ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು: ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್
ಸುನಂದಾ ಪುಷ್ಕರ್ ಸಂಶಯಾಸ್ಪದ ಸಾವಿನ ಬಗ್ಗೆ ರಿಪಬ್ಲಿಕ್ ಟಿವಿ ಬಾಂಬ್ ಸಿಡಿಸಿದೆ. ಶಶಿ ತರೂರ್ ಮತ್ತು ಅವರ ಬಲಗೈ ಭಂಟ ನಾರಾಯಣ್ ನಡುವೆ ನಡೆದಿದೆ ಎನ್ನಲಾದ ಟೇಪ್ ಅನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಸೋಮವಾರ ಬಿಡುಗಡೆಗೊಳಿಸಿದೆ
ಲೋಕಾರ್ಪಣೆಗೊಂಡ ಮೊದಲ ದಿನದ ಪ್ರಸಾರದಲ್ಲೇ ಲಾಲೂ ಪ್ರಸಾದ್ ಯಾದವ್ - ಶಹಾಬುದ್ದೀನ್ ಮಾತುಕತೆಯ ಟೇಪ್ ಬಹಿರಂಗಗೊಳಿಸಿದ್ದ ರಿಪಬ್ಲಿಕ್ ಟಿವಿ, ಸೋಮವಾರ (ಮೇ 8) ಸುನಂದಾ ಪುಷ್ಕರ್ ಸಂಶಯಾಸ್ಪದ ಸಾವಿನ ಬಗ್ಗೆ ಮತ್ತೊಂದು ಬಾಂಬ್ ಸಿಡಿಸಿದೆ.
ಸುನಂದಾ ಪುಷ್ಕರ್ ಪತಿ, ಕಾಂಗ್ರೆಸ್ ಮುಖಂಡ, ಶಶಿ ತರೂರ್ ಮತ್ತು ಅವರ ಬಲಗೈ ಭಂಟ ನಾರಾಯಣ್ ನಡುವೆ ನಡೆದಿದೆ ಎನ್ನಲಾದ ಟೇಪ್ ಅನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಸೋಮವಾರ ಬಿಡುಗಡೆಗೊಳಿಸಿದ್ದು, ಸಾವಿನ ಸುತ್ತಮುತ್ತ ಇದ್ದ ಅಂತೆಕಂತೆ ಸುದ್ದಿಗೆ ರೆಕ್ಕೆಪುಕ್ಕ ಬಂದಂತಾಗಿದೆ. (ಸುನಂದಾ ಸಾವು, ಎಫ್ ಬಿಐ ನೆರವು ಕೋರಿದ ಪೊಲೀಸರು)
ಇದರ ಜೊತೆಗೆ ಲೀಲಾ ಪ್ಯಾಲೇಸ್ ಹೋಟೇಲಿನ ಕೊಠಡಿ ಸಂಖ್ಯೆ 307 ರಿಂದ 345ಕ್ಕೆ ಸುನಂದಾ ಪುಷ್ಕರ್ ಮೃತ ದೇಹವನ್ನು ಸಾಗಿಸಲಾಗಿತ್ತು, ಪೊಲೀಸರು ವಿಚಾರಣೆಗೆ ಬರುವ ಮುನ್ನ ಸಾಕಷ್ಟು ಸಾಕ್ಷಿಗಳನ್ನು ನಾಶಮಾಡಲಾಗಿತ್ತು ಎಂದು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದೆ.
ತನ್ನ ಪತ್ನಿಯ ಸಾವಿನ ಬಗ್ಗೆ ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್ ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಇದೊಂದು ಸುಳ್ಳಿನ ಪರಮಾವಧಿ ಎಂದು ವ್ಯಾಖ್ಯಾನಿಸಿದ್ದಾರೆ. ಸುನಂದಾ ಅವರ ದೇಹ ದೆಹಲಿಯ ಲೀಲಾ ಪ್ಯಾಲೇಸ್ ಹೋಟೇಲಿನಲ್ಲಿ ಜನವರಿ 17, 2014ರಲ್ಲಿ ಪತ್ತೆಯಾಗಿತ್ತು.
ಸುನಂದಾ ಪುಷ್ಕರ್ ಸಾವಿನ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡದ ತನಿಖಾಧಿಕಾರಿಗಳು, ಇದೊಂದು ನಿಗೂಢ ಸಾವು ಎಂದಷ್ಟೇ ಹೇಳಿದ್ದರು. ಘಟನೆ ನಡೆದ ಎರಡು ದಿನದ ನಂತರ ಸುನಂದಾ ಮತ್ತು ಪಾಕಿಸ್ತಾನದ ಪತ್ರಕರ್ತೆಯೊಬ್ಬರ ನಡುವೆ ಟ್ವಿಟ್ಟರ್ ನಲ್ಲಿ ನಡೆದ ಜಗಳ ಬಹಿರಂಗವಾಗಿತ್ತು. ಮುಂದೆ ಓದಿ..
ನಾನೊಬ್ಬ ಅಮಾಯಕ, ಶಶಿ ತರೂರ್
ಘಟನಾ ಸ್ಥಳದಲ್ಲಿ ತಾನಿರಲಿಲ್ಲ ಎಂದು ಶಶಿ ತರೂರ್ ಹೇಳಿದ್ದರೂ, ತರೂರ್ ಲೀಲಾ ಪ್ಯಾಲೇಸ್ ಹೋಟೇಲಿನಲ್ಲೇ ಇದ್ದರು ಎಂದು ವರದಿಯಾಗಿತ್ತು. ನಾನೊಬ್ಬ ಅಮಾಯಕ, ಯಾವುದೇ ತನಿಖೆಗೆ ಸಿದ್ದ, ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇನೆಂದು ಶಶಿ ತರೂರ್ ಹೇಳಿದ್ದರು.
ವಿಷಸೇವನೆಯಿಂದ ಸಾವು
ಘಟನೆ ನಡೆದ ಎರಡು ವರ್ಷದ ನಂತರ ಅಂದರೆ ಜನವರಿ 2016ರಲ್ಲಿ ಸುನಂದಾ ಪುಷ್ಕರ್ ಸಾವನ್ನಪ್ಪಿದ್ದು ವಿಷಸೇವನೆಯಿಂದ ಎಂದು ತನಿಖಾಧಿಕಾರಿಗಳು ಘೋಷಿಸಿದ್ದರು. ಮೇ 2016ರಲ್ಲಿ ಸಾವಿನ ಮರುವಿಚಾರಣೆಗೆ ಆದೇಶ ಹೊರಡಿಸಲಾಗಿತ್ತು.
ಮರುವಿಚಾರಣೆ ಆರಂಭಿಸಿದ ಪೊಲೀಸರು
ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಕುಮಾರ್ ವರ್ಮಾ ಮರುತನಿಖೆಗೆ ಆದೇಶಿಸಿ, ಈವರೆಗಿನ ಎಲ್ಲಾ ದಾಖಲೆ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದರು. ಜೊತೆಗೆ ಕಳೆದ ಎರಡು ವರ್ಷದಲ್ಲಿ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಕೂಡಾ ವಿಚಾರಣೆ ನಡೆಸಿದ್ದರು.
ಶಶಿ ತರೂರ್
ಈಗ ರಿಪಬ್ಲಿಕ್ ಟಿವಿ ಸುನಂದಾ ಪುಷ್ಕರ್ ಸಾವು, ಇದರಲ್ಲಿ ಶಶಿ ತರೂರ್ ಪಾತ್ರವಿರುವ ಸಾಧ್ಯತೆ, ತನ್ನ ಆಪ್ತನ ಜೊತೆ ಶಶಿ ತರೂರ್ ನಡೆಸಿದ ಸಂಭಾಷಣೆಯನ್ನು ಇಟ್ಟುಕೊಂಡು ರಿಪಬ್ಲಿಕ್ ಬಿಗ್ ಡಿಬೇಟ್ ನಡೆಸಿ ಹೊಸ ಸಂಚಲನ ಮೂಡಿಸಿದೆ.
ಟಿಆರ್ಪಿಗಾಗಿ ಸುಳ್ಳು ಸುದ್ದಿ ಪ್ರಸಾರ, ಶಶಿ
ರಿಪಬ್ಲಿಕ್ ಟಿವಿಯ ಪ್ರೇಮಾ ಶ್ರೀದೇವಿ ಮತ್ತು ಶಶಿ ಆಪ್ತ ನಾರಾಯಣ್ ನಡುವೆ ನಡೆದ ಸಂಭಾಷಣೆ, ಪ್ರೇಮಾ ಮತ್ತು ಸುನಂದಾ ಪುಷ್ಕರ್ ನಡುವೆ ನಡೆದಿದೆ ಎನ್ನಲಾಗುವ ಸಂಭಾಷಣೆಯ ಟೇಪ್ ಅನ್ನು ರಿಪಬ್ಲಿಕ್ ಟಿವಿ ತನ್ನ ಶೋನಲ್ಲಿ ಬಹಿರಂಗಗೊಳಿಸಿದೆ. ವೃತ್ತಿಪರ ವ್ಯಕ್ತಿಯಲ್ಲದ ಅರ್ನಬ್ ಅವರಿಂದ ಸುಳ್ಳಿನ ಪರಮಾವಧಿ, ಟಿಆರ್ಪಿಗಾಗಿ ಸಾವನ್ನು ಬಳಸಿಕೊಳ್ಳುತ್ತಿರುವ ರಿಪಬ್ಲಿಕ್ ಟಿವಿಯಿಂದ ಇದೊಂದು ಸುಳ್ಳಿನ ಸರಮಾಲೆ ಎಂದು ಶಶಿ ತರೂರ್ ಟೀಕಿಸಿದ್ದಾರೆ.