ಕೊರೊನಾ ಮೂರನೇ ಅಲೆ; ಆರೋಗ್ಯ ಸಚಿವಾಲಯ ಎಚ್ಚರಿಕೆ
ನವದೆಹಲಿ, ಸೆಪ್ಟೆಂಬರ್ 7: ದೇಶದಲ್ಲಿ ಹಬ್ಬಗಳು ಸಮೀಪಿಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಸೋಂಕಿನ ಹರಡುವಿಕೆ ಕುರಿತು ಜನರಿಗೆ ಎಚ್ಚರಿಕೆ ನೀಡಿದೆ. ಜನರು ತಮ್ಮ ತಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ. ಕೊರೊನಾ ನಿಯಮಗಳನ್ನು ಪಾಲಿಸಿ ಹಾಗೂ ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳಿ ಎಂದು ಸೂಚನೆ ನೀಡಿದೆ.
ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲಿ ಹೆಚ್ಚು ಜನ ಒಂದೆಡೆ ಸೇರುವುದನ್ನು ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೊರೊನಾ 3ನೇ ಅಲೆ ಮನೆ ಬಾಗಿಲಲ್ಲೇ ಇದೆ; ಹಬ್ಬದ ಆಚರಣೆಗೆ ನಿರ್ಬಂಧ
ಮುಂಬೈ ಮಹಾನಗರ ಪಾಲಿಕೆ ದತ್ತಾಂಶಗಳ ಪ್ರಕಾರ, ಈ ತಿಂಗಳ ಮೊದಲ ಆರು ದಿನಗಳಲ್ಲಿ ಇಡೀ ಆಗಸ್ಟ್ ತಿಂಗಳಲ್ಲಿ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ 28ರಷ್ಟು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಗಣೇಶೋತ್ಸವಕ್ಕೆ ನಿಷೇಧ ಹೇರಲಾಗಿದೆ.
ಮಾಲ್ಗಳು, ರೆಸ್ಟೋರೆಂಟ್ಗಳು ಹಾಗೂ ಸಾಮೂಹಿಕ ಕೂಟಗಳಂಥ ಸಾರ್ವಜನಿಕ ಸ್ಥಳಗಳು ತೆರೆಯುತ್ತಿದ್ದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. ಹೆಚ್ಚೆಚ್ಚು ಜನರಿಗೆ ಲಸಿಕೆಯನ್ನು ನೀಡಬೇಕಿದೆ. ಕೊರೊನಾ ನಿಯಮಗಳ ಪಾಲನೆಯನ್ನು ಜನರು ಮಾಡಬೇಕಿದೆ ಎಂದು ಮುಂಬೈ ಮಸೀನಾ ಆಸ್ಪತ್ರೆಯ ಡಾ. ಸೋನಂ ಸೋಲಂಕಿ ವಿವರಿಸಿದ್ದಾರೆ.
ಕೊರೊನಾ ಸೋಂಕಿತರ ಐಸೊಲೇಷನ್ ಪ್ರಕ್ರಿಯೆಯನ್ನು ಸೂಕ್ತ ಸಮಯದಲ್ಲಿ ಮಾಡಿದರೆ, ಕೊರೊನಾ ಹರಡುವಿಕೆ ತಡೆಗೆ ನೆರವಾಗುತ್ತದೆ. ಕೊರೊನಾ ಮೂರನೇ ಅಲೆಯಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರಬಹುದಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಹೇಗಿರಲಿದೆ? ತಜ್ಞರ ಉತ್ತರ...
ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಯಿತು ಎಂದರೆ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರುವವರ ಹಾಗೂ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದರ್ಥವಲ್ಲ. ಸೂಕ್ತ ಸಮಯದಲ್ಲಿ ಐಸೊಲೇಟ್ ಮಾಡುವ ಮೂಲಕ ಕೊರೊನಾ ಮೂರನೇ ಅಲೆಯಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವುದನ್ನು ತಡೆಯಬಹುದಾಗಿದೆ ಎಂದು ಅವರು ಹೇಳಿದರು.
ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮ ಎದುರಿಸದ ಕೆಲವು ರಾಜ್ಯಗಳಲ್ಲಿ ಈಗ ಕೊರೊನಾ ಸೋಂಕು ಹೆಚ್ಚುತ್ತಿರುವ ಪ್ರವೃತ್ತಿ ಕೊರೊನಾ ಮೂರನೇ ಅಲೆಯ ಆರಂಭಿಕ ಸೂಚನೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಮೀರನ್ ಪಾಂಡಾ ಈಚೆಗೆ ಎಚ್ಚರಿಕೆ ನೀಡಿದ್ದಾರೆ.
ಮೂರನೇ ಅಲೆ ಆತಂಕದ ನಡುವೆ ಶಾಲೆಗಳ ಪುನರಾರಂಭದ ಕುರಿತು ಭಯಪಡುವ ಅಗತ್ಯವಿಲ್ಲ ಎಂದು ಹೇಳಿರುವ ಡಾ. ಪಾಂಡಾ, 'ನಾಲ್ಕನೇ ರಾಷ್ಟ್ರೀಯ ಸೆರೋ ಸರ್ವೇ, ವಯಸ್ಕರಿಗಿಂತ ಮಕ್ಕಳಲ್ಲಿ ಸೋಂಕಿನ ಸ್ವರೂಪ ಸೌಮ್ಯವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿದೆ. ಹೀಗಾಗಿ ಅನಗತ್ಯ ಭಯ ಪಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಕೊರೊನಾ ಪ್ರಕರಣಗಳ ವಿಷಯವಾಗಿ ಪ್ರಸ್ತಾಪ ಮಾಡುವಾಗ ಒಟ್ಟಾರೆ ಭಾರತದ ಕೊರೊನಾ ಪ್ರಕರಣಗಳನ್ನು ಇಟ್ಟುಕೊಂಡು ಮಾತಾಡುವುದಕ್ಕಿಂತ ರಾಜ್ಯ ನಿರ್ದಿಷ್ಟ ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಎಲ್ಲಾ ರಾಜ್ಯಗಳೂ ಏಕರೂಪವಾಗಿರುವುದಿಲ್ಲ ಎಂದು ಹೇಳಿದ್ದಾರೆ.
'ಕೊರೊನಾ ಎರಡನೇ ಅಲೆಯಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರದ ಕೊರೊನಾ ಪರಿಸ್ಥಿತಿಯಿಂದ ಪಾಠ ಕಲಿತ ಹಲವು ರಾಜ್ಯಗಳು ಕೊರೊನಾ ನಿರ್ಬಂಧಗಳನ್ನು ವಿಧಿಸಲು ಆರಂಭಿಸಿದವು. ಈ ಕಾರಣದಿಂದಾಗಿ ಹಲವಾರು ರಾಜ್ಯಗಳಲ್ಲಿ ಎರಡನೇ ತರಂಗ ತೀವ್ರವಾಗಲಿಲ್ಲ. ಇದೀಗ ಮೂರನೇ ಅಲೆಯ ಲಕ್ಷಣಗಳು ಕಂಡುಬರುತ್ತಿವೆ. ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಮೂರನೇ ತರಂಗವನ್ನು ಸೂಚಿಸುತ್ತಿವೆ' ಎಂದು ಹೇಳಿದರು.
ಭಾರತದಲ್ಲಿ ಮಂಗಳವಾರ 31,222 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 42,942 ಮಂದಿ ಚೇತರಿಕೆ ಕಂಡಿದ್ದು,ಒಂದೇ ದಿನದಲ್ಲಿ 290 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,30,58,843ಕ್ಕೆ ಏರಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 3,92,864 ಇವೆ.