ತಮಿಳುನಾಡಿನ ಜೋಹೊ ಸಂಸ್ಥಾಪಕನಿಗೆ ಪದ್ಮಶ್ರೀ ಪ್ರಶಸ್ತಿ
ನವದೆಹಲಿ, ಜನವರಿ 26: ಭಾರತಕ್ಕಿಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ಈ ಸಂಭ್ರಮಕ್ಕೆ ಜೊತೆಯಾಗಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಸದ್ಯಕ್ಕೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಜೋಹೊ ಸಾಫ್ಟ್ ವೇರ್ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಶ್ರೀಧರ್ ವೆಂಬು ಅವರಿಗೂ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿದೆ.
ಅವರಿಗೆ ಈ ಪ್ರಶಸ್ತಿ ನೀಡಿರುವುದೇಕೆ? ಅವರ ಸಂಪೂರ್ಣ ವಿವರ ಇಲ್ಲಿದೆ...
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
54 ವರ್ಷದ ಶ್ರೀಧರ್ ವೆಂಬು ಅವರು ಐಐಟಿ ಮದ್ರಾಸ್ ನಲ್ಲಿ ಹಾಗೂ ಪ್ರಿನ್ಸೆಟಾನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಹದಿನಾರು ವರ್ಷಗಳ ಹಿಂದೆ ಝೋಹೊ ಸ್ಕೂಲ್ ಆಫ್ ಲರ್ನಿಂಗ್ ಆರಂಭಿಸಿದ ಅವರಿಗೆ ಔಪಚಾರಿಕ ಶಿಕ್ಷಣಕ್ಕಿಂತ ಪ್ರಾಯೋಗಿಕ ಕಲಿಕೆ ಮೇಲೆ ವಿಶ್ವಾಸ. ಈ ಹಿನ್ನೆಲೆಯಲ್ಲಿಯೇ ಸ್ಕೂಲ್ ಆಫ್ ಲರ್ನಿಂಗ್ ಆರಂಭಿಸಿದ್ದರು. ಇದೇ ನೆಲೆಗಟ್ಟಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಸಂಸ್ಥೆ ಆರಂಭಿಸಿದರು.
1996ರಲ್ಲಿ ಅಡ್ವೆಂಟ್ ನೆಟ್ ಇಂಕ್.ಇನ್ ಸಂಸ್ಥೆ ಸ್ಥಾಪಿಸಿದ ವೆಂಬು ಹಾಗೂ ಸಹೋದರ ಟೋನಿ ಥಾಮಸ್ ನಂತರ 2009ರಲ್ಲಿ ಚೆನ್ನೈನಲ್ಲಿ ಜೋಹೊ ಕಾರ್ಪ್ ಎಂದು ಬದಲಿಸಿದರು. ಇದೀಗ ಜೋಹೋಗೆ ಲೆವಿಸ್, ಅಮೆಜಾನ್, ಫಿಲಿಪ್ಸ್, ವರ್ಲ್ ಪೂಲ್, ಓಲಾ, ಶಿಯೋಮಿ, ಜೊಮಾಟೊ ಒಳಗೊಂಡಂತೆ ಅರವತ್ತು ಮಿಲಿಯನ್ ಮಂದಿ ಗ್ರಾಹಕರು ಇದ್ದಾರೆ.
ಒತ್ತಡದ ಬಗ್ಗೆ ವೆಂಬು ಮಾತು: ಕೊರೊನಾ ಸೋಂಕಿನ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡ ವೆಂಬು ಅವರು, ತಮಿಳುನಾಡಿನ ಮಾತಲಂಪಾರೈ ಹಳ್ಳಿಗೆ ಬಂದರು. "ಈ ಸಂದರ್ಭ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸಿದೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಒತ್ತಡದಲ್ಲಿ ಕೆಲಸ ಮಾಡಲು ನಾನು ಇಷ್ಟ ಪಡುತ್ತೇನೆ. ಒತ್ತಡದಲ್ಲಿ ಕೆಲಸ ಮಾಡುವುದರಿಂದ ಎಷ್ಟೋ ಮಂದಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಒತ್ತಡ ಎಂಬ ವಿಷಯವನ್ನು ನನ್ನಿಂದ ಹಾಗೂ ನನ್ನ ನೌಕರರಿಂದ ದೂರವಿಡಲು ಬಯಸುತ್ತೇನೆ" ಎಂದು ಸಲಹೆ ನೀಡುತ್ತಾರೆ.
ವ್ಯವಹಾರದಲ್ಲಿ ಧೈರ್ಯ ಮುಖ್ಯ: ನಿಮಗಿಂತ ಬಲಶಾಲಿಗಳು ಎದುರಾಗುವ ಸಂದರ್ಭ ವ್ಯವಹಾರದಲ್ಲಿ ಬಂದೇ ಬರುತ್ತದೆ. ಆಗ ನೀವು ಆತಂಕ, ಭಯ ಬಿಡುವುದು ಅವಶ್ಯಕವಾಗಿರುತ್ತದೆ. ಎಷ್ಟಾದರೂ ಕೊನೆಗೆ ಏನಾಗಬಹುದು? ಕೆಲಸ ಕಳೆದುಕೊಳ್ಳಬಹುದು ಅಷ್ಟೇ ತಾನೇ? ಇದನ್ನು ಮುಂದಿಟ್ಟುಕೊಂಡು ಹೋಗಬೇಕು. ಕೆಲಸಕ್ಕೆ ನಾನು ಯುದ್ಧ ಸಾದೃಶ್ಯವನ್ನು ಸಮೀಕರಿಸಿಕೊಂಡು ನೋಡುತ್ತೇನೆ. ಯುದ್ಧದಲ್ಲಿ ಕೆಟ್ಟದ್ದು ಎಂದರೆ ಕೊನೇ ಪಕ್ಷ ಏನಾಗಬಹುದು? ಸಾಯಬಹುದು. ಆದರೆ ಬಿಸಿನೆಸ್ ಎಂಬ ಯುದ್ಧದಲ್ಲಿ ನೀವು ಬದುಕುತ್ತೀರಿ. ಅದೇ ಸುಲಭ ಎನ್ನಿಸುವುದಿಲ್ಲವೇ" ಎಂದು ವ್ಯವಹಾರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಯಾವುದೇ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆಗಾಗಿ ನೀಡಲಾಗುವ ಪದ್ಮಶ್ರೀ ಪ್ರಶಸ್ತಿಯನ್ನು ಶ್ರೀಧರ್ ವೆಂಬು ಅವರಿಗೆ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ನೀಡಲಾಗಿದೆ.