ರವಿಶಂಕರ್ 'ರಾಮ ಮಂದಿರ ಸಂಧಾನ'ಕ್ಕೆ ಬಿಜೆಪಿ ನಾಯಕರಿಂದಲೇ ವಿರೋಧ
ನವದೆಹಲಿ, ಅಕ್ಟೋಬರ್ 30: ಅಯೋಧ್ಯೆ ಗೊಂದಲ ಬಗೆಹರಿಸಲು ಮಧ್ಯವರ್ತಿಯಾಗಲು ಸಿದ್ಧ ಎಂದಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಪ್ರಸ್ತಾಪವನ್ನು ಬಿಜೆಪಿ ನಾಯಕರೇ ತಳ್ಳಿ ಹಾಕಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ
ರಾಮ ಮಂದಿರ ಆಂದೋಲನದಲ್ಲಿ ಭಾಗವಹಿಸಿದ್ದ ಬಿಜೆಪಿ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ರವಿಶಂಕರ್ ಪ್ರಸ್ತಾಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಶ್ರೀ ಶ್ರೀ ಆಂದೋಲನದ ಭಾಗವೇ ಆಗಿರಲಿಲ್ಲ. ಹೀಗಾಗ ಅವರು ಮಧ್ಯವರ್ತಿಯಾಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ," ಎಂದಿದ್ದಾರೆ.
"ನಾವು ಈ ವಿಚಾರದಲ್ಲಿ ಜೈಲಿಗೆ ಹೋಗಿದ್ದೇವೆ. ಗೃಹ ಬಂಧನಕ್ಕೆ ಒಳಪಟ್ಟಿದ್ದೇವೆ. ಇದಕ್ಕಾಗಿ ಕೋರ್ಟ್ ನ ಪ್ರಕರಣಗಳನ್ನು ಎದುರಿಸಿದ್ದೇವೆ. ಈ ಪ್ರಕರಣದಲ್ಲಿ ಮಧ್ಯವರ್ತಿಯಾಗುವ ಅರ್ಹತೆ ಶ್ರೀ ಶ್ರೀಗಿಲ್ಲ," ಎಂದು ವೇದಾಂತಿ ಹೇಳಿದ್ದಾರೆ.
"ನಾವು ಮುಸ್ಲಿಂ ನಾಯಕರು ಮುಂದೆ ಬರಬೇಕು ಎಂದು ಬಯಸುತ್ತಿದೇವೆ. ನಾವು ಜತೆಗೆ ಕುಳಿತು ಈ ಬಗ್ಗೆ ಚರ್ಚೆ ನಡೆಸುತ್ತೇವೆ. ನಾವು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಈ ವಿವಾದಕ್ಕೆ ಪರಿಹಾರ ಕಂಡು ಹುಡುಕಲು ಬಯುಸುತ್ತೇವೆ. ಎರಡೂ ಧರ್ಮಗಳ ನಡುವೆ ಒಮ್ಮತದಲ್ಲೇ ದೇವಸ್ಥಾನ ನಿರ್ಮಾಣವಾಗಬೇಕು," ಎಂದು ಅವರು ಹೇಳಿದರು.
ರಾಮ ಜನ್ಮಭೂಮಿ ಆಂದೋಲನವನ್ನು ಮುನ್ನಡೆಸಿದ ರಾಮ್ ಜನ್ಮಭೂಮಿ ನ್ಯಾಸ್ ಮತ್ತು ವಿಶ್ವ ಹಿಂದೂ ಪರಿಷತ್ ಈ ವಿಚಾರದಲ್ಲಿ ಮಧ್ಯ ನಿಂತು ಮಾತುಕತೆ ನಡೆಸುವ ಅವಕಾಶ ಪಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರವಷ್ಟೇ, "ಶ್ರೀ ಶ್ರೀ ರವಿಶಂಕರ್ ಹಲವು ಇಮಾಮ್ ಮತ್ತು ಸ್ವಾಮೀಜಿಗಳ ಜತೆ ಸಂಪರ್ಕದಲ್ಲಿದ್ದಾರೆ. ನಿರ್ಮೋಹಿ ಅಖರಾದ ಆಚಾರ್ಯ ರಾಮ್ ದಾಸ್ ಜತೆಗೂ ಅವರು ಸಂಪರ್ಕದಲ್ಲಿದ್ದು ಕೋರ್ಟ್ ಹೊರಗೆ ರಾಮ ಜನ್ಮಭೂಮಿ ವಿವಾದಕ್ಕೆ ಪರಹಾರ ಕಂಡು ಹುಡುಕಲು ಯತ್ನಿಸುತ್ತಿದ್ದಾರೆ," ಎಂದು ಆರ್ಟ್ ಆಫ್ ಲಿವಿಂಗ್ ಹೇಳಿತ್ತು.