ಭಾರತದ ದುಡ್ಡು ತಿಂದು ಪಾಕಿಸ್ತಾನಕ್ಕಾಗಿ ಕೆಲಸ ಮಾಡಿದ ಗೂಢಾಚಾರಿ!
ಭಾರತದ ಗುಪ್ತಚರ ಇಲಾಖೆಗೆ ಕಾಶ್ಮೀರದಲ್ಲಿ ಗಲಭೆಕೋರರಿಗೆ ಹಣ ಹರಿದುಬರುವ ದಾರಿಗಳ ಮಾಹಿತಿ ನೀಡುತ್ತಿದ್ದ ಮಿರ್. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಪರವಾಗಿ ಗೂಢಾಚಾರಿಯಾಗಿ ಕೆಲಸ ಮಾಡಿದ ಆರೋಪ ಆತನ ಮೇಲೆ. ಭೂಗತವಾಗಿರುವ ಆತನಿಗಾಗಿ ರಾಷ್ಟ್ರೀಯ
ನವದೆಹಲಿ, ಜೂನ್ 9: ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿದಾರನಾಗಿದ್ದುಕೊಂಡು ಒಳಗೊಳಗೇ ಪಾಕಿಸ್ತಾನದ ಗೂಢಾಚಾರಿಯಾಗಿಯೂ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬನ ಬೇಟೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ ಐಎ) ಸಜ್ಜಾಗಿದೆ.
ಆತನ ಹೆಸರು ನಾಸಿರ್ ಶಫಿ ಮಿರ್. ಈತ ಕೆಲ ವರ್ಷಗಳ ಹಿಂದೆ ಕೊಲ್ಲಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದು ಆನಂತರ, ಕಾಶ್ಮೀರಕ್ಕೆ ಬಂದು ನೆಲೆಸಿದ್ದ. ಅಲ್ಲಿ ಕಾಶ್ಮೀರಿ ನೆಲಹಾಸು ಹಾಗೂ ಕಂಬಳಿಗಳನ್ನು ಮಾರುವ ಪುಟ್ಟದೊಂದು ಅಂಗಡಿ ಆರಂಭಿಸಿದ್ದ.
ಅದರ ಜತೆಯಲ್ಲೇ ಕಾಶ್ಮೀರದಲ್ಲಿ ಗಲಭೆಕೋರರಿಗೆ ಪಾಕಿಸ್ತಾನದಿಂದ ಬರುತ್ತಿದ್ದ ಹಣದ ದಾರಿಗಳ ಬಗ್ಗೆ ಕಾಶ್ಮೀರದಲ್ಲಿರುವ ಸೈನಿಕರಿಗೆ ಹಾಗೂ ಭಾರತೀಯ ಗುಪ್ತಚರ ಇಲಾಖೆಗಳಿಗೆ (RAW, IB) ಮಾಹಿತಿ ಕೊಡಲಾರಂಭಿಸಿದ.
ಈತನ ಹಲವಾರು ಮಾಹಿತಿಗಳು ಭಾರತೀಯ ಸೇನೆಗೆ ಹಾಗೂ ಇತರ ತನಿಖಾಧಿಕಾಧಿಕಾರಿಗಳಿಗೆ ಉಪಯೋಗವಾಗುತ್ತಿದ್ದವು. ಆದ ಕಾರಣ ಈತನನ್ನು RAW (ರಾ) ಹಾಗೂ ಐಬಿ ಬಲವಾಗಿ ನಂಬಿದವು. ಈತನನ್ನು ತಮ್ಮ ಮಾಹಿತಿದಾರನನ್ನಾಗಿಸಿದವು.
ಆನಂತರ ಈತ ಯಾವ ಮಟ್ಟಕ್ಕೆ ಬೆಳೆದನೆಂದರೆ, ಕಾಶ್ಮೀರದಲ್ಲಿ ಬೇರುಬಿಡುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಮುಖಂಡರೊಡನೆ ನಂಟು ಬೆಳೆಸಿಕೊಂಡ. ಅದನ್ನು ಬಳಸಿಕೊಂಡು 2000ನೇ ಇಸವಿಯಲ್ಲಿ ಅಂದಿನ ಗೃಹ ಇಲಾಖೆಯ ಕಾರ್ಯದರ್ಶಿ ಕಮಲ್ ಪಾಂಡೆಯವರೊಂದಿಗೆ ಉಗ್ರ ಮುಖಂಡರನ್ನು ಸಂಧಾನಕ್ಕೆ ಏರ್ಪಾಟು ಮಾಡಿದ್ದ. ಆದರೆ, ಆ ಸಂಧಾನ ಮಾತುಕತೆ ವಿಫಲವಾಯಿತು.
ಅದಾದ ಮೇಲೂ ಆತ ಮುಂದಿನ ಎರಡು ವರ್ಷಗಳ ಕಾಲ ಭಾರತಕ್ಕೆ ಮಾಹಿತಿಗಳನ್ನು ಪೂರೈಸುತ್ತಲೇ ಇದ್ದ. 2016ರ ಅದೊಂದು ದಿನ ದೆಹಲಿಯಲ್ಲಿ 55 ಲಕ್ಷ ರು. ಹಣ ಹಾಗೂ ಕೆಲವಾರು ಸ್ಫೋಟಕಗಳೊಂದಿಗೆ ಆತ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದ.
ಆತನ ಬಂಧನವಾಗಿ, ಆನಂತರ ಆತನ ತಾಯಿಗೆ ಹುಷಾರಿಲ್ಲವೆಂದು ಜಾಮೀನು ಪಡೆದ. ಆದರೆ, ಅಲ್ಲಿಂದ ಆತ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಮಾಹಿತಿ ಕಲೆಹಾಕಿರುವ ಗುಪ್ತಚರ ಇಲಾಖೆಯು, ಆತನು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದು ಆತ ಪಾಕಿಸ್ತಾನದ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಂಡಂತೆ, ಇಲ್ಲಿನ ಮಾಹಿತಿಗಳನ್ನೂ ಆತ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದ್ದ ಎಂಬ ಮಾಹಿತಿಯನ್ನು ಹೊರಗೆಡವಿದೆ. ಹಾಗಾಗಿ, ಆತನನ್ನು ಶತಾಯಗತಾಯ ಬಂಧಿಸಲೇಬೆೇಕೆಂಬ ನಿರ್ಧಾರಕ್ಕೆ ಬರಲಾಗಿದ್ದು, ಆತನಿಗಾಗಿ ಶೋದ ಕಾರ್ಯ ಆರಂಭವಾಗಿದೆ.