ಮುಂದುವರಿದ ಬಂಡಾಯ, ಬಿಜೆಪಿ ನಡವಳಿಕೆಗೆ ಎನ್.ಡಿ.ಎ ಮಿತ್ರಪಕ್ಷ ಆಕ್ರೋಶ
ಲಕ್ನೋ, ಮಾರ್ಚ್ 19: ಶಿವಸೇನೆ, ಟಿಡಿಪಿ ಸಾಲಿಗೆ ಹೊಸ ಪಕ್ಷವೊಂದು ಸೇರ್ಪಡೆಯಾಗಿದೆ. ಎನ್.ಡಿ.ಎ ಮಿತ್ರ ಪಕ್ಷವಾಗಿರುವ ಉತ್ತರ ಪ್ರದೇಶದ ಸುಹೆಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್.ಬಿ.ಎಸ್.ಪಿ) ಬಿಜೆಪಿ ನಡವಳಿಕೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕುರಿತು ಮಾತನಾಡಿರುವ ಎಸ್.ಬಿ.ಎಸ್.ಪಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಸಚಿವ ಒ.ಪಿ ರಾಜಭಾರ್, "ಉತ್ತರ ಪ್ರದೇಶ ಸರಕಾರ ಕೇವಲ ದೇವಸ್ಥಾನಗಳ ಬಗ್ಗೆ ಗಮನಹರಿಸುತ್ತಿದೆ. ಬಡ ಜನರ ಕಲ್ಯಾಣದ ಬಗ್ಗೆ ಯೋಚಿಸುತ್ತಿಲ್ಲ. ಇದೇ ಬಡವರು ಅಧಿಕಾರಕ್ಕೇರಲು ಮತಚಲಾಯಿಸಿದ್ದರು. ಈ ಬಗ್ಗೆ ತುಂಬಾ ಮಾತನಾಡಲಾಗುತ್ತದೆ. ಆದರೆ ತಳಮಟ್ಟದಲ್ಲಿ ಏನೂ ಬದಲಾವಣೆಯಾಗುತ್ತಿಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದ್ದಲಕ್ಕೆ ಕಲಾಪ ಬಲಿ, ಮಂಡನೆಯಾಗದ ಟಿಡಿಪಿ ಅವಿಶ್ವಾಸ ನಿರ್ಣಯ
"ಹೌದು ನಾವು ಸರಕಾರದ ಭಾಗವಾಗಿದ್ದೇವೆ ಮತ್ತು ಎನ್.ಡಿ.ಎ ಜತೆಗಿದ್ದೇವೆ. ಆದರೆ ಬಿಜೆಪಿ ಮೈತ್ರಿಕೂಟದ ಧರ್ಮವನ್ನು ಪಾಲಿಸುತ್ತಿಲ್ಲ. ನಾನು ನನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದೇನೆ. ಆದರೆ ಅವರು 325 ಸೀಟುಗಳ ನಶೆಯಲ್ಲಿ ಹುಚ್ಚರಾಗಿದ್ದಾರೆ," ಎಂದು ರಾಜಭರ್ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಎಸ್.ಬಿ.ಎಸ್.ಪಿ 2017ರ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಆರಂಭದಲ್ಲಿ ಬಿಜೆಪಿ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿತ್ತು. ಮತ್ತು ಅದೀಗ ಸ್ವತಂತ್ರವಾಗಿ ಚುನಾವಣೆಗಳನ್ನು ಎದುರಿಸುತ್ತಿದೆ. ಇದೀಗ ಟಿಡಿಪಿ ಎನ್.ಡಿ.ಎ ಮೈತ್ರಿಕೂಟದಿಂದ ಹೊರಬಂದಿದೆ. ಇದೇ ಹಾದಿಯಲ್ಲಿ ಹಲವು ಪಕ್ಷಗಳು ಹೊರಟಿದ್ದು ಅವುಗಳನ್ನು ಎಸ್.ಬಿ.ಎಸ್.ಪಿ ಕೂಡ ಒಂದು.
ಅತ್ತ ಎಸ್.ಬಿ.ಎಸ್.ಪಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿರುವಾಗಲೇ ಇತ್ತ ಬಿಹಾರದಲ್ಲಿ ಎನ್.ಡಿ.ಎ ಮಿತ್ರಪಕ್ಷವಾಗಿರುವ ಎಲ್.ಜೆ.ಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ಕೇಸರಿ ಪಕ್ಷದ ವಿರುದ್ಧ ಅಸಮಧಾನ ತೋಡಿಕೊಂಡಿದ್ದಾರೆ.