ಸೈನಿಕರಿಗಾಗಿ 1 ಕೋಟಿ ಕೊಟ್ಟರು ಎಸ್ ಬಿಐ ನಿವೃತ್ತ ಉದ್ಯೋಗಿ
ಗುಜರಾತ್ ನ ಭಾವ್ ನಗರದ ನಿವೃತ್ತ ಎಸ್ ಬಿಐ ಉದ್ಯೋಗಿ ಜನಾರ್ದನ್ ಭಟ್ ತಮ್ಮ ಇಡೀ ಜೀವನದ ದುಡಿಮೆ ಒಂದು ಕೋಟಿ ರುಪಾಯಿಯನ್ನು ಭಾರತೀಯ ಸೇನೆಗೆ ನೀಡಿದ್ದಾರೆ. ಸೈನಿಕರ ಕುಟುಂಬದ ಕಲ್ಯಾಣಕ್ಕಾಗಿ ಇದು ಬಳಕೆಯಾಗಲಿ ಎಂಬುದು ಅವರ ಅಪೇಕ್ಷೆ
ಗಾಂಧೀನಗರ, ಮೇ 8: ಗುಜರಾತ್ ನ ಭಾವ್ ನಗರ್ ನ ನಿವೃತ್ತ ಬ್ಯಾಂಕ್ ನೌಕರರೊಬ್ಬರ ಮಹತ್ಕಾರ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆ ನಿವೃತ್ತ ನೌಕರರು ಮಾಡಿದ ಕೆಲಸ ಅಷ್ಟೊಂದು ಮಹತ್ವದ್ದಾ, ಅದೇನಪ್ಪಾ ಅಂತೀರಾ? ಎಸ್ ಬಿಐನ ನಿವೃತ್ತ ಕ್ಲರ್ಕ್ ಆದ ಜನಾರ್ದನ್ ಭಟ್ ಅವರು ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ಭಾರತೀಯ ಸೇನೆಗೆ ಒಂದು ಕೋಟಿ ರುಪಾಯಿ ನೀಡಿದ್ದಾರೆ.
ಜನಾರ್ದನ್ ಭಟ್ ದಂಪತಿಗೆ ಮಕ್ಕಳಿಲ್ಲ. ಆದ್ದರಿಂದ ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ನೀಡಲು ನಿರ್ಧರಿಸಿದ್ದಾರೆ. "ನನಗೆ ಮಕ್ಕಳಿಲ್ಲ. ಆದರೆ ದೇಶದ ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರು ನನ್ನ ಮಕ್ಕಳಿದ್ದ ಹಾಗೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಏನಾದರೂ ಅನುಕೂಲ ಮಾಡಿಕೊಡುವುದು ನನ್ನ ಜವಾಬ್ದಾರಿ" ಎಂದಿದ್ದಾರೆ ಜನಾರ್ದನ್ ಭಟ್.[ಪಾಕ್ ಬಂಕರ್ ದ್ವಂಸ: ಟ್ವಿಟ್ಟರ್ ನಲ್ಲಿ ಹರ್ಷದ ಹೊಳೆ]
ವರದಿಗಳ ಪ್ರಕಾರ ಈ ಹಿರಿಯ ವ್ಯಕ್ತಿ ಜೀವನದುದ್ದಕ್ಕೂ ಒಳ್ಳೆತನದಿಂದಾಗಿಯೇ ಹೆಸರಾಗಿದ್ದಾರೆ. ಯಾರಾದರೂ ಸಹಾಯ ಕೇಳಿ ಬಂದವರಿಗೆ ಹಸ್ತ ಚಾಚಿದ್ದಾರೆ. ಕಾರ್ಮಿಕರ ನಾಯಕನಾಗಿಯೂ ಕೆಲಸ ನಿರ್ವಹಿಸಿದ ಜನಾರ್ದನ್ ಭಟ್, ಸಹ ಉದ್ಯೋಗಿಗಳ ಹಲವು ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಇಂಥ ಪ್ರೀತಿ-ಅಂತಃಕರಣವುಳ್ಳ ವ್ಯಕ್ತಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ.