ಗುಹಾ ಬೀಫ್ ಟ್ವೀಟ್ ಡಿಲೀಟ್ ಮಾಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸ
ಬೆಂಗಳೂರು, ಡಿಸೆಂಬರ್ 10 : ತಾವು ಗೋವಾದಲ್ಲಿ ದನದ ಮಾಂಸ ತಿನ್ನುತ್ತಿದ್ದ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು ಮಾತ್ರವಲ್ಲ, ಅದನ್ನು ಖ್ಯಾತ ಸಾಹಿತಿ, ಇತಿಹಾಸಕಾರ ರಾಮಚಂದ್ರ ಗುಹಾ ಅವರು ಟ್ವಿಟ್ಟರ್ ನಿಂದ ತೆಗೆದ ಮೇಲೂ ಅಷ್ಟೇ ಪ್ರಮಾಣದ ಚರ್ಚೆಗೆ ಗ್ರಾಸವಾಗಿದೆ.
ಅಂದು ಮಾಡಿದ ಟ್ವೀಟ್ ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ ಎಂದು ರಾಮಚಂದ್ರ ಗುಹಾ ಅವರೇ ಬರೆದುಕೊಂಡು ಟ್ವೀಟನ್ನು ಡಿಲೀಟ್ ಮಾಡಿರುವುದಾಗಿ ಹೇಳಿದ್ದಾರೆ. ಆದರೂ, ಬೀಫ್ ವಿಷಯದಲ್ಲಿ ಬಿಜೆಪಿಯ ಆಷಾಢಭೂತಿತನವನ್ನು ಹೈಲೈಟ್ ಮಾಡಲು ಇಚ್ಛಿಸುತ್ತೇನೆ. ಭಾರತೀಯರಿಗೆ ತಮಗೆ ಇಷ್ಟವಾಗುವ ಆಹಾರ ಸೇವಿಸಲು, ಬಟ್ಟೆ ಧರಿಸಲು ಮತ್ತು ಪ್ರೀತಿಯಲ್ಲಿ ಬೀಳಲು ಹಕ್ಕಿರಬೇಕು ಎಂದು ಅವರು ಮತ್ತೆ ಪ್ರತಿಪಾದಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 'ಬೀಫ್' ತಿನ್ನೋದೇ ಒಂದು ಖುಷಿ, ಗುಹಾ
ಆದರೆ, ಈ ಟ್ವೀಟ್ ಕೂಡ ಸಾಕಷ್ಟು ಟೀಕೆಗೆ, ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅಂದು ಅವರು ಮಾಡಿದ್ದೇನೆಂದರೆ, ಹೋಟೆಲೊಂದರಲ್ಲಿ ದನದ ಮಾಂಸವನ್ನು ಸೇವಿಸುತ್ತಿದ್ದ ಅವರು, "ಹಳೆ ಗೋವಾದಲ್ಲಿ ಒಂದು ಸುಂದರ ಬೆಳಗಿನ ನಂತರ ಪಣಜಿಯಲ್ಲಿ ಊಟ ಮಾಡಿದೆ. ಇದು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯವಾದ್ದರಿಂದ ಸಂಭ್ರಮದಲ್ಲಿ ದನದ ಮಾಂಸ ಸೇವಿಸಬೇಕೆಂದು ನಿರ್ಧರಿಸಿದೆ" ಎಂದು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದರು.
ನಂತರ ಹಲವಾರು ಬೆದರಿಕೆ ಕರೆಗಳು, ಟ್ವಿಟ್ಟರ್ ನಲ್ಲಿ ಬೈಗುಳಗಳು ಬರಲು ಆರಂಭಿಸಿದ ನಂತರ ಆ ಟ್ವೀಟನ್ನು, 'ಗಾಂಧಿ : ದಿ ಈಯರ್ಸ್ ದಟ್ ಚೇಂಜ್ಡ್ ದಿ ವರ್ಲ್ಡ್' ಪುಸ್ತಕವನ್ನು 2018ರಲ್ಲಿ ಪ್ರಕಟಿಸಿರುವ ಖ್ಯಾತ ಲೇಖಕ, ತೆಗೆದುಹಾಕಿದ್ದಾರೆ. ಆ ಟ್ವೀಟನ್ನು ತೆಗೆದುಹಾಕಿರುವ ಬಗ್ಗೆ ನೀಡಿದ ಸ್ಪಷ್ಟನೆಗೂ ಭಾರೀ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಹರಿದುಬರುತ್ತಿವೆ.
ಗುಹಾ ಅವರಿಗೆ ಬೆದರಿಕೆ ಕರೆಗಳು
ಈ ಟ್ವೀಟ್ ಅವಾಂತರದ ನಂತರ ತಮಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿದ್ದು, ತಾವಿದನ್ನೆಲ್ಲ ಜತನದಿಂದ ಕಾಪಾಡಿಕೊಂಡಿದ್ದು, ಸೂಕ್ತ ಸಮಯದಲ್ಲಿ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ. ತಮಗೆ ಮಾತ್ರವಲ್ಲ ದೆಹಲಿಯ ವ್ಯಕ್ತಿಯೊಬ್ಬರಿಂದ ತಮ್ಮ ಹೆಂಡತಿಗೂ ಬೆದರಿಕೆ ಕರೆಗಳು ಬಂದಿವೆ ಎಂದು, ಬಂದ ಸಂಖ್ಯೆಯನ್ನು ಕೂಡ ಟ್ವಿಟ್ಟರ್ ನಲ್ಲಿ ನಮೂದಿಸಿದ್ದಾರೆ. ಅಲ್ಲದೆ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನ ಮಾಜಿ ಅಧಿಕಾರಿಯೊಬ್ಬರಿಂದಲೂ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಗುಹಾ ಬೆಂಬಲಕ್ಕೆ ನಿಂತ ಟ್ವಿಟ್ಟಿಗ
ಆ ಫೋಟೋ ಮತ್ತು ಬರೆದ ವಿವರಣೆ ನಿಜಕ್ಕೂ ಉತ್ತಮ ಅಭಿರುಚಿಯಿಂದ ಕೂಡಿರಲಿಲ್ಲ. ಆದರೆ, ಒತ್ತಡಕ್ಕೆ ಒಳಗಾಗಿ ನೀವು ಆ ಟ್ವೀಟನ್ನು ಡಿಲೀಟ್ ಮಾಡಬಾರದಿತ್ತು. ಹೀಗೆ ಮಾಡುತ್ತಿರುವುದರಿಂದಲೇ ವಾಕ್ ಸ್ವಾತಂತ್ರ್ಯ ಸಮಾಜದಲ್ಲಿ ನಿಧಾನವಾಗಿ ಸಾವನ್ನು ಕಾಣುತ್ತಿದೆ. ನಿಮ್ಮಂಥ ಪ್ರಸಿದ್ಧ ವ್ಯಕ್ತಿಗಳು ಕೂಡ ಜನರ ಒತ್ತಡಗಳಿಗೆ ಮಣಿದುಬಿಡುತ್ತಾರೆ ಎಂದು ಸದಾನಂದ್ ಧುಮೆ ಎಂಬುವವರು ಟ್ವೀಟ್ ಮಾಡಿ ರಾಮಚಂದ್ರ ಗುಹಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲ: ಬಿಜೆಪಿ ಶಾಸಕ
ತಿನ್ನದಿರುವ ಹಕ್ಕು ನಮಗೂ ಇದೆ
ಗುಹಾ ಅವರಿಗೆ ದನದ ಮಾಂಸ ತಿನ್ನುವ ಹಕ್ಕಿದ್ದರೆ, ಅದನ್ನು ತಿನ್ನದೇ ಇರುವ ಹಕ್ಕು ನನಗೂ ಇದೆ. ಅವರು ತಮ್ಮ ಆಹಾರ ಪದ್ಧತಿಗೆ ಎಲ್ಲರೂ ಗೌರವ ನೀಡಬೇಕೆಂದು ಬಯಸಿದರೆ, ನನ್ನ ಆಹಾರ ಪದ್ಧತಿಗೂ ಅಷ್ಟೇ ಗೌರವ ಸಿಗಬೇಕೆಂದು ಬಯಸುವುದು ಕೂಡ ನನ್ನ ಹಕ್ಕು. ದನ ಮಾಂಸ ಕುರಿತಂತೆ ಕಿಚಾಯಿಸುವುದು ತಪ್ಪಾದರೆ, (ಗೋ ಹತ್ಯೆ ಮಾಡುವವರನ್ನು) ಕೊಂದು ಹಾಕುವುದು ಇನ್ನೂ ದೊಡ್ಡ ಅಪರಾಧ. ಎರಡನ್ನೂ ಪ್ರೋತ್ಸಾಹಿಸಬಾರದು ಎಂದು ರಾಮ್ ಎಂಬುವವರು ಧುಮೆ ಮತ್ತು ಗುಹಾ ಅವರಿಗೆ ತಿರುಗೇಟು ನೀಡಿದ್ದಾರೆ.
ಪಾಕ್ ನಲ್ಲಿ ಕಾಮೆಂಟ್ ಮಾಡಲು ಧೈರ್ಯವಿದೆಯೆ
ರಾಮಚಂದ್ರ ಗುಹಾ ಅವರೇ, ಯಾವುದೇ ನಿಷೇಧಿತ ತಿಂಡಿಯ ಬಗ್ಗೆ ಪಾಕಿಸ್ತಾನದಲ್ಲಿ ಈ ರೀತಿ ಕಾಮೆಂಟ್ ಮಾಡಿ ನಿಮಗೆ ಅವರು ಟ್ವೀಟ್ ಡಿಲೀಟ್ ಮಾಡಲು ಕೂಡ ಅವಕಾಶ ನೀಡುವುದಿಲ್ಲ. ಏಕೆಂದರೆ, ಅವರು ವಿಭಿನ್ನ ರೀತಿಯಲ್ಲಿಯೇ ಡಿಲೀಟ್ ಮಾಡುತ್ತಾರೆ. ಅರಿವು ಶ್ರೀರಾಮ ನಮಗೆ ನೀಡಿರುವ ನಿಜವಾದ ಕೊಡುಗೆ. ರಾಮಚಂದ್ರ ಗುಹಾ ಅವರೆ ಅರಿತುಕೊಳ್ಳಿ. ಆದರೆ ಈ ಬುದ್ಧಿಜೀವಿಗಳು ಅರಿತುಕೊಳ್ಳುವುದೆಂದರೇನು? ಅವರಿಂದ ಸಾಧ್ಯವೇ ಇಲ್ಲ ಎಂದು ಅನಿಲ್ ಖನ್ನಾ ಎಂಬುವವರು ರಾಮಚಂದ್ರ ಗುಹಾ ಅವರನ್ನು ವ್ಯಂಗ್ಯವಾಡಿದ್ದಾರೆ.
ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದ ಮುಸ್ಲಿಂ ಮುಖಂಡ
ನಿಮ್ಮ ಬಗ್ಗೆ ನಾನೆಷ್ಟು ತಪ್ಪು ತಿಳಿದಿದ್ದೆ
ಭಾರತೀಯ ಜನತಾ ಪಕ್ಷ ಆಷಾಢಭೂತಿ? ರಾಮಚಂದ್ರ ಗುಹಾ ಸರ್ ನೀವು ಆರಾಮವಾಗಿದ್ದೀರಾ? ನೀವು ಬುದ್ಧಿವಂತರು ಮತ್ತು ಪ್ರಜ್ಞಾವಂತರು ಎಂದು ನಾನು ತಿಳಿದಿದ್ದೆ. ಆದರೆ ನನ್ನ ಗ್ರಹಿಕೆ ತಪ್ಪು. ನಾನೆಷ್ಟು ತಪ್ಪು ಮಾಡಿದ್ದೆ ಎಂದು ಈಗ ಅನ್ನಿಸುತ್ತಿದೆ ಎಂದು ಅಪರ್ಣಾ ಎಂಬುವವರು ಟ್ವೀಟ್ ಮಾಡಿದ್ದಾರೆ. ನಿಮ್ಮ ಮನಸ್ಥಿತಿ ಎಂಥದ್ದೆಂದು ನೀವು ತೋರಿಸಿಕೊಟ್ಟಿದ್ದೀರಿ ಗುಹಾ ಅವರೆ. ಈಗ ನಿಮ್ಮ ಟ್ವೀಟನ್ನು ಡಿಲೀಟ್ ಮಾಡಿ ಏನು ಪ್ರಯೋಜನ ಎಂದು ಮುಕುಂದ ಎನ್ನುವವರು 'ಸೆಲೆಬ್ರಿಟಿ' ಗುಹಾ ಅವರ ಬುದ್ಧಿವಾದ ಹೇಳಿದ್ದಾರೆ.
ಸೆಲೆಬ್ರಿಟಿ ಗುಹಾಗೆ ಇದೆಲ್ಲ ಬೇಕಿತ್ತಾ?
ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಏನೋ ಆಯಿತೆನ್ನುವ ಹಾಗೆ ಸಲ್ಲದ ವಿವಾದ ಖ್ಯಾತ ಲೇಖಕ, ಇತಿಹಾಸಕಾರ, ಅಂಕಣಕಾರ, ಪರಿಸರವಾದಿ ರಾಮಚಂದ್ರ ಗುಹಾ ಅವರು ಸಿಲುಕಿಕೊಂಡಿದ್ದಾರೆ. ಇಂಡಿಯಾ ಆಫ್ಟರ್ ಗಾಂಧಿ, ಗಾಂಧಿ ಬಿಫೋರ್ ಇಂಡಿಯಾ, ಗಾಂಧಿ : ದಿ ಈಯರ್ಸ್ ದಟ್ ಚೇಂಜ್ಡ್ ದಿ ವರ್ಲ್ಡ್ ಮುಂತಾದ ಪುಸ್ತಕದ ಕರ್ತೃ, ಸೆಲೆಬ್ರಿಟಿ ಲೇಖಕ ಗುಹಾ ಅವರಿಗೆ, ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಂಡ ಹಾಗೆ ಇದೆಲ್ಲ ಬೇಕಿತ್ತಾ? ಅಂದ ಹಾಗೆ, ಇಂಡಿಯಾ ಆಫ್ಟರ್ ಗಾಂಧಿ ಪುಸ್ತಕ ಹಿಂದಿ, ಬಂಗಾಳಿ, ತಮಿಳಿನಲ್ಲಿ ಭಾಷಾಂತರಗೊಂಡಿದೆ.