ಜೈಪುರದಲ್ಲಿ ಕಾರ್ನಿ ಸೇನೆ ಪರ ಕ್ರಿಕೆಟರ್ ಜಡೇಜ ಪತ್ನಿ ಪ್ರಚಾರ
ಜೈಪುರ, ಅಕ್ಟೋಬರ್ 26 : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಜಾತಿ, ಧರ್ಮ, ಮತ, ಪಂಥಗಳ ಜತೆ ಗುರುತಿಸಿಕೊಂಡ ಸಂಘಟನೆಗಳು ಕಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸ್ಟಾರ್ ಪ್ರಚಾರಕರನ್ನು ಕರೆ ತಂದು ಮತ ಸೆಳೆಯಲು ಯತ್ನಿಸುತ್ತಿವೆ. ಈ ಪೈಕಿ ಕಾರ್ನಿ ಸೇನೆ ಮುಂಚೂಣಿಯಲ್ಲಿದೆ.
ಕ್ರಿಕೆಟರ್ ರವೀಂದ್ರ ಜಡೇಜ ಅವರ ಪತ್ನಿಯನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿರುವ ಕಾರ್ನಿ ಸೇನಾ ಬೃಹತ್ ಸಮಾವೇಶವನ್ನು ಅಕ್ಟೋಬರ್ 27ರಂದು ಹಮ್ಮಿಕೊಂಡಿದೆ. ಕಾರ್ನಿ ಸೇನಾದ ಗುಜರಾತಿನ ಮಹಿಳಾ ಘಟಕದ ಮುಖ್ಯಸ್ಥೆಯಾಗಿರುವ ರವಿಬಾ ಜಡೇಜ ಅವರು ಸಮಾವೇಶದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಮಲಿಕ್ ಮೊಹಮ್ಮದ್ ಜಯಾಸಿ ರಚಿಸಿದ, ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರವನ್ನು ವಿರೋಧಿಸಿ ಭಾರಿ ಸಂಚಲನ ಮೂಡಿಸಿದ್ದ ಕಾರ್ನಿ ಸೇನಾ ಮತ್ತೆ ಸುದ್ದಿಯಲ್ಲಿದೆ. ನವೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ ಚುನಾವಣೆಯಲ್ಲಿ ಕಾರ್ನಿ ಸೇನಾ ಭಾರಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಮಾಜಿ ಮುಖ್ಯಮಂತ್ರಿ, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರ ಸ್ಮರಣೆಯಲ್ಲಿ ಈ ಸಮಾವೇಶ ಹಮ್ಮಿಕೊಂಡಿರುವುದಾಗಿ ಕಾರ್ನಿ ಸೇನಾ ಹೇಳಿದೆ.