In pics : ರಾಷ್ಟ್ರಪತಿಯಿಂದ ಬುಧವಾರ 'ಪದ್ಮ' ಪ್ರಶಸ್ತಿ ಪ್ರದಾನ
ನವದೆಹಲಿ, ಏ. 8 : ಕನ್ನಡ ನಾಡಿನ ಹೆಮ್ಮೆಯ ವಿಜ್ಞಾನಿ ಮಾಲೂರು ರಾಮಸ್ವಾಮಿ ಶ್ರೀನಿವಾಸನ್, ಹಿಂದಿ ಚಿತ್ರರಂಗದ ಮೇರು ನಟ ಅಮಿತಾಭ್ ಬಚ್ಚನ್, ಖ್ಯಾತ ಗಣಿತ ತಜ್ಞ ಮಂಜುಲ್ ಭಾರ್ಗವ ಸೇರಿದಂತೆ 50ಕ್ಕೂ ಹೆಚ್ಚು ಸಾಧಕರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಲೆ, ಸಮಾಜ ಸೇವೆ, ರಾಜಕೀಯ, ವಿಜ್ಞಾನ, ಇಂಜಿನಿಯರಿಂಗ್, ಉದ್ಯಮ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿದ ಮಹನೀಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುವ ಪರಿಪಾಠವನ್ನು ಭಾರತ ಸರಕಾರ ಪಾಲಿಸಿಕೊಂಡು ಬರುತ್ತಿದೆ. [ವೀರೇಂದ್ರ ಹೆಗ್ಗಡೆಗೆ ಪದ್ಮ ವಿಭೂಷಣ]
ಅನಾರೋಗ್ಯದ ಕಾರಣದಿಂದಾಗಿ ತುಮಕೂರು ಸಿದ್ದಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ, ಹಿಂದಿ ಚಿತ್ರನಟ ದಿಲೀಪ್ ಕುಮಾರ್ ಮುಂತಾದವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಈ ಬಾರಿ 9 ಪದ್ಮ ಭೂಷಣ, 20 ಪದ್ಮ ವಿಭೂಷಣ ಮತ್ತು 75 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಒಟ್ಟು 104 ಗಣ್ಯರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. [ರವಿಶಂಕರ ಗುರೂಜಿ ಪದ್ಮ ಪ್ರಶಸ್ತಿ ನಿರಾಕರಿಸಿದ್ದೇಕೆ?]
ಯಾರ್ಯಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಈ ಚಿತ್ರಗಳಲ್ಲಿ ನೋಡಿರಿ. ಮೊದಲ ಕಂತಿನ ಪ್ರಶಸ್ತಿಯನ್ನು ಮಾರ್ಚ್ 30ರಂದು ನೀಡಲಾಗಿತ್ತು.
ಪದ್ಮ ವಿಭೂಷಣ ಅಮಿತಾಭ್ ಹರಿವಂಶ್ ಬಚ್ಚನ್
ಹಿಂದಿ ಚಿತ್ರರಂಗದ ಶೆಹೆನ್ಷಾ ಅಮಿತಾಬ್ ಬಚ್ಚನ್ ಅವರಿಗೆ ಪ್ರಣಬ್ ಮುಖರ್ಜಿ ಅವರು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು. ಅಮಿತಾಭ್ ಅವರಿಗೆ 1984ರಲ್ಲಿ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮ ಭೂಷಣ ಪ್ರಶಸ್ತಿ ದೊರೆತಿತ್ತು.
ಬಚ್ಚನ್ ಇಡೀ ಕುಟುಂಬ ಸಮಾರಂಭಕ್ಕೆ ಹಾಜರ್
ಅಮಿತಾಭ್ ಪತ್ನಿ ಜಯಾ, ಮಗ ಅಭಿಷೇಕ್, ಸೊಸೆ ಐಶ್ವರ್ಯ ರೈ, ಮಗಳು ಶ್ವೇತಾ ಸೇರಿದಂತೆ ಮೊಮ್ಮಕ್ಕಳು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಪದ್ಮ ವಿಭೂಷಣ ಮಾಲೂರು ರಾಮಸ್ವಾಮಿ ಶ್ರೀನಿವಾಸನ್
ಕನ್ನಡಿಗ, ಖ್ಯಾತ ನ್ಯೂಕ್ಲಿಯರ್ ವಿಜ್ಞಾನಿ ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರಿಗೆ ಮುಖರ್ಜಿ ಅವರು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.
ರಾಜವಂಶಸ್ಥ ಪ್ರಿನ್ಸ್ ಕರೀಂ ಆಗಾ ಖಾನ್
ರಾಜವಂಶಸ್ಥರಲ್ಲಿ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ಪ್ರಿನ್ಸ್ ಕರೀಂ ಆಗಾ ಖಾನ್. ಕರೀಂ ಆಗಾ ಖಾನ್ ಅವರು ಪ್ರಾಫೆಟ್ ಮೊಹಮ್ಮದನ ವಂಶಸ್ಥನೆಂದು ಹೇಳಲಾಗುತ್ತದೆ.
ಪದ್ಮ ಭೂಷಣ ಮಂಜುಲ್ ಭಾರ್ಗವ
ಕೆನಡಾದಲ್ಲಿ ಜನಿಸಿದ, ಇಂಡಿಯನ್-ಅಮೆರಿಕನ್ ಗಣಿತಜ್ಞರಾಗಿರುವ ಮಂಜುಲ್ ಭಾರ್ಗವ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ. ಮಂಜುಲ್ ಭಾರ್ಗವ ಅವರು ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರೊಫೆಸರಾಗಿದ್ದಾರೆ.
ಕ್ರಿಕೆಟ್ ಪಟು ಮಿಥಾಲಿ ರಾಜ್ಗೆ ಪದ್ಮಶ್ರೀ
ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ಮಿಥಾಲಿ ರಾಜ್ ಅವರಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನ. 2003ರಲ್ಲಿ ಅವರು ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.
ಸಂಗೀತ ನಿರ್ದೇಶಕ ರವೀಂದ್ರ ಜೈನ್ಗೆ ಪದ್ಮಶ್ರೀ
ರಮಾನಂದ ಸಾಗರ ಅವರ ರಾಮಾಯಣ ಹಿಂದಿ ಮೆಗಾ ಧಾರಾವಾಹಿ ನೋಡಿದವರು ವಿಶಿಷ್ಟವಾಗಿ ಕೇಳಿಬರುತ್ತಿದ್ದ ಹಾಡುಗಳನ್ನು ಮರೆತಿರಲು ಸಾಧ್ಯವಿಲ್ಲ. ಕಣ್ಣುಗಳಿಲ್ಲದಿದ್ದರೂ ಆತ್ಮದಿಂದ ಸಂಗೀತ ನೀಡುವ ರವೀಂದ್ರ ಜೈನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ. ಇದು ಪದ್ಮಶ್ರೀ ಪ್ರಶಸ್ತಿಗೆ ಸಂದ ಗೌರವ.
ಯುವ ಹಾಕಿ ಆಟಗಾರ್ತಿ ಸಾಬಾ ಅಂಜುಮ್ ಕರೀಂ
29 ವರ್ಷದ ಯುವ ಹಾಕಿ ಆಟಗಾರ್ತಿ ಸಾಬಾ ಅಂಜುಮ್ ಕರೀಂ ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸಂದಾಯ.
ಸಂವಿಧಾನ ತಜ್ಞ ಸುಭಾಶ್ ಸಿ ಕಶ್ಯಪ್
ಸಂವಿಧಾನ ತಜ್ಞ, ರಾಜಕೀಯ ವಿಜ್ಞಾನಿ, ಕಾನೂನು ಪಂಡಿತ 85 ವರ್ಷದ ಸುಭಾಶ್ ಸಿ ಕಶ್ಯಪ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ. ಸುಭಾಶ್ ಅವರು ಪತ್ರಕರ್ತರಾಗಿ, ಶಿಕ್ಷಣತಜ್ಞರಾಗಿಯೂ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಪದ್ಮ ಭೂಷಣ ಸ್ವಾಮಿ ಸತ್ಯಮಿತ್ರಾನಂದ
ಶಂಕರ ಪೀಠದ ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ಸತ್ಯಮಿತ್ರಾನಂದ (82) ಅವರಿಗೆ ರಾಷ್ಟ್ರಪತಿಗಳಿಂದ ಪದ್ಮ ಭೂಷಣ ಪ್ರಶಸ್ತಿ ಗೌರವ.
ಸ್ವಾಮಿ ಅಮೃತ್ ಸೂರ್ಯಾನಂದ
ಪೋರ್ಚುಗಲ್ ನಲ್ಲಿ ಯೋಗ ಸಂಖ್ಯಾ ಇನ್ಸ್ಟಿಟ್ಯೂಟ್ ಸ್ಥಾಪಿಸಿರುವ ಭಾರತೀಯ ಯೋಗ ಗುರು ಸ್ವಾಮಿ ಅಮೃತ್ ಸೂರ್ಯಾನಂದ ಅವರಿಗೆ ಪ್ರಣಬ್ ಅವರಿಂದ ಪದ್ಮಶ್ರೀ ಗೌರವ.
ಪದ್ಮಶ್ರೀ ಕೋಟ ಶ್ರೀನಿವಾಸ ರಾವ್
ತೆಲುಗು ಚಿತ್ರರಂಗ ನಟ, ನಿರ್ಮಾಪಕ ಕೋಟ ಶ್ರೀನಿವಾಸ್ ರಾವ್ ಅವರಿಗೆ ಪದ್ಮಶ್ರೀ ಪ್ರಶಸ್ತಿ.
ರಾಷ್ಟ್ರಪತಿಗಳಿಂದ ಕೇಜ್ರಿವಾಲ್ ಉಭಯ ಕುಶಲೋಪರಿ
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಉಭಯ ಕುಶಲೋಪರಿ ವಿಚಾರಿಸಿಕೊಳ್ಳುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.
ಕೇಜ್ರಿವಾಲ್ ಅವರೇ ಆರೋಗ್ಯ ಹೇಗಿದೆ?
ಕೇಜ್ರಿವಾಲ್ ಅವರೇ ಆರೋಗ್ಯ ಹೇಗಿದೆ? ಬೆಂಗಳೂರಿನ ಜಿಂದಾಲ್ ಪಡೆದ ಚಿಕಿತ್ಸೆ ಪರಿಣಾಮಕಾರಿಯಾಗಿತ್ತಾ ಅಂತ ವಿಚಾರಿಸಿಕೊಳ್ಳುತ್ತಿರುವ ಬಿಜೆಪಿ ನಾಯಕ ಡಾ. ಹರ್ಷ ವರ್ಧನ.
ಅದೇನು ಜೋಕ್ ನಮಗೂ ಹೇಳಿರಲ್ಲ!
ದೇಶ ಮುನ್ನಡೆಸುವ ಜಂಜಡಗಳನ್ನು ಮರೆತು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರೊಂದಿಗೆ ಹಸನ್ಮುಖರಾಗಿರುವುದು.