ಬಾಬ್ರಿ ಮಸೀದಿ ಧ್ವಂಸ ಪ್ರಕರಣ : 8 ಪ್ರಮುಖ ಬೆಳವಣಿಗೆ
ಮೂಲತಃ ರಾಮ ಜನಿಸಿದ ಭೂಮಿಯಲ್ಲಿ, ಅಂದು ನಿರ್ಮಿಸಲಾಗಿದ್ದ ರಾಮನ ದೇವಸ್ಥಾನವನ್ನು ಕೆಡವಿ ಹದಿನಾರನೇ ಶತಮಾನದಲ್ಲಿ ಮುಘಲರ ದೊರೆ ಬಾಬರ್ ನೇತೃತ್ವದಲ್ಲಿ ನಿರ್ಮಿಸಲಾಯಿತೆಂಬುದು ಮೂಲವಾದ.
ಮುಘಲ್ ಜನರಲ್ ಮಿರ್ ಬಾಕಿ ಎಂಬಾತನಿಂದ ಹದಿನಾರನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬಾಬ್ರಿ ಮಸೀದಿಯನ್ನು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಮತ್ತಿತರರು ಸಂಚು ಹೂಡಿ ಧ್ವಂಸ ಮಾಡಲು ಪ್ರೇರೇಪಿಸಿದರು ಎಂಬುದು ಆರೋಪ.
ಈಗ ಈ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಜೀವ ನೀಡಿದ್ದು, ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ್ ಮುಂತಾದ 13 ನಾಯಕರ ವಿರುದ್ಧ ವಿಚಾರಣೆಯನ್ನು ಮತ್ತೆ ನಡೆಸಬೇಕೆಂದು ಸುಪ್ರೀಂ ಆಜ್ಞೆ ನೀಡಿದೆ.[ಬಾಬ್ರಿ ಮಸೀದಿ ಧ್ವಂಸ ಕೇಸ್: ಅಡ್ವಾಣಿ ವಿರುದ್ಧ ವಿಚಾರಣೆಗೆ ಸುಪ್ರೀಂ ಅಸ್ತು]
ಅಡ್ವಾಣಿ ಮತ್ತಿತರರ ವಿರುದ್ಧದ ಸಂಚಿನ ಆರೋಪವನ್ನು ಕೈಬಿಟ್ಟು ಅವರನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಈಗ ಎತ್ತಿಹಿಡಿಯಲಾಗಿದ್ದು, 89 ವರ್ಷದ ಅಡ್ವಾಣಿ ಸೇರಿದಂತೆ ಇತರರು ವಿಚಾರಣೆ ಎದುರಿಸಬೇಕಾಗಿದೆ.
ಮೂಲತಃ ರಾಮ ಜನಿಸಿದ ಭೂಮಿಯಲ್ಲಿ, ಅಂದು ನಿರ್ಮಿಸಲಾಗಿದ್ದ ರಾಮನ ದೇವಸ್ಥಾನವನ್ನು ಕೆಡವಿ ಹದಿನಾರನೇ ಶತಮಾನದಲ್ಲಿ ಮುಘಲರ ದೊರೆ ಬಾಬರ್ ನೇತೃತ್ವದಲ್ಲಿ ನಿರ್ಮಿಸಲಾಯಿತೆಂಬುದು ಮೂಲವಾದ. ಆ ಮಸೀದಿಯನ್ನು ಅಡ್ವಾಣಿ ಮತ್ತಿತರರು ಸಂಚು ಹೂಡಿ ಕೆಡವಿದರು ಎಂಬುದು ವಿವಾದದ ಹೂರಣ.[ಬಾಬ್ರಿ ಸಂಚು ಸಾಬೀತಾದರೆ ಅಡ್ವಾಣಿಗೆ ಕಾದಿದೆ 5 ವರ್ಷ ಜೈಲು]
ನ್ಯಾಯಮೂರ್ತಿಗಳಾದ ಪಿಸಿ ಘೋಸೆ ಮತ್ತು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರಿದ್ದ ವಿಭಾಗೀಯ ಪೀಠ, ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ತಳ್ಳಿಹಾಕಿದ್ದು, ವಿಚಾರಣೆ ನಡೆಸಲು ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಕೋರ್ಟ್ ಏನೇನು ನಿರ್ದೇಶನಗಳನ್ನು ನೀಡಿದೆ ಎಂಬುದು ಮುಂದಿದೆ.
ಸಿಬಿಐ ಹೂಡಿರುವ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ
ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿರುವ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಅವರ ವಿರುದ್ಧದ ಸಂಚು ಹೂಡಿದ ದೂರನ್ನು ಪುನಃಸ್ಥಾಪಿಸಲಾಗಿದೆ.
ಪ್ರಕರಣದ ವಿಚಾರಣೆ
ಲಖನೌನಲ್ಲಿ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಬಾರತಿ ಮತ್ತು ಗುರುತು ಪರಿಚಯವಿಲ್ಲದ ಕರಸೇವಕರ ವಿರುದ್ಧ ಹೂಡಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಒಂದುಗೂಡಿಸಿ ಒಂದೇ ಪ್ರಕರಣದ ವಿಚಾರಣೆ ನಡೆಸಲಾಗುವುದು.[25 ವರ್ಷ ಕಳೆದರೂ ಅಡ್ವಾಣಿಯನ್ನು ಬೆಂಬಿಡದ 'ಬಾಬ್ರಿ ಮಸೀದಿ' ಭೂತ]
ರಾಜಾಸ್ಥಾನದ ರಾಜ್ಯಪಾಲರ ಬೆಂಬಲ
1992ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರು ಸದ್ಯಕ್ಕೆ ಸಾಂವಿಧಾನಿಕ ರಕ್ಷಣೆಯಿದೆ. ಅವರು ರಾಜಸ್ತಾನದ ರಾಜ್ಯಪಾಲರಾಗಿರುವುದರಿಂದ ಅವರ ವಿರುದ್ಧ ವಿಚಾರಣೆ ಈಗ ನಡೆಸಲು ಆಗುವುದಿಲ್ಲ. ಅವರು ರಾಜ್ಯಪಾಲರ ಹುದ್ದೆಯಿಂದ ಇಳಿದ ನಂತರ ವಿಚಾರಣೆ ಆರಂಭಿಸತಕ್ಕದ್ದು.
ಪ್ರಕರಣ ಮುಂದೂಡಿಕೆ ಸಾಧ್ಯವಿಲ್ಲ
ಪ್ರಕರಣ 25 ವರ್ಷ ತೆಗೆದುಕೊಂಡಿರುವುದರಿಂದ ಇನ್ನು ಮತ್ತೆ ಮುಂದೂಡಿಕೆ ಮಾಡಲು ಸಾಧ್ಯವಿಲ್ಲ. ವಿಚಾರಣೆಯನ್ನು ಯಾವುದೇ ಮುಂದೂಡಿಕೆಗೆ ಅವಕಾಶ ನೀಡದಂತೆ ಪ್ರತಿನಿತ್ಯ ಮಾಡಬೇಕು.
ಪ್ರತಿನಿತ್ಯ ವಿಚಾರಣಾ ನ್ಯಾಯಾಲಯದಲ್ಲಿ ಹಾಜರಿರತಕ್ಕದ್ದು
ಈ ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ವ್ಯಕ್ತಿಗಳಲ್ಲಿ ಕನಿಷ್ಠ ಒಬ್ಬರಾದರೂ ಪ್ರತಿನಿತ್ಯ ವಿಚಾರಣಾ ನ್ಯಾಯಾಲಯದಲ್ಲಿ ಹಾಜರಿರತಕ್ಕದ್ದು ಮತ್ತು ಅವರ ಹೇಳಿಕೆಯನ್ನು ದಾಖಲಿಸತಕ್ಕದ್ದು.
ನ್ಯಾಯಾಧೀಶರ ವರ್ಗಾವಣೆ ಇಲ್ಲ
ವಿಚಾರಣೆ ನಡೆದು ತೀರ್ಪು ಪ್ರಕಟವಾಗುವವರೆಗೆ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವ ಹಾಗಿಲ್ಲ.
ವಿಚಾರಣೆಯ ಮರುಆರಂಭ
ಇನ್ನು ನಾಲ್ಕು ವಾರಗಳಲ್ಲಿ ಲಕ್ನೋ ವಿಚಾರಣಾ ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಬೇಕು ಹಾಗು ವಿಚಾರಣೆಯ ಮರುಆರಂಭ ಮಾಡುವಹಾಗಿಲ್ಲ.
ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಮುಗಿಸಿ
ಪ್ರತಿದಿನ ವಿಚಾರಣೆಯನ್ನು ಮಾಡಬೇಕು ಮತ್ತು ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ವಿಚಾರಣಾ ನ್ಯಾಯಾಲಯ ನೀಡತಕ್ಕದ್ದು.