ರಾಮಾಯಣ ಸರ್ಕೀಟ್ ಪ್ರವಾಸ ರೈಲು ಹಂಪಿಗೂ ಬರಲಿದೆ
ಬೆಂಗಳೂರು, ಜು.9: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಮಾಯಣ ಸರ್ಕೀಟ್ ಯೋಜನೆ ನವೆಂಬರ್ 14ರಿಂದ ಆರಂಭವಾಗಲಿದೆ. 16 ದಿನಗಳ ಪ್ರವಾಸವಾಗಿದ್ದು, ರಾಮಾಯಣ ಘಟನೆ ನಡೆದಿದೆ ಎಂದು ಗುರುತಿಸಲಾದ ಸ್ಥಳಗಳಲ್ಲಿ ಪ್ರವಾಸ ನಡೆಯಲಿದೆ.
ದೆಹಲಿಯಿಂದ ಹೊರಡುವ ರಾಮಾಯಣ ಸರ್ಕೀಟ್ ವಿಶೇಷ ರೈಲು 800 ಪ್ರಯಾಣಿಕರನ್ನು ಕೊಂಡೊಯ್ಯಲಿದೆ. ರಾಮಾಯಣ ಘಟನೆಗಳು ನಡೆದ ಸ್ಥಳಕ್ಕೆ ರಸ್ತೆ ಮೂಲಕ ಬಸ್ಸುಗಳಲ್ಲಿ ಯಾತ್ರಿಕರನ್ನು ಕರೆದೊಯ್ಯಲಾಗುತ್ತದೆ. ಶ್ರೀರಾಮ ಹುಟ್ಟಿದ ಅಯೋಧ್ಯೆಯಿಂದ ಆತ ಸೀತೆಯನ್ನು ಅರಸಿ ಹೋದ ಶ್ರೀಲಂಕಾದ ಕೊಲಂಬೋವರೆಗೂ ಪ್ರವಸ ನಡೆಯಲಿದೆ.
ರೈಲಿನಲ್ಲಿ ಸಮಸ್ಯೆ ಎದುರಾದರೆ ನೆರವಿಗೆ ಬರುತ್ತಾರೆ ಕ್ಯಾಪ್ಟನ್!
ಪ್ರತಿ ಪ್ರಯಾಣಿಕರಿಗೂ 15,120 ರೂ. ದರ ವಿಧಿಸಲಾಗುತ್ತದೆ. ರೈಲಿನಲ್ಲೇ ಊಟೋಪಚಾರ ಇರಲಿದೆ. ರಾತ್ರಿ ವೇಳೆ ರೈಲು ಸಂಚರಿಸುವುದಿಲ್ಲ. ಈ ವೇಳೆ ಯಾತ್ರಾ ಸ್ಥಳಗಳ ಧರ್ಮಶಾಲೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಿದ್ದಾರೆ. ದೆಹಲಿಯ ಸಫ್ದರ್ಜಂಗ್ನಿಂದ ರೈಲು ಹೊರಡಲಿದೆ.
ದೆಹಲಿ, ಅಯೋಧ್ಯೆ, ರಾಮಕೋಟ್, ಕನಕ ಭವನ ದೇವಾಲಯ, ಸೀತಾ ಮಢಿ, ಹಂಪಿ, ರಾಮೇಶ್ವರಂ, ರಂಬೋಡಾ, ನುವಾರಾ ಚಿಲಾವ್ ಚಲಿಸಲಿದೆ. ಹಂಪಿ ಹಾಗೂ ಅದರ ಸುತ್ತಲೂ ಇರುವ ಕಿಷ್ಕಿಂಧೇ, ಆನೆಗುಂಡಿ, ಅಂಜನಾದ್ರಿ ಬೆಟ್ಟ ಹಾಗೂ ಮೊದಲಾದ ಸ್ಥಳಗಳು ರಾಮಾಯಣದಲ್ಲಿ ಉಲ್ಲೇಖವಾಗಿದೆ ಹಾಗಾಗಿ ಹಂಪಿಗೂ ರೈಲು ಬರಲಿದೆ.