ಅತ್ಯಾಚಾರಿಗಳ ಗಾಯಕ್ಕೆ ಖಾರ ಹಾಕಿ ಉಜ್ಜಬೇಕು : ಉಮಾ
ಆಗ್ರಾ, ಫೆಬ್ರವರಿ 10 : "ಅತ್ಯಾಚಾರಿಗಳು ತಪ್ಪಾಯಿತೆಂದು ಭಿಕ್ಷೆ ಬೇಡುವವರೆಗೆ ಅವರಿಗೆ ಚಿತ್ರಹಿಂಸೆ ನೀಡಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಗೆಯೇ ಮಾಡುತ್ತಿದ್ದೆ" ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶದ ಆಗ್ರಾದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ದಶಕದ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಅಂದುಕೊಂಡಿದ್ದನ್ನು ಹೇಗೆ ಸಾಧಿಸಿ ತೋರಿಸುತ್ತಿದ್ದೆ ಎಂದು 'ಫೈರ್ ಬ್ರಾಂಡ್' ರಾಜಕಾರಣಿ ಮಾತಿನ ಗುಂಡುಗಳನ್ನು ಸಿಡಿಸಿದರು.
ಅತ್ಯಾಚಾರಿಗಳನ್ನು ಹೇಗೆ ಹಿಂಸಿಸಬೇಕು ಎಂಬ ಇನ್ಫೋಗ್ರಾಫಿಕ್ ಗಳನ್ನೂ ಅವರು ತೋರಿಸಿದರು. ಅತ್ಯಾಚಾರಿಗಳನ್ನು ತಲೆಕೆಳಗಾಗಿ ತೂಗುಹಾಕಿ, ಅವರ ಗಾಯಗಳ ಮೇಲೆ ಉಪ್ಪು ಮತ್ತು ಖಾರವನ್ನು ಹಾಕಿ ಅಯ್ಯೋ ಅಮ್ಮ ಅನ್ನುವಂತೆ ಉಜ್ಜಬೇಕು. ಇದನ್ನು ಮಹಿಳೆಯರು ನೋಡಬೇಕು ಎಂದು ಅವರು ಹೇಳಿದರು.
ದೆಹಲಿಯ ಬುಲಂದರ್ ಶಹರ್ ಬಳಿ ಕುಟುಂಬದೊಡನೆ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ತಾಯಿ ಮತ್ತು ಮಗಳ ಮೇಲೆ ಕಳೆದ ವರ್ಷ ಆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇಂಥ ಹೀನಾಯ ಘಟನೆಯಲ್ಲಿ ಭಾಗಿಯಾದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಾಗ ಸಮಾಜವಾದಿ ಪಕ್ಷ ಯಾವುದೇ ಪ್ರತಿರೋಧವನ್ನು ಒಡ್ಡಲಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಃಶ್ಚೇತನ ಖಾತೆಯ ಸಚಿವೆ ಕಿಡಿ ಕಾರಿದರು.
ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಉಮಾ ಅವರು, ಕೇಂದ್ರ ಸರಕಾರ ಇತ್ತೀಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಅನುಮಾನಿಸುವವರು ಪಾಕಿಸ್ತಾನಕ್ಕೆ ತೆರಳಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು.