ಕಾಂಗ್ರೆಸ್ ಪಕ್ಷದೊಳಗೆ ಅಹಿಂದಗೆ ಶೇ 50 ಮೀಸಲಾತಿ: ಮೇ 13ರಿಂದ ಚಿಂತನಾ ಶಿಬಿರ
ನವದೆಹಲಿ, ಮೇ 6: ಕಾಂಗ್ರೆಸ್ ಪಕ್ಷದೊಳಗೆ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸಮುದಾಯಗಳಿಗೆ ಸೇರಿದ ನಾಯಕರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಮುಂದಿನ ವಾರಾಂತ್ಯದಲ್ಲಿ ರಾಜಸ್ಥಾನದ ಉದಯಪುರ್ನಲ್ಲಿ ಮೂರು ದಿನ ನಡೆಯಲಿರುವ ಕಾಂಗ್ರೆಸ್ ಪಕ್ಷದ ನವ-ಸಂಕಲ್ಪ ಚಿಂತನ ಶಿಬಿರದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಈ ಬಗ್ಗೆ ಈ ಸಮುದಾಯಗಳ ವಿವಿಧ ನಾಯಕರು ತಯಾರಿ ನಡೆಸುತ್ತಿದ್ದಾರೆನ್ನಲಾಗಿದೆ. ಇಷ್ಟೂ ಸಮುದಾಯಗಳು ಒಗ್ಗೂಡಿದರೆ ಬಹುಸಂಖ್ಯಾತರೆನಿಸಲಿದ್ದು, ಶೇ. 50ರಷ್ಟಾದರೂ ಮೀಸಲಾತಿ ಕೊಡಬೇಕೆನ್ನುವುದು ಸಹಜವಾದ ಒತ್ತಾಯ ಎಂಬುದು ಈ ನಾಯಕರ ಅನಿಸಿಕೆ.
2023ರ ಚುನಾವಣೆ ವೇಳೆಗೆ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ ಇರಲ್ವಾ? ಸ್ಪಷ್ಟನೆ
ಮೇ 13ರಿಂದ 15ವರೆಗೆ ಚಿಂತನಾ ಶಿಬಿರ
ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಮೇ 13ರಿಂದ 15ವರೆಗೆ ಚಿಂತನಾ ಶಿಬಿರ ನಡೆಯಲಿದೆ. ಅದಕ್ಕಾಗಿ ಆರು ವಿವಿಧ ವಿಭಾಗಗಳಲ್ಲಿ ಸಮಿತಿಗಳನ್ನ ಮಾಡಲಾಗಿದೆ. ಅದರಲ್ಲಿ ಒಂದು ಸಮಿತಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ್ದಾಗಿದೆ.
ಈ ಸಮಿತಿಗೆ ಸಲ್ಮಾನ್ ಖುರ್ಷಿದ್ ಸಂಚಾಲಕರಾಗಿದ್ದಾರೆ. ದಿಗ್ವಿಜಯ್ ಸಿಂಗ್, ಮೀರಾ ಕುಮಾರ್, ಕುಮಾರಿ ಸೆಲ್ಜಾ ತುಕಿ ನಬಂ, ಆಂಟೋ ಆಂಥೋನಿ, ನರೇನ್ ರಾಥವಾ ಮತ್ತು ಕೊಪ್ಪುಲ ರಾಜು ಅವರಿದ್ದಾರೆ. ಎಸ್ಸಿ-ಎಸ್ಟಿ ಇಲಾಖೆಯ ಛೇರ್ಮನ್ ರಾಜೇಶ್ ಲಿಲೋದಿಯಾ, ಹಿಂದುಳಿದ ಇಲಾಖೆಯ ಛೇರ್ಮನ್ ಕ್ಯಾಪ್ಟನ್ ಅಜಯ್ ಯಾದವ್ ಮತ್ತು ಅಲ್ಪಸಂಖ್ಯಾತ ಇಲಾಖೆ ಛೇರ್ಮನ್ ಇಮ್ರಾನ್ ಪ್ರತಾಪ್ಗಡಿ ಮೊದಲಾದವರು ಉಪಸಮಿತಿಯ ಸದಸ್ಯರಾಗಿದ್ದಾರೆ.
ರಾಹುಲ್ಗೆ ನಾನು ಸಮ ಅಲ್ಲ, ನನಗೆಂಥ ಸಮಸ್ಯೆ?: ಪ್ರಶಾಂತ್ ಕಿಶೋರ್
ಹೆಚ್ಚಿನ ಜನಸಂಖ್ಯೆ ಇರುವವರಿಗೆ ಮೀಸಲಾತಿ
ಪಕ್ಷದೊಳಗೆ ಬಹುಜನ ಸಮಾಜದವರಿಗೆ ಅರ್ಧದಷ್ಟು ಮೀಸಲಾತಿ ಕೊಡಬೇಕೆನ್ನುವ ಕೂಗು ಈಗಾಗಲೇ ಸಾಕಷ್ಟು ಪ್ರತಿಧ್ವನಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಈ ಸಮುದಾಯಗಳಿಗೆ ಸೇರಿದ ಸಾಕಷ್ಟು ಜನರ ಜೊತೆ ಸಮಿತಿ ಸಂಪರ್ಕದಲ್ಲಿದ್ದು ಚರ್ಚೆ ನಡೆಸುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿರುವ ಈ ಸಮುದಾಯಗಳ ರಾಜಕಾರಣಿಗಳೊಂದಿಗೂ ಚರ್ಚಿಸಲಾಗುತ್ತಿರುವುದು ತಿಳಿದುಬಂದಿದೆ.
ಇದೆಲ್ಲವೂ ಚಿಂತನಾ ಶಿಬಿರಕ್ಕೆ ಮುನ್ನವೇ ನಡೆಯುತ್ತಿರುವ ಪ್ರಕ್ರಿಯೆ. ಮೇ 9ರಂದು ಮೀಸಲಾತಿ ವಿಚಾರದಲ್ಲಿ ಕರಡು ಸಿದ್ಧಪಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅದೇ ದಿನ ಸಲ್ಲಿಸಲಾಗುತ್ತದೆ. ಅಂದೇ ಸಭೆ ಕೂಡ ನಡೆಯಲಿದೆ.
ಬ್ರಾಹ್ಮಣರ ಪಕ್ಷ ಎಂಬ ಪ್ರತಿರೋಧ ಬೇಡ
ಬ್ರಾಹ್ಮಣರ ಪಕ್ಷ ಎಂದೇ ಮೊದಲಿಂದಲೂ ಹಣೆಪಟ್ಟಿ ಹೊತ್ತಿರುವ ಕಾಂಗ್ರೆಸ್ನಲ್ಲಿ ಈ ಸಾಮಾಜಿಕ ಪರಿವರ್ತನೆಗೆ ಸಹಜವಾಗಿ ಪ್ರಬಲ ಸಮುದಾಯಗಳಿಂದ ಪ್ರತಿರೋಧ ಬರಲಿದೆ. ಆದರೂ ಕೂಡ ಮೀಸಲಾತಿಗೆ ಮಾಡಲಾಗುತ್ತಿರುವ ಕೂಗು ಜೋರಾಗಿ ಪ್ರತಿಧ್ವನಿಸುವ ರೀತಿ ಯೋಜಿಸಲಾಗುತ್ತಿದೆ. ಇದಕ್ಕೆ ಪೂರಕವೆನಿಸುವ ಡಾಟಾ ಮತ್ತು ಮಾಹಿತಿಯನ್ನ ಕಲೆಹಾಕಲಾಗುತ್ತಿದೆ. ಈ ಬಹುಜನ ಸಮಾಜದವರ ಮತಗಳು ಬೇಕೆಂದರೆ ಪಕ್ಷ ಸಂಘಟನೆಯಲ್ಲಿ ಅವರಿಗೆ ವಿವಿಧ ಸ್ತರಗಳಲ್ಲಿ ಜವಾಬ್ದಾರಿ ಸಿಗಬೇಕೆಂಬ ವಾದವನ್ನು ಮುಂದಿಡುವ ಸಾಧ್ಯತೆ ಇದೆ.
ಬಹಿರಂಗವಾಗಿ ಧ್ವನಿ ಎತ್ತುತ್ತಿಲ್ಲ
ಸಕಲ ತಯಾರಿಯೊಂದಿಗೆ ಚಿಂತನಾ ಶಿಬಿರದಲ್ಲಿ ಈ ವಿಚಾರ ಪ್ರಸ್ತಾಪಿಸಿ ಜೋರು ಚರ್ಚೆ ಹುಟ್ಟು ಹಾಕುವ ನಿರೀಕ್ಷೆ ಇದೆ. ಸಂವಿಧಾನದಲ್ಲಿ ತಿಳಿಸಲಾಗಿರುವಂತೆ ಕಾಂಗ್ರೆಸ್ ಪಕ್ಷದೊಳಗೆ ಬಹುಜನ ಸಜಾದವರಿಗೆ ಶೇ. 50 ಮೀಸಲಾತಿ ಕೊಡಬೇಕೆಂದು ಹಕ್ಕೊತ್ತಾಯ ಮಾಡಬಹುದು. ಸದ್ಯ ಪಕ್ಷದೊಳಗೆ ಈ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತುವ ಧೈರ್ಯ ಯಾರೂ ಮಾಡುತ್ತಿಲ್ಲ. ಚಿಂತನಾ ಶಿಬಿರ ಶುರುವಾಗುವ ಮುನ್ನವೇ ವಿವಾದಗಳಾಗಿ ಕಾರ್ಯಕ್ರಮ ಯಡವಟ್ಟಾದರೆ ಎಂಬ ಭಯ ಬಹಳ ಮಂದಿಗೆ ಇದೆ. ಹೀಗಾಗಿ, ಒಳಗಿಂದೊಳಗೆ ಚರ್ಚೆಗಳನ್ನ ನಡೆಸಿ ಅಭಿಪ್ರಾಯಗಳನ್ನ ಸಂಗ್ರಹಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷದೊಳಗೆ ಎದ್ದಿರುವ ಬಹುಜನರ ಮೀಸಲಾತಿ ಕೂಗು ಪರಿವರ್ತನೆ ತರುವ ಮಟ್ಟಕ್ಕೆ ಗಟ್ಟಿಗೊಳ್ಳುತ್ತದಾ ಕಾದು ನೋಡಬೇಕು. ಹಿಂದುಳಿದವರ, ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ತನ್ನೊಳಗೆ ನಿಜವಾಗಿಯೂ ಈ ಪರಿವರ್ತನೆ ಮಾಡಿಕೊಳ್ಳಲು ಮನಸು ಮಾಡುತ್ತಾ ಎಂಬುದು ಪ್ರಶ್ನೆ. ಇದಕ್ಕೆ ಮುಂದಿನ ಶನಿವಾರದಿಂದ ನಡೆಯುವ ಚಿಂತನಾ ಶಿಬಿರ ಉತ್ತರ ನೀಡುತ್ತದೆ.
(ಒನ್ಇಂಡಿಯಾ ಸುದ್ದಿ)