ಕಾರ್ಮಿಕರ ಪ್ರತಿಭಟನೆ: ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಬೆಂಗಳೂರು, ಏಪ್ರಿಲ್, 19: ಕಾರ್ಮಿಕರ ಹೋರಾಟದ ಕಿಚ್ಚಿಗೆ ಇಡೀ ಬೆಂಗಳೂರು ಮಂಗಳವಾರ ಸ್ತಬ್ಧವಾಗಿತ್ತು. ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅನ್ವಯವಾಗುವಂತೆ ನಿಷೇಧಾಜ್ಞೆ ಹೇರಲಾಗಿದೆ.ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ, ಎರಡು ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಅಂತಿಮವಾಗಿ ಕೇಂದ್ರ ಸಚಿವ ಅನಂತಕುಮಾರ್, ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ ಮತ್ತು ರಾಜ್ಯದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಕಾರ್ಮಿಕರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.[ಗಾರ್ಮೆಂಟ್ಸ್ ಪ್ರತಿಭಟನೆ: ಸಿಎಂ ಮನೆಯಲ್ಲಿ ಸಚಿವರ ಸಭೆ]
30ಕ್ಕೂ ಅಧಿಕ ಬಸ್ ಗಳಿಗೆ ಬೆಂಕಿ, ಹತ್ತಾರು ಕಾರ್ಮಿಕರಿಗೆ ಏಟು, ಯುವತಿ ಸೇರಿದಂತೆ ಹೋಂ ಗಾರ್ಡ್ ಗೆ ಗುಂಡೇಟು, ನಾಗರಿಕರ ಪರಿತಾಪ, ಸಾರ್ವಜನಿಕ ಆಸ್ತಿ ಹಾನಿ, ಟ್ರಾಫಿಕ್ ಜಾಮ್ ಇಡೀ ದಿನದ ಘಟನಾವಳಿಗಳು. ಇದೀಗ ಸಿಎಂ ನೇತೃತ್ವದಲ್ಲಿ ಸರ್ಕಾರದ ಪ್ರಮುಖ ಸಚಿವರು ಸಭೆ ಆರಂಭಿಸಿದ್ದು ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲಿದ್ದಾರೆ.
ಬಂಡಾರು ದತ್ತಾತ್ರೇಯ
ಹೊಸ ನಿಯಮವನ್ನು ಸದ್ಯ ತಡೆಹಿಡಿಯಲಾಗಿದ್ದು ಇನ್ನೊಮ್ಮೆ ಪರಾಮರ್ಶೆಗೆ ಒಳಪಡಿಸಲಾಗುವುದು. ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಭೆ ನಂತರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜುಲೈ 31ರ ವರೆಗೂ ಅವಕಾಶವಿದೆ. ಸರ್ಕಾರ ಕಾರ್ಮಿಕರ ಪರವಾಗಿದೆ.
ಕೇಂದ್ರ ಸರ್ಕಾರ ಸ್ಪಂದಿಸಲಿದೆ
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರೊಂದಿಗೆ ಮಾತನಾಡುತ್ತೇನೆ. ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆದು ನೀತಿ ನಿರೂಪಣೆ ಮಾಡುತ್ತೇವೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ಸಕಲ ಕ್ರಮ ತೆಗೆದುಕೊಂಡಿದ್ದಾರೆ
ಪ್ರತಿಭಟನಾಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದ ಕಾರಣ ಕೆಲವೆಡೆ ಪೊಲೀಸರು ಮೃದು ಧೋರಣೆಯನ್ನು ಅನಿವಾರ್ಯವಾಗಿ ತಾಳಬೇಕಾಯಿತು. ಹಾಗಾಗಿ ಪ್ರತಿಭಟನೆ ವಿಕೋಪಕ್ಕೆ ಹೋದಂತೆ ಕಂಡುಬಂತು.
ಪರಮೇಶ್ವರ ನಾಯಕ್
ನಾನು ಬಳ್ಳಾರಿಯಲ್ಲಿದ್ದೇನೆ. ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸರ್ಕಾರದ ಪ್ರಮುಖರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಮೊರೆ ಹೋಗುತ್ತೇವೆ.
ಎಚ್ ಡಿ ಕುಮಾರಸ್ವಾಮಿ
ಕಾರ್ಮಿಕರಿಗೆ ವಿರೋಧಿಯಾಗಿರುವ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು. ಕಾರ್ಮಿಕರ ಬೆಂಬಲಕ್ಕೆ ಜೆಡಿಎಸ್ ಪಕ್ಷ ಸದಾ ಸಿದ್ಧವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬಿಎಸ್ ಯಡಿಯೂರಪ್ಪ
ಕಾರ್ಮಿಕರ ಹಿತ ಕಾಯಲು ನಾವೆಲ್ಲ ಬದ್ಧರಾಗಿದ್ದೇವೆ. ಯಾವ ಕಾರಣಕ್ಕೂ ಕಾರ್ಮಿಕರ ಹೋರಾಟ ತಡೆಯುವಂತಹ ಅಥವಾ ಅವರ ಮೇಲೆ ದೌರ್ಜನ್ಯ ನಡೆಯುವಂತಹ ಘಟನೆಗಳು ನಡೆಯಬಾರದು. ಇನ್ನೊಮ್ಮೆ ಒಟ್ಟಾಗಿ ಮಾತುಕತೆ ಮಾಡುತ್ತೇವೆ.