ಪಾಕ್ ವಶದಲ್ಲಿ ವಿಪರೀತ ಒತ್ತಡದಲ್ಲಿದ್ದಾರೆ ಕುಲಭೂಷಣ್ ಜಾಧವ್
ನವದೆಹಲಿ, ಸೆಪ್ಟೆಂಬರ್ 2: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿ ಆಗಿರುವ, ಭಾರತ ನೌಕಾ ಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಸೋಮವಾರದಂದು ಭಾರತದ ಡೆಪ್ಯೂಟಿ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಭೇಟಿ ಆಗಿ, ಕುಲಭೂಷಣ್ ಜಾಧವ್ ಅವರಿಂದ ಪಾಕಿಸ್ತಾನವು ಸುಳ್ಳಾದ ತಪ್ಪೊಪ್ಪಿಗೆ ಹೇಳಿಕೆ ಗಿಳಿಪಾಠ ಹೇಳಿಸಿರುವುದರಿಂದ ವಿಪರೀತ ಒತ್ತಡದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
"ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲದಂಥ ಆರೋಪ ಹೊರೆಸಿ, ಕುಲಭೂಷಣ್ ಜಾಧವ್ ನಿಂದ ಸುಳ್ಳಾದ ತಪ್ಪೊಪ್ಪಿಗೆ ಹೇಳಿಕೆ ಕೊಡಿಸಿರುವ ಪಾಕಿಸ್ತಾನದ ಸುಪರ್ದಿಯಲ್ಲಿ ಜಾಧವ್ ವಿಪರೀತ ಒತ್ತಡದಲ್ಲಿ ಇದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ಹೇಳಿದೆ.
ಭಾರತದ ಡೆಪ್ಯೂಟಿ ಹೈ ಕಮಿಷನರ್ ರಿಂದ ಕುಲಭೂಷಣ್ ಜಾಧವ್ ಭೇಟಿ
ಇದೇ ವೇಳೆ ವಿದೇಶಾಂಗ ಸಚಿವರಾದ ಎಸ್. ಜಯಶಂಕರ್ ಅವರು ಕುಲಭೂಷಣ್ ಜಾಧವ್ ಅವರ ತಾಯಿ ಜತೆಗೆ ಮಾತನಾಡಿದ್ದಾರೆ. ಹಾಗೂ ಸೋಮವಾರದಂದು ನಡೆದ ಬೆಳವಣಿಗೆ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ.
ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶದ ನಂತರ ಇದೇ ಮೊದಲ ಬಾರಿಗೆ ಕುಲಭೂಷಣ್ ಜಾಧವ್ ರ ದೂತಾವಾಸ ಸಂಪರ್ಕಕ್ಕೆ ಪಾಕಿಸ್ತಾನವು ಅವಕಾಶ ಮಾಡಿಕೊಟ್ಟಿತ್ತು.