ಆರ್ ಬಿಐ ಹಾಗೂ ಕೇಂದ್ರ ಸರಕಾರದ ಸಂಬಂಧ ವಿವರಿಸಿದ ರಘುರಾಮ್ ರಾಜನ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕಾರಿನಲ್ಲಿರುವ ಸೀಟ್ ಬೆಲ್ಟ್ ನಂತೆ. ಅದಿಲ್ಲದಿದ್ದರೆ ಅಪಘಾತ ಆಗಬಹುದು ಎಂದು ಆರ್ ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ. ಸರಕಾರವು ಆರ್ ಬಿಐ ವಿಚಾರವಾಗಿ ಸಹಾನುಭೂತಿ ತರುವಂತೆ ಮಾಡಿದಲ್ಲಿ, ಆಗಲ್ಲ ಎಂದು ಹೇಳುವ ಸ್ವಾತಂತ್ರ್ಯ ಕೇಂದ್ರ ಬ್ಯಾಂಕ್ ಗೆ ಇದೆ ಎಂದಿದ್ದಾರೆ.
ಆರ್ ಬಿಐ ಹಾಗೂ ಕೇಂದ್ರ ಸರಕಾರದ ಮಧ್ಯೆ ಸದ್ಯಕ್ಕೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ವಿಚಾರವಾಗಿ ಹೇಳಿದ್ದಾರೆ. ನವೆಂಬರ್ 19ರಂದು ಆರ್ ಬಿಐ ಮಂಡಳಿ ಸಭೆಯಿದ್ದು, ಆ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಲಾಗಿದೆ. ಸಂಸ್ಥೆಯನ್ನು ರಕ್ಷಣೆ ಮಾಡುವುದು ಮಂಡಳಿ ಉದ್ದೇಶವೇ ಹೊರತು ಇತರರ ಹಿತಾಸಕ್ತಿಯನ್ನಲ್ಲ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಕೇಂದ್ರ- ಆರ್ ಬಿಐ ಮಧ್ಯೆ ತಿಕ್ಕಾಟಕ್ಕೆ 3.6 ಲಕ್ಷ ಕೋಟಿಯೇ ಕಾರಣ!
ಆರ್ ಬಿಐ ಕಾರಿನಲ್ಲಿನ ಸೀಟ್ ಬೆಲ್ಟ್ ಇದ್ದಂತೆ. ಸರಕಾರವು ಚಾಲಕ ಇದ್ದಂತೆ. ಸೀಟ್ ಬೆಲ್ಟ್ ಹಾಕದಿರುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಸೀಟ್ ಬೆಲ್ಟ್ ಹಾಕದಿದ್ದಲ್ಲಿ ಅಪಘಾತ ಆಗುವ ಹಾಗೂ ಅದು ಗಂಭೀರ ಅಪಘಾತ ಆಗುವ ಸಾಧ್ಯತೆಗಳು ಹೆಚ್ಚು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸನ್ನಿವೇಶವನ್ನು ಅರಿತು ನಿರ್ಧಾರ ಕೈಗೊಳ್ಳಬೇಕು
ಸೂಕ್ಷ್ಮವಾಗಿ ಹೇಳಬೇಕು ಅಂದರೆ ಸರಕಾರ ಹಾಗೂ ಆರ್ ಬಿಐ ಮಧ್ಯದ ಸಂಬಂಧ ಹೀಗೆ. ಅಭಿವೃದ್ಧಿ ಕಡೆಗೆ ಸರಕಾರ ಗಮನ ಕೇಂದ್ರೀಕರಿಸಲು ಬಯಸುತ್ತದೆ ಮತ್ತು ಆರ್ಥಿಕ ಸ್ಥಿರತೆಗಾಗಿ ಆರ್ ಬಿಐ ನಿಗದಿ ಮಾಡಿರುವ ಮಿತಿಯೊಳಗೆ ಕೆಲಸ ಮಾಡಬೇಕಾಗುತ್ತದೆ. ಆರ್ಥಿಕ ಸ್ಥಿರತೆಗೆ ಆರ್ ಬಿಐ ಜವಾಬ್ದಾರಿ. ಆದ್ದರಿಂದ ಆಗಲ್ಲ ಎಂದು ಹೇಳುವ ಅಧಿಕಾರ ಕೂಡ ಕೇಂದ್ರ ಬ್ಯಾಂಕ್ ಗೆ ಇದೆ ಎಂದಿರುವ ಅವರು, ಪರಿಸ್ಥಿತಿ ಅಥವಾ ಸನ್ನಿವೇಶವನ್ನು ಪರಾಮರ್ಶಿಸಿ, ಇದರಿಂದ ಆರ್ಥಿಕ ಅಸ್ಥಿರತೆ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಗಲ್ಲ ಎಂದಿದೆಯೇ ವಿನಾ ಸಿಟ್ಟಿನಿಂದ ಅಲ್ಲ ಎಂದು ರಾಜನ್ ಹೇಳಿದ್ದಾರೆ.
ಗಣನೆಗೆ ತೆಗೆದುಕೊಳ್ಳುವಂತೆ ಸರಕಾರ ಕೇಳುತ್ತದೆ
ಬಹಳ ಹಿಂದಿನಿಂದಲೂ ಇದೇ ರೀತಿ ಸಂಬಂಧ ಇದೆ. ಸತ್ಯ ಏನೆಂದರೆ ಆರ್ ಬಿಐ ಇಲ್ಲ ಎನ್ನುವುದು ಹೊಸತಲ್ಲ. ದಯವಿಟ್ಟು ಇದನ್ನು ಗಣನೆಗೆ ತೆಗೆದುಕೊಳ್ಳಿ, ಪರಿಗಣಿಸಿ ಎಂದು ಕೇಳಿಕೊಳ್ಳುತ್ತದೆ. ಒಂದು ಹಂತದಲ್ಲಿ, ನಿಮ್ಮ ನಿರ್ಧಾರ ಗೌರವಿಸುತ್ತೇವೆ. ಆರ್ಥಿಕ ಸ್ಥಿರತೆಗೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ಬೆಂಬಲವಿದೆ ಎಂದು ಆರ್ ಬಿಐ ತಿಳಿಸುತ್ತದೆ ಎಂದಿದ್ದಾರೆ.
ಊರ್ಜಿತ್ ಪಟೇಲ್ ರಾಜೀನಾಮೆ ಆಗ್ರಹಿಸುವುದಿಲ್ಲ ಎಂದ ಕೇಂದ್ರ
ರಿಸರ್ವ್ ಬ್ಯಾಂಕ್ ಗೆ ಬಹಳ ಜವಾಬ್ದಾರಿ ಇದೆ
ಗವರ್ನರ್ ಹಾಗೂ ಡೆಪ್ಯೂಟಿ ಗವರ್ನರ್ ರನ್ನು ಒಂದು ಸಲ ನೀವು ನೇಮಕ ಮಾಡಿದ ಮೇಲೆ ಅವರ ಮಾತು ಕೇಳಬೇಕು. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ. ಅವರೇ ನಿಮ್ಮ ಸುರಕ್ಷಾ ಬೆಲ್ಟ್. ರಿಸರ್ವ್ ಬ್ಯಾಂಕ್ ಗೆ ಈ ದೇಶದ ವಿಚಾರದಲ್ಲಿ ಜವಾಬ್ದಾರಿ ಇದೆ. ಸರಕಾರದ ಮಾತನ್ನು ಕೇಳಿಸಿಕೊಂಡ ನಂತರ ಸ್ವಂತ ನಿರ್ಧಾರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ನಂತಿರಬೇಕು, ಸಿಧುವಿನಂತಿಲ್ಲ
ನಗದು ಸಮಸ್ಯೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ನಷ್ಟು ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ. ನನಗನಿಸುವಂತೆ ನಾನಾ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿಗಳದು ನಿವಾರಿಸಲು ಸಾಧ್ಯವಿಲ್ಲದಂಥ ಸಮಸ್ಯೆ ಖಂಡಿತಾ ಅಲ್ಲ. ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣ ನಗದು ಚಲಾವಣೆ ಆಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಡಿಕೊಳ್ಳಬೇಕು. ಆರ್ ಬಿಐ ಮಂಡಳಿಯು ರಾಹುಲ್ ದ್ರಾವಿಡ್ ರೀತಿಯಲ್ಲಿ ಆಡಬೇಕು. ಅವರನ್ನು 'ಆಪದ್ಬಾಂಧವ' ಎಂದು ಕರೆಯಲಾಗುತ್ತದೆ. ಅದನ್ನು ಬಿಟ್ಟು ಜೋರು ಕಾಮೆಂಟರಿಗಳಿಗೆ ಹೆಸರಾದ ಸಿಧು ರೀತಿಯಲ್ಲಿ ಅಲ್ಲ ಎಂದು ಅವರು ಇದೇ ಸಮಯದಲ್ಲಿ ತಿಳಿಸಿದ್ದಾರೆ.