Breaking- ಆರ್ಬಿಐ ತುರ್ತು ಸುದ್ದಿಗೋಷ್ಠಿ: ರೆಪೋ ದರ 40 ಅಂಕ ಏರಿಕೆ
ನವದೆಹಲಿ, ಮೇ 4: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಅಚಾನಕ್ಕಾಗಿ ಪತ್ರಿಕಾಗೋಷ್ಠಿ ಕರೆದು ಕೆಲ ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ.
ಹಲವು ಕಾಲದಿಂದ ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬರಲಾಗಿದ್ದ ರೆಪೋ ದರದಲ್ಲಿ 40 ಮೂಲಾಂಕದಷ್ಟು ಏರಿಕೆ ಮಾಡುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದರು. ಇದರೊಂದಿಗೆ ರೆಪೋ ದರ ಶೇ. 4.40ಕ್ಕೆ ಏರಿದಂತಾಗಿದೆ. 2018ರ ನಂತರ ಇದೇ ಮೊದಲ ಬಾರಿಗೆ ರೆಪೋ ದರದಲ್ಲಿ ಬದಲಾವಣೆ ಆಗಿದೆ.
ಮಾನಿಟರಿ ಪಾಲಿಸಿ ಕಮಿಟಿ ಮೇ 2ರಿಂದ ಸಭೆ ನಡೆಸಿ ಆರ್ಥಿಕ ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬುದನ್ನು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರ್ಬಿಐ ಅನಿವಾರ್ಯವಾಗಿ ಮಧ್ಯಪ್ರವೇಶಿಸಬೇಕಾಗಿದೆ.
Interesting Economics: ಮರಡೋನಾ ಥಿಯರಿ: ಹಣದುಬ್ಬರ ಇಟ್ಟುಕೊಂಡು ಆರ್ಬಿಐ ಜಾಣ್ಮೆ ಆಟ
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ವಿಶ್ವಾದ್ಯಂತ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್ಗಳು ಆರ್ಥಿಕ ಹಿನ್ನಡೆಗೆ ಕಡಿವಾಣ ಹಾಕಲು ವಿವಿಧ ದರಗಳನ್ನು ಏರಿಕೆ ಮಾಡುವ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಆರ್ಬಿಐ ಕೆಲ ಸೂಕ್ತ ಕ್ರಮಗಳಿಗೆ ಮುಂದಾಗಿದೆ. ಆ ಸಂಬಂಧ ಮೊನ್ನೆಯಿಂದ ಆರ್ಬಿಐನ ಎಂಪಿಸಿ ಸಭೆ ನಡೆಸಿ ಚರ್ಚಿಸಲಾಗಿತ್ತು.
ರೆಪೋ ದರ ಎಂದರೇನು?
ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕ್ಗಳಿಗೆ ಆರ್ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರವಾಗಿದೆ. ಅಂದರೆ, ಕಮರ್ಷಿಯಲ್ ಬ್ಯಾಂಕುಗಳು ಈಗ ಆರ್ಬಿಐನಿಂದ ಫಂಡಿಂಗ್ ಪಡೆದರೆ ಅದಕ್ಕೆ ಶೇ. 4.40ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಇನ್ನು ರಿವರ್ಸ್ ರೆಪೋ ಎಂದರೆ, ವಾಣಿಜ್ಯ ಬ್ಯಾಂಕುಗಳು ಆರ್ಬಿಐನಲ್ಲಿ ಇರಿಸುವ ಹಣಕ್ಕೆ ಸಿಗುವ ಬಡ್ಡಿ ದರವಾಗಿದೆ. ರಿವರ್ಸ್ ರಿಪೇ ದರ ಸದ್ಯ ಶೇ. 3.35 ಇದೆ. ಇದೇ ವೇಳೆ, ಕ್ಯಾಷ್ ರಿಸರ್ವ್ ರೇಟ್ ಅನ್ನೂ 50 ಮೂಲಾಂಕಗಳಷ್ಟು ಆರ್ಬಿಐ ಏರಿಸಿದೆ.
RBI : ರಿಯಲ್ ಜಿಡಿಪಿ ಇನ್ನಷ್ಟು ಕುಂಠಿತಗೊಳ್ಳುವ ನಿರೀಕ್ಷೆ; ಶೇ. 7.2 ಎಂದು ಆರ್ಬಿಐ ಅಂದಾಜು
ಬೆಚ್ಚಿಬಿದ್ದ ಷೇರುಪೇಟೆ: ಆರ್ಬಿಐ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ರೆಪೋ ದರವನ್ನು ಏರಿಕೆ ಮಾಡುತ್ತಿದ್ದಂತೆಯೇ ಸೆನ್ಸೆಕ್ಸ್ ಸೂಚ್ಯಂಕ 900 ಅಂಕಗಳನ್ನು ಕಳೆದುಕೊಂಡಿದೆ. ಇನ್ನೊಂದು ಪರಿಣಾಮವಾಗಿ ಸರಕಾರಿ ಬಾಂಡ್ಗಳ ಮೌಲ್ಯ ಶೇ. 7.42ರಷ್ಟು ಏರಿಕೆಯಾಗಿದೆ.
ಆರ್ಬಿಐ ಗವರ್ನರ್ ಹೇಳಿದ್ದೇನು?; ಜಾಗತಿಕ ಆರ್ಥಿಕತೆ ಹಿನ್ನಡೆಯಾಗುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕ ಆರ್ಥಿಕ ಚೇತರಿಕೆ ಹಳಿ ತಪ್ಪುತ್ತಿದೆ. ಇತ್ತೀಚಿನ ಜಿಡಿಪಿ ವಿವರಗಳು ಜಾಗತಿಕ ಆರ್ಥಿಕ ಹಿನ್ನಡೆಗೆ ಕೈಗನ್ನಡಿ ಹಿಡಿದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಪ್ರಗತಿಗೆ ಪುಷ್ಟಿ ಕೊಡುವ ಉದ್ದೇಶದಿಂದ ರೆಪೋ ಮತ್ತು ಸಿಆರ್ಆರ್ ದರಗಳನ್ನ ಏರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಈ ವೇಳೆ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)