ಇಂದು ಬಹುಕೋಟಿ ಮೇವು ಹಗರಣದ ತೀರ್ಪು: ಲಾಲೂ ಭವಿಷ್ಯ ನಿರ್ಧಾರ?
ರಾಂಚಿ, ಡಿಸೆಂಬರ್ 23: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಮುಖ್ಯ ಆರೋಪಿಯಾಗಿರುವ 900 ಕೋಟಿ ರೂ.ಗಳ ಮೇವು ಹಗರಣದ ತೀರ್ಪನ್ನು ರಾಂಚಿಯ ವಿಶೇಷ ನ್ಯಾಯಾಲಯವೊಂದು ಇಂದು(ಡಿ.23) ಹೊರಹಾಕಲಿದೆ.
ಮೇವು ಹಗರಣ: ಲಾಲೂ ಪ್ರಸಾದ್ ವಿರುದ್ಧ ಮತ್ತೆ ತನಿಖೆಗೆ ಆದೇಶ
ಮೊನ್ನೆ ತಾನೇ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆರೋಪಿಗಳನ್ನೆಲ್ಲ ಖುಲಾಸೆಗೊಳಿಸಿದಂತೆ ಈ ಪ್ರಕರಣದಲ್ಲೂ ಲಾಲೂ ಯಾದವ್ ಖುಲಾಸೆಗೊಳ್ಳುತ್ತಾರಾ ಅಥವಾ, ತಪ್ಪಿತಸ್ಥರಾಗುತ್ತಾರಾ ಎಂಬುದನ್ನು ಕೋರ್ಟು ನಿರ್ಧರಿಸಲಿದೆ.
1994-1996 ರಲ್ಲಿ ಬಿಹಾರದಲ್ಲಿ ನಡೆದ ಈ ಹಗರಣದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವ ಉದ್ದೇಶದಿಂದ ಡಿಯೋದರ್(ಈಗ ಜಾರ್ಖಾಂಡ್ ರಾಜ್ಯದಲ್ಲಿದೆ) ಎಂಬ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಹಣವನ್ನು ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳದೆ ಬಿಹಾರದ ಆಗಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಯಾದವ್ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.
1996 ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ವಿಚಾರಣೆ ಡಿ.13, 2017 ಕ್ಕೆ ಅಂತ್ಯವಾಗಿದ್ದು, ಇಂದು ತೀರ್ಪು ಹೊರಬೀಳಲಿದೆ.