ವ್ಯಕ್ತಿಯ ಪ್ರಶ್ನೆ ಮಾಡುವ ಹಕ್ಕು ಕಾಪಾಡಬೇಕಿದೆ: ರಾಜನ್
ಮುಂಬೈ, ಅಕ್ಟೋಬರ್, 31: ಅಸಹಿಷ್ಣುತೆ ಬಗೆಗಿನ ಚರ್ಚೆಗೆ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಸಹ ದನಿಗೂಡಿಸಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ನಂತರದ ಸರದಿಯನ್ನು ರಘುರಾಂ ರಾಜನ್ ನಿಭಾಯಿಸಿದ್ದಾರೆ.
ಯಾವುದೇ ವಿಚಾರವನ್ನು ಇಲ್ಲವೇ ಘಟನೆಯನ್ನು ಸಹಿಷ್ಣುತೆ ಆಧಾರದಲ್ಲಿ ಪರಿಗಣಿಸಿದರೆ ಹಿಂಸೆಯಿಂದ ದೂರವಿರಲು ಸಾಧ್ಯ ಎಂದು ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೆಹಲಿ- ಐಐಟಿ ಘಟಿಕೋತ್ಸವದಲ್ಲಿ ಮಾತನಾಡಿದ ರಾಜನ್ , ವ್ಯಕ್ತಿಯ ಪ್ರಶ್ನೆ ಮಾಡುವ ಸ್ವಾತಂತ್ರ್ಯ ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.[ಭಯದಲ್ಲಿ ಬದುಕುತಿಹ ಅಲ್ಪಸಂಖ್ಯಾತರು : ನಾರಾಯಣಮೂರ್ತಿ ಉವಾಚ]
ಪರಸ್ಪರ ಗೌರವ ಮತ್ತು ಸಮಾಜದಲ್ಲಿ ಭದ್ರತೆ ಕಾಯ್ದುಕೊಂಡರೆ ಅಭಿವೃದ್ಧಿಗೆ ಯಾವ ತಡೆ ಉಂಟಾಗುವುದಿಲ್ಲ. ಹಿಂದಿನ ಕಾಲದ ರಾಜರು ಸಹ ಸಹಿಷ್ಣುಗಳಾಗಿದ್ದರು. ಆದರೆ ಭಾರತದ ಪರಂಪರೆ ಇಂದು ಮಾಯವಾದಂತೆ ತೋರುತ್ತಿದೆ ಎಂದು ಹೇಳಿದರು.
ಚರ್ಚಾ ಸಂಪ್ರದಾಯ ನಡೆದುಕೊಂಡೇ ಸಾಗಬೇಕು. ಆಡಳಿದಲ್ಲಿ ಇರುವ ಮಾತ್ರಕ್ಕೆ ಬಲತ್ಕಾರಯುತವಾಗಿ ಯಾವುದನ್ನು ಹೇರಬಾರದು. ಅಂಥ ಕೆಲಸಕ್ಕೆ ಮುಂದಾದರೆ ಅಹಿತಕರ ಘಟನಾವಳಿಗಳು ಸಂಭವಿಸುತ್ತವೆ ಎಂದು ಹೇಳಿದರು.[ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!]
ಕಾರಣವೊಂದನ್ನು ಇಟ್ಟುಕೊಂಡು ಯಾವುದೇ ಸಮುದಾಯ ಅಥವಾ ಗುಂಪಿನ ವ್ಯಕ್ತಿ ಅಥವಾ ಕುಟುಂಬಗಳ ಮೇಲೆ ದೈಹಿಕ ಹಲ್ಲೆ ಅಥವಾ ನಿಂದನೆ ಮಾಡುವುದು ಪ್ರಜಾಪ್ರಭುತ್ವ ದೇಶದಲ್ಲಿ ಸರಿಯಾದ ಕ್ರಮವಲ್ಲ. ಇದು ಎಲ್ಲದಕ್ಕೂ ಮಾರಕ ಎಂದು ಹೇಳಿದರು.
ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇದನ್ನು ನಿವಾರಣೆ ಮಾಡದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.