದ್ದು, ಆದರೆ ವಾದ್ರಾ ಅವರಿಂದ ಮೋಸಕ್ಕೊಳಗಾದ ರೈತರ ಬಗ್ಗೆ ವಾದ್ರಾ ಏನು ಹೇಳುತ್ತಾರೆ.
|
ಬಡ ರೈತರು
ಹರ್ಯಾಣ ಮತ್ತು ರಾಜಸ್ಥಾನದ ಬಡರೈತರಿಗೆ ಮೋಸ ಮಾಡಿದ ವಾದ್ರಾ ಇದ್ದಕ್ಕಿದ್ದಂತೇ ಕುದುರೆ ರಕ್ಷಕರಾದರು.