ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ: ಎಲ್ಲಿಗೆ ಯಾರು?
ನವದೆಹಲಿ, ಜುಲೈ 20: ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಲಾಗಿದೆ.
ಈ ಮೊದಲು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಉತ್ತರ ಪ್ರದೇಶದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇದುವರೆಗೂ ರಾಮ್ ನಾಯ್ಕ್ ಅವರು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದರು.
ಆಂಧ್ರದ ರಾಜ್ಯಪಾಲೆಯಾಗಿ ನೇಮಕ? ಸುಷ್ಮಾ ಸ್ವರಾಜ್ ನೀಡಿದರು ಸ್ಪಷ್ಟನೆ
ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಜಗದೀಪ್ ಧನಕರ್ ಅವರನ್ನು ನೇಮಿಸಲಾಗಿದೆ. ರಮೇಶ್ ಬಯಾಸ್ ಅವರು ತ್ರಿಪುರಾದ ಹೊಸ ರಾಜ್ಯಪಾಲರಾಗಲಿದ್ದಾರೆ. ಬಿಹಾರದ ಹಾಲಿ ರಾಜ್ಯಪಾಲರಾಗಿರುವ ಲಾಲ್ಜಿ ಟಂಡನ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಅವರು ಆನಂದಿಬೆನ್ ಪಟೇಲ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ಬಿಹಾರದ ನೂತನ ರಾಜ್ಯಪಾಲರಾಗಿ ಫಗು ಚೌಹಾಣ್ ಅವರನ್ನು ನೇಮಿಸಲಾಗಿದೆ. ಆರ್ ಎನ್ ರವಿ ಅವರು ನಾಗಾಲ್ಯಾಂಡ್ನ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಇದುವರೆಗೂ ಪದ್ಮನಾಭ ಆಚಾರ್ಯ ಅವರು ಅಲ್ಲಿನ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನೇಮಕಗಳು ರಾಜ್ಯಪಾಲರು ತಮ್ಮ ತಮ್ಮ ಕಚೇರಿಗಳಲ್ಲಿ ಅಧಿಕಾರ ಸ್ವೀಕಾರ ಮಾಡಿಕೊಂಡ ದಿನದಿಂದ ಅನ್ವಯವಾಗಲಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
2 ತಿಂಗಳಲ್ಲಿ ವಜುಭಾಯ್ ನಿವೃತ್ತಿ, ಕರ್ನಾಟಕದ ಮುಂದಿನ ರಾಜ್ಯಪಾಲರು ಯಾರು?
ಕೇಂದ್ರದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಉತ್ತರ ಪ್ರದೇಶದ ರಾಜ್ಯಪಾಲರ ಹುದ್ದೆಗೆ ಅವರನ್ನು ನೇಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಅದನ್ನು ಸುಷ್ಮಾ ತಳ್ಳಿಹಾಕಿದ್ದರು.
ಆನಂದಿಬೆನ್ಗೆ ವರ್ಗಾವಣೆ!
2018ರ ಜನವರಿಯಲ್ಲಿಯಷ್ಟೇ ಆನಂದಿಬೆನ್ ಪಟೇಲ್ ಅವರು ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದರು. ಗುಜರಾತ್ ರಾಜ್ಯಪಾಲರ ಕಚೇರಿ ಜತೆ ಮಧ್ಯಪ್ರದೇಶದ ಹೆಚ್ಚುವರಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ ಓಂ ಪ್ರಕಾಶ್ ಕೊಹ್ಲಿ ಅವರ ಹೊಣೆ ತಗ್ಗಿಸಲಾಗಿತ್ತು. ಛತ್ತೀಸಗಡದ ರಾಜ್ಯಪಾಲ ಬಲರಾಮ್ಜಿ ದಾಸ್ ಟಂಡನ್ ಅವರ ನಿಧನದ ಬಳಿಕ ಆನಂದಿಬೆನ್ ಅವರಿಗೆ ಆ ರಾಜ್ಯದ ಹೆಚ್ಚುವರಿ ಹೊಣೆಗಾರಿಕೆಯನ್ನು ಸಹ ನೀಡಲಾಗಿತ್ತು. 2014ರ ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಗುಜರಾತ್ ಮುಖ್ಯಮಂತ್ರಿಯ ಸ್ಥಾನಕ್ಕೆ ಆನಂದಿಬೆನ್ ಅವರನ್ನು ನೇಮಿಸಲಾಗಿತ್ತು. 2016ರಲ್ಲಿ ಅವರು ಪಕ್ಷದ ನಿಯಮಾವಳಿಯಂತೆ ಅಧಿಕಾರದಿಂದ ಕೆಳಕ್ಕಿಳಿದಿದ್ದರು.
ಐಪಿಎಸ್ನಿಂದ ರಾಜ್ಯಪಾಲರ ಹುದ್ದೆಗೆ ರವಿ
ನಾಗಾಲ್ಯಾಂಡ್ನ ರಾಜ್ಯಪಾಲರಾಗಿ ನೇಮಕವಾಗಿರುವ ಆರ್ ಎನ್ ರವಿ ಅವರು 1976ರ ಕೇರಳ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ನಾಗಾಲ್ಯಾಂಡ್ನಲ್ಲಿ ನಾಗಾ ಬಂಡುಕೋರರ ಹಿಂಸಾಚಾರವನ್ನು ತಡೆದು ಶಾಂತಿ ಮೂಡಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. 2012ರಲ್ಲಿ ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರಾಗಿ ಅವರು ನಿವೃತ್ತರಾಗಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಗುಪ್ತಚರ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ್ದರು. ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು.
ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು
ಆರು ಬಾರಿ ಶಾಸಕ ಫಗು ಚೌಹಾಣ್
ಬಿಹಾರದ ರಾಜ್ಯಪಾಲರಾಗಿ ನೇಮಕವಾಗಿರುವ ಫಗು ಚೌಹಾಣ್ ಅವರು ಉತ್ತರ ಪ್ರದೇಶದ ಬಿಜೆಪಿ ಶಾಸಕರಾಗಿದ್ದಾರೆ. ಘೋಸಿ ಕ್ಷೇತ್ರದಲ್ಲಿ ಆರು ಬಾರಿ ಜಯಗಳಿಸಿರುವ ಅವರು, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಲ ಗೆದ್ದಿರುವ ಶಾಸಕ ಎನಿಸಿಕೊಂಡಿದ್ದಾರೆ. 1985ರಲ್ಲಿ ದಲಿತ್ ಮಜ್ದೂರ್ ಕಿಶಾನ್ ಪಾರ್ಟಿಯಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಅವರು, ಬಳಿಕ ಜಯಪ್ರಕಾಶ್ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದರು. ನಂತರ 1996 ಮತ್ತು 2002ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 20೦7ರಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಚೌಹಾಣ್, 2017ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
ಸುಪ್ರೀಂಕೋರ್ಟ್ ವಕೀಲ ಜಗದೀಪ್ ಧನಕರ್
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕವಾಗಿರುವ ಜಗದೀಪ್ ಧನಕರ್ ಅವರು 1951ರಲ್ಲಿ ರಾಜಸ್ಥಾನದ ಜುಂಝುನು ಜಿಲ್ಲೆಯ ಕಿತನಾ ಎಂಬ ಗ್ರಾಮದಲ್ಲಿ ಜನಿಸಿದ್ದರು. ಅವರು ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಜೈಪುರದಲ್ಲಿ ಎಲ್ಎಲ್ಬಿ ಪದವಿ ಪಡೆದ ಅವರು, ರಾಜಸ್ಥಾನ್ ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷರಾಗಿ, ರಾಜಸ್ಥಾನ ಬಾರ್ ಕೌನ್ಸಿಲ್ ಸದಸ್ಯರಾಗಿ ಮತ್ತು ಐಸಿಸಿ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್ನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 1989-91ರ ಅವಧಿಯಲ್ಲಿ ಅವರು ಜುಂಝುನು ಲೋಕಸಭೆ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿದ್ದರು. ಅಲ್ಲದೆ, ಶಾಸಕರಾಗಿಯೂ ಚುನಾಯಿತರಾಗಿದ್ದರು.
ವಾಜಪೇಯಿ ಆಪ್ತರಾಗಿದ್ದ ಲಾಲ್ಜಿ
ಲಾಲ್ಜಿ ಟಂಡನ್ ಅವರು (ಜನನ: ಏಪ್ರಿಲ್ 12, 1935) ಬಿಜೆಪಿಯ ಸದಸ್ಯರಾಗಿದ್ದು, ಮಧ್ಯಪ್ರದೇಶದ 22ನೇ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಲಾಲ್ಜಿ, ಎರಡು ಬಾರಿ ಅಲ್ಲಿನ ವಿಧಾನಪರಿಷತ್ ಸದಸ್ಯರಾಗಿದ್ದರು. ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. ಬಿಎಸ್ಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಯಾವತಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರಲ್ಲಿ ಒಬ್ಬರಾದ ಅವರು, ವಾಜಪೇಯಿ ಅವರು ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ಬಳಿಕ ಅವರು ಪ್ರತಿನಿಧಿಸುತ್ತಿದ್ದ ಲಕ್ನೋ ಲೋಕಸಭೆ ಕ್ಷೇತ್ರದಿಂದ 2009ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಏಳು ಬಾರಿ ಸಂಸದ ರಮೇಶ್ ಬಯಾಸ್
ತ್ರಿಪುರಾದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ರಮೇಶ್ ಬಯಾಸ್ ಅವರು ಈಗಿನ ಛತ್ತೀಸಗಡದ (ಆಗಿನ ಮಧ್ಯಪ್ರದೇಶ) ರಾಯ್ಪುರದಲ್ಲಿ 1947ರ ಆಗಸ್ಟ್ 2ರಂದು ಜನಿಸಿದರು. ರಾಯ್ಪುರ ಪಾಲಿಕೆಗೆ ಆಯ್ಕೆಯಾಗುವ ಮೂಲಕ 1978ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, 1980ರಲ್ಲಿ ಮಧ್ಯಪ್ರದೇಶದ ಶಾಸಕರಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ರಾಯ್ಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಅಲ್ಲಿಂದ ಸತತವಾಗಿ ಏಳು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.