ನೆಚ್ಚಿನ ಸಂಪಾದಕರ ಸಾವಿಗೆ ಕಪ್ಪು-ಬಿಳುಪು ಮುಖಪುಟದ ಭಾವಪೂರ್ಣ ಸಂತಾಪ
ಶ್ರೀನಗರ, ಜೂನ್ 15: "SHUJAAT SILENCED" ಇದು ನೆಚ್ಚಿನ ಸಂಪಾದಕನ ಹತ್ಯೆ, ಅಕಾಲಿಕ ಅಗಲಿಕೆಯನ್ನು ರೈಸಿಂಗ್ ಕಾಶ್ಮೀರ್ ವಿವರಿಸಿದ ಪರಿ! 'ಕಪ್ಪು ಬಿಳುಪು' ಮುಖಪುಟದಲ್ಲಿ ಶುಜಿತ್ ರ ಚಿತ್ರ, ಅದರಡಿಯಲ್ಲಿ ಮನಕಲಕುನ ನಾಲ್ಕು ಸಾಲು!
"ನೀವು ನಮ್ಮನ್ನು ಅತ್ಯಂತ ಬೇಗ, ಹಠಾತ್ ಆಗಿ ಅಗಲಿ ಹೋಗಿದ್ದೀರಿ. ಆದರೆ ಉದ್ಯೋಗದ ಕುರಿತ ಬದ್ಧತೆ, ಸಮರ್ಪಣಾ ಭಾವ ಮತ್ತು ಅಪರಿಮಿತ ಧೈರ್ಯದ ಮೂಲಕ ನೀವು ತೋರಿದ ಬೆಳಕಿನಲ್ಲೇ ನಾವು ಮುನ್ನಡೆಯುತ್ತೇವೆ. ನಿಮ್ಮನ್ನು ನಮ್ಮಿಂದ ಕಿತ್ತುಕೊಂಡ ಹೇಡಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ. ನಿಮ್ಮ ತತ್ವಗಳು ಎಷ್ಟೇ ನಿಷ್ಠುರವಾಗಿದ್ದರೂ, ನಾವು ಅದನ್ನು ಎಂದಿಗೂ ಎತ್ತಿಹಿಡಿಯುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂಬ ಈ ನಾಲ್ಕು ಸಾಲುಗಳು ಶುಜಾತ್ ತಮ್ಮ ಸಹೋದ್ಯೋಗಿಗಳೊಂದಿಗೆ ಸಂಪಾದಿಸಿದ್ದ ಗೌರವ, ಪ್ರೀತಿಯ ದ್ಯೋತಕವಾಗಿದೆ.
ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?
SHUJAAT SILENCED, ಶುಜಾತ್ ರನ್ನು ಮೌನವಾಗಿಸಲಾಗಿದೆ! ಒಬ್ಬ ನಿರ್ಭೀತ ಪತ್ರಕರ್ತ ಸತ್ಯವನ್ನು ಎತ್ತಿ ಹಿಡಿದಿದ್ದಕ್ಕೆ ಸಿಕ್ಕ ಬೆಲೆ ಇದು ಎಂದು ರೈಸಿಂಗ್ ಕಾಶ್ಮೀರ್, ಆಕ್ರೋಶ ಮತ್ತು ಅಷ್ಟೇ ಭಾವುಕತೆಯಿಂದ ಶುಜಾತ್ ಅಗಲಿಕೆಯನ್ನು ಬರೆದುಕೊಂಡಿದೆ.
ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸಿ ಸಯ್ಯದ್ ಶುಜಾತ್ ಬುಖಾರಿ ಅವರು ಬರೆದ ಲೆಕ್ಕವಿಲ್ಲದಷ್ಟು ಸಂಪಾದಕೀಯಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸುವ ಮೂಲಕ ನೆಚ್ಚಿನ ಸಂಪಾದಕನಿಗೆ ಭಾವಪೂರ್ಣ ವಿದಾಯ ಹೇಳಿದೆ ರೈಸಿಂಗ್ ಕಾಶ್ಮೀರ್.
"ರೈಸಿಂಗ್ ಕಾಶ್ಮೀರ್ ಕುಟುಂಬ ಅವರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತದೆ. ಈ ಸಂಸ್ಥೆಯ ಬೆಳವಣಿಗೆಗೆ, ಕಾಶ್ಮೀರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ಆನ್ ದಿ ರೆಕಾರ್ಡ್ ಎಂಬ ಹೆಸರಿನಲ್ಲಿ ಅವರು ಬರೆಯುತ್ತಿದ್ದ ಕೆಲವು ಅಂಕಣಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಯತ್ನ ಮಾಡಿದ್ದೇವೆ. ಇದು ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ" ಎಂದು ರೈಸಿಂಗ್ ಸ್ಟಾರ್ ತನ್ನ ಸಂಪಾದಕರಿಗೆ ಅಂತಿಮ ವಿದಾಯ ಹೇಳಿದೆ.